ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ತೃಪ್ತಿ ಲೇಔಟ್ ನ ನಿವಾಸಿ ಹಸೀನಾ ಮತ್ತು ಅವರ ಮೂವರು ಮಕ್ಕಳನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಂದ ಆರೋಪಿ, ಸಾಂಗ್ಲಿ ಮೂಲದ ಪ್ರವೀಣ್ ಚೌಗುಲೆಯನ್ನು ಪೊಲೀಸರು ಗುರುವಾರ ತೃಪ್ತಿ ಲೇಔಟಿಗೆ ಕರೆ ತಂದಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನೂರಾರು ಮಂದಿ ಜಮಾಯಿಸಿದರು.
ಈ ಸಂದರ್ಭ ಕೆಲವರು ಆರೋಪಿಯನ್ನು ವಿಚಾರಣೆ ನಡೆಸಿ, ಸಾಕ್ಷ್ಯ ಇಲ್ಲ ಎಂದು ನಂತರ ಬಿಟ್ಟು ಬಿಡುತ್ತೀರಿ, ಆದ್ದರಿಂದ ಆತನನ್ನು ನಮ್ಮ ಕೈಗೆ ಕೊಡಿ ನಾವು ಶಿಕ್ಷೆ ಕೊಡುತ್ತೇವೆ ಎಂದು ಜೋರಾಗಿ ಪೊಲೀಸರಿಗೆ ಹೇಳಿದರು.ಸ್ಥಳದಲ್ಲಿ ಜನರ ಸಂಖ್ಯೆ ಹೆಚ್ಚುತ್ತಿದ್ದಂತೆ ಜನರ ಆಕ್ರೋಶ ಹೆಚ್ಚಾಯಿತು, ಒಂದು ಹಂತದಲ್ಲಿ ಜನರು ಆರೋಪಿಯನ್ನು ಕುಳ್ಳಿರಿಸಿದ್ದ ಪೊಲೀಸ್ ವಾಹನವನ್ನು ಸುತ್ತುವರಿದು ತಳ್ಳತೊಡಗಿದರು. ಈ ಸಂದರ್ಭ ಪೊಲೀಸರು ಜನರನ್ನು ಚದುರಿಸಲು ಅನಿವಾರ್ಯವಾಗಿ ಲಘುವಾಗಿ ಲಾಠಿ ಬೀಸಬೇಕಾಯಿತು, ಕೆಲವು ಜನರು ಲಾಠಿ ಏಟು ತಿನ್ನಬೇಕಾಯಿತು.
30 ಸೆಕುಂಡು ಕೊಡಿ ಸಾಕು
ಇದೀಗ ಆರೋಪಿ ಪ್ರವೀಣ್ ಚೌಗುಲೆ ಮತ್ತು ಕೊಲೆಯಾದ ಅಯ್ನಾಝ್ ಜೊತೆಯಾಗಿ ಏರ್ ಇಂಡಿಯಾ ವಿಮಾಮದಲ್ಲಿ ಕೆಲಸ ಮಾಡುತ್ತಿದ್ದ ವಿಡಿಯೋ ಕೂಡ ಬಹಿರಂಗವಾಗಿದೆ.
ಕೊಲೆಯಾದ ಅಯ್ನಾಝ್ ಅದೇ ಸಂಸ್ಥೆಯಲ್ಲಿ ಗಗನಸಖಿಯಾಗಿ ಪ್ರಯಾಣಿಕರ ಸೇವೆ ಮಾಡುತ್ತಿದ್ದಳು. ಪ್ರಯಾಣಿಕರ ರಕ್ಷಣೆಯ ಹೊಣೆ ಹೊತ್ತಿದ್ದ ಚೌಗುಲೆ ಇದೀಗ ತನ್ನ ಸಹುದ್ಯೋಗಿ ಮತ್ತು ಆಕೆಯ ಕುಟುಂಟದ ಇತರ 3 ಮಂದಿಯನ್ನು ಕೊಲೆ ಮಾಡಿದ್ದು ವಿಪರ್ಯಾಸ.