ಕನ್ನಡಪ್ರಭ ವಾರ್ತೆ ತುಮಕೂರು
ನಗರ ಪಾಲಿಕೆಯಿಂದ ಪ್ರತಿ ಗುರುವಾರ ನಗರದ ವಿವಿಧ ವಾರ್ಡ್ಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಗುರುವಾರ ಮರಳೂರು, ಸದಾಶಿವನಗರ, ಮೆಳೆಕೋಟೆ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರ ಪಾಲಿಕೆಯ ಪ್ರಭಾರ ಆಯುಕ್ತ ಯೋಗಾನಂದ್ ಅವರು, ಸರ್ಕಾರದ ಸೂಚನೆ ಹಾಗೂ ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರ ನಿರ್ದೇಶನದಂತೆ ಪ್ರತಿ ಗುರುವಾರ ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿ ಸ್ವಚ್ಛ ನಗರ ನಿರ್ಮಾಣ ಮಾಡುವ ಕಾರ್ಯಕ್ರಮ ಆರಂಭಿಸಲಾಗಿದೆ ಎಂದರು.
ಪ್ರತಿ ಗುರುವಾರದ ಸ್ವಚ್ಛತಾ ಕಾರ್ಯಕ್ಕಾಗಿ ಪಾಲಿಕೆಯ 80 ಪೌರಕಾರ್ಮಿಕರು, ಕಸ ತುಂಬಿ ಸಾಗಿಸುವ ಆಟೋಗಳು, ಟ್ರಾಕ್ಟರ್ಗಳನ್ನು ಬಳಸಿಕೊಳ್ಳಲಾಗುತ್ತದೆ. ಚರಂಡಿಯಲ್ಲಿ ತುಂಬಿರುವ ಕಸ ತೆರವು, ಕ್ರಿಮಿನಾಶಕಗಳ ಸಿಂಪರಣೆ, ರಸ್ತೆ ಸ್ವಚ್ಛತೆ, ರಸ್ತೆ ಬದಿ ಬೆಳೆದಿರುವ ಪೊದೆಗಳ ತೆರವು ಮಾಡಲಾಗುವುದು. ಜೊತೆಗೆ ನಗರ ಸ್ವಚ್ಛತೆ ಬಗ್ಗೆ ನಾಗರೀಕರಲ್ಲಿ ಅರಿವು ಮೂಡಿಸಲಾಗುತ್ತದೆ. ಪ್ರತಿ ಗುರುವಾರ ಮೂರು ವಾರ್ಡ್ಗಳಲ್ಲಿ ಸ್ವಚ್ಛತೆಗೆ ಗುರಿ ಹೊಂದಲಾಗಿದೆ, ಎಲ್ಲಾ 35 ವಾಡ್ಗಳು ಮುಗಿದ ನಂತರ ಮತ್ತೊಂದು ಸುತ್ತಿನ ಸ್ವಚ್ಛತೆ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದರು.ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಯೋಗೇಶ್ ಮಾತನಾಡಿ, ಸ್ವಚ್ಛ ನಗರ ನಿರ್ಮಾಣದಲ್ಲಿ ನಾಗರೀಕರ ಸಹಕಾರ ಮುಖ್ಯ, ರಸ್ತೆ, ಖಾಲಿ ನಿವೇಶನ, ಸಾರ್ವಜನಿಕ ಜಾಗಗಳಲ್ಲಿ ಕಸ ಸುರಿಯಬಾರದು, ಮನೆಯ ಒಣ, ಹಸಿ ಕಸವನ್ನು ವಿಂಗಡಿಸಿ ಮನೆ ಬಾಗಿಲಿಗೆ ಬರುವ ಕಸದ ಗಾಡಿಗೇ ಹಾಕಬೇಕು ಎಂದು ಮನವಿ ಮಾಡಿದರು.
ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಆರೋಗ್ಯವಂತರಾಗಿ ಬಾಳಬಹುದು. ತುಮಕೂರನ್ನು ಕಸಮುಕ್ತ ನಗರವನ್ನಾಗಿ ಮಾಡಲು ನಾಗರೀಕರು ಸಹಕಾರ ನೀಡಬೇಕು ಎಂದು ಕೋರಿದರು.ನಗರ ಪಾಲಿಕೆಯ ಸಿಬ್ಬಂದಿ ಈ ವೇಳೆ ಹಾಜರಿದ್ದರು.
ಪೋಟೋತುಮಕೂರು ನಗರ ಪಾಲಿಕೆಯಿಂದ ನಗರದ ವಿವಿಧ ವಾರ್ಡ್ಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.