ರಾಮನಗರ: ನಗರದಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣಕ್ಕಾಗಿ ನಗರದಲ್ಲಿ ಬಳಕೆ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಎಲ್ಲರು ಬಟ್ಟೆ ಬ್ಯಾಗ್ ಗಳನ್ನೇ ಉಪಯೋಗಿಸಬೇಕು. ಹೀಗಾಗಿ 27 ಸಾವಿರ ಮನೆಗಳಿಗೆ ಬಟ್ಟೆ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ಪ್ರತಿಯೊಬ್ಬರು ತರಕಾರಿ, ಹಣ್ಣು, ದಿನಸಿ ಪದಾರ್ಥಗಳನ್ನು ಖರೀದ ಮಾಡುವಾಗ ಈ ಬಟ್ಡೆ ಬ್ಯಾಗ್ ಗಳನ್ನು ಮನೆಯಿಂದ ತೆಗೆದುಕೊಂಡು ಹೋಗಬೇಕು. ಪ್ಲಾಸ್ಟಿಕ್ ಕೈಚೀಲ ಗಳನ್ನು ನೀಡದಂತೆ ವ್ಯಾಪಾರಿಗಳಿಗೆ ತಿಳಿಸಬೇಕು ಎಂದು ಹೇಳಿದರು.
ಪ್ರತಿದಿನ ಉತ್ಪಾದನೆ ಯಾಗುತ್ತಿರುವ ತ್ಯಾಜ್ಯದಲ್ಲಿ ಏಕಬಳಕೆ ಪ್ಲಾಸ್ಟಿಕ್ ಕೈ ಚೀಲ ಮತ್ತು ವಸ್ತುಗಳ ಪ್ರಮಾಣ ಶೇ.50ರಷ್ಟು ಇದೆ. ಪ್ಲಾಸ್ಟಿಕ್ ಪರಿಸರದಲ್ಲಿ ಕೊಳೆಯದ ಕಾರಣ ಸಾಕಷ್ಟು ಸಮಸ್ಯೆ ತಂದೊಡ್ಡುತ್ತಿದೆ. ಪ್ಲಾಸ್ಟಿಕ್ ಕವರ್ ಗಳು ಚರಂಡಿಯಲ್ಲಿ ಸಿಕ್ಕಿ ಹಾಕಿಕೊಂಡು ಚರಂಡಿ ನೀರು ಹರಿಯಲು ಸಮಸ್ಯೆಯಾಗಿದೆ. ಪ್ಲಾಸ್ಟಿಕ್ ಮುಕ್ತ ವಾಗಿಸುವ ಮೂಲಕ ಸ್ವಚ್ಛ ರಾಮನಗರ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸ ಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ನಗರಸಭಾ ಉಪಾಧ್ಯಕ್ಷೆ ಆಯೀಷಾಬಾನು, ಸದಸ್ಯರಾದ ಬಿ.ಸಿ.ಪಾರ್ವತಮ್ಮ,ನಾಗಮ್ಮ, ಪದ್ಮಶ್ರೀ, ಗಿರಿಜಮ್ಮ, ಪೌರಾಯುಕ್ತ ಡಾ.ಜಯಣ್ಣ, ನಗರಸಭೆ ಪರಿಸರ ಅಭಿಯಂತರ ಸುಬ್ರಮಣ್ಯ ಮುಂತಾದವರು ಇದ್ದರು.
ರಾಮನಗರದಲ್ಲಿ ನಗರಸಭಾ ಅಧ್ಯಕ್ಷ ಕೆ.ಶೇಷಾದ್ರಿ ಸಾರ್ವಜನಿಕರಿಗೆ ಬಟ್ಟೆ ಬ್ಯಾಗ್ ವಿತರಿಸಿದರು.