ಕಾರವಾರದಲ್ಲಿ ಹೈಮಾಸ್ಟ್ ದೀಪ ದುರಸ್ತಿಗೆ ಮುಂದಾದ ಸಿಎಂಸಿ

KannadaprabhaNewsNetwork | Published : Oct 21, 2024 12:32 AM

ಸಾರಾಂಶ

ಕಾರವಾರದ ಲಂಡನ್ ಬ್ರಿಡ್ಜ್‌ನಿಂದ ಹನುಮಾನ್ ಸ್ಟ್ಯಾಚುವರೆಗೆ ಅಂದಾಜು ೩ ಕಿಮೀ ದೂರದಲ್ಲಿ ೪ ಹೈಮಾಸ್ಟ್ ದೀಪಗಳಿದ್ದರೂ ಉರಿಯದೇ ಪ್ರಯೋಜನಕ್ಕೆ ಬಾರದಂತಾಗಿತ್ತು.

ಕಾರವಾರ: ಇಲ್ಲಿನ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಹಾಕಲಾಗಿದ್ದ ಹೈಮಾಸ್ಟ್ ವಿದ್ಯುತ್ ದೀಪ ಕಳೆದ ಹಲವಾರು ತಿಂಗಳಿನಿಂದ ಹಾಳಾಗಿತ್ತು. ಈಗ ಅದನ್ನು ದುರಸ್ತಿ ಮಾಡುವ ಕಾರ್ಯಕ್ಕೆ ನಗರಸಭೆಯವರು ಮುಂದಾಗಿದ್ದಾರೆ.ಕನ್ನಡಪ್ರಭದಲ್ಲಿ ತಿಂಗಳ ಹಿಂದೆ ಟಾಗೋರ ಕಡಲ ತೀರದಲ್ಲಿ ಕತ್ತಲು, ಅಕ್ರಮಕ್ಕೆ ರಹದಾರಿ ಎನ್ನುವ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಲಾಗಿತ್ತು.

ನಗರದ ಲಂಡನ್ ಬ್ರಿಡ್ಜ್‌ನಿಂದ ಹನುಮಾನ್ ಸ್ಯ್ಟಾಚುವರೆಗೆ ಅಂದಾಜು ೩ ಕಿಮೀ ದೂರದಲ್ಲಿ ೪ ಹೈಮಾಸ್ಟ್ ದೀಪಗಳಿದ್ದರೂ ಉರಿಯದೇ ಪ್ರಯೋಜನಕ್ಕೆ ಬಾರದಂತಾಗಿತ್ತು. ಇದರಿಂದ ತೀರದಲ್ಲಿ ವಾಯುವಿಹಾರ ಮಾಡುವವರಿಗೂ ತೊಂದರೆ ಉಂಟಾಗುತ್ತಿತ್ತು. ಜತೆಗೆ ಮದ್ಯ ಸೇವನೆಯಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿತ್ತು. ನಗರಸಭೆಯಿಂದ ₹೧೪ ಲಕ್ಷ ವೆಚ್ಚದಲ್ಲಿ ಹೈಮಾಸ್ಟ್ ದೀಪ ಹಾಗೂ ಬೀದಿದೀಪವನ್ನು ದುರಸ್ತಿ ಮಾಡಿಸಲಾಗುತ್ತಿದೆ. ಸ್ಥಳೀಯರು, ಪ್ರವಾಸಿಗರು ಸೇರಿ ನಿತ್ಯ ಸಾವಿರಾರು ಜನರು ಸಂಜೆ ವೇಳೆ ತೀರಕ್ಕೆ ಬಂದರೆ ವಿದ್ಯುತ್ ಇಲ್ಲದೇ ತೊಂದರೆ ಅನುಭವಿಸುತ್ತಿದ್ದರು. ಪುಟಾಣಿಗಳು ಕೂಡಾ ತೀರದಲ್ಲಿ ಮರಳಿನಲ್ಲಿ ಆಟವಾಡಲು ಸಂತಸದಿಂದ ಬಂದರೆ ಕತ್ತಲೆಯಿಂದಾಗಿ ನಿರಾಸೆಯಿಂದ ತೆರಳುವಂತೆ ಆಗುತ್ತಿತ್ತು. ಹೈಮಾಸ್ಟ್ ಕಂಬಗಳನ್ನು ತೀರದಲ್ಲಿ ತಂದು ಹಾಕಲಾಗಿದ್ದು, ಕೇಬಲ್ ಬದಲಾವಣೆ ಹಾಗೂ ಹಾಳಾದ ಬಲ್ಬ್‌ಗಳ ಬದಲಾವಣೆ ಮಾಡಲಾಗುತ್ತಿದೆ. ಕೆಲವೇ ದಿನದಲ್ಲಿ ಕಡಲ ತೀರದಲ್ಲಿ ವಿದ್ಯುತ್ ದೀಪ ಉರಿಯುವ ನಿರೀಕ್ಷೆಯಿದೆ.ಅಪರೂಪಕ್ಕೆ ಪತ್ತೆಯಾದ ರಣಹದ್ದು

ಕಾರವಾರ: ವಿನಾಶದ ಅಂಚಿನಲ್ಲಿರುವ ರಣಹದ್ದು ಬಹುಕಾಲದ ತರುವಾಯ ಕುಮಟಾದ ಮಿರ್ಜಾನ್ ಬಳಿ ಭಾನುವಾರ ಪತ್ತೆಯಾಗಿದೆ.

ಮಿರ್ಜಾನ್ ಖೈರೆ ಕ್ರಾಸ್‌ನಿಂದ ಶಿರಸಿಗೆ ತೆರಳುವ ರಸ್ತೆಯ ಪಕ್ಕ ಎತ್ತರದ ಸ್ಥಳದಲ್ಲಿ ಒಂದು ರಣಹದ್ದು ಕುಳಿತುಕೊಂಡಿದ್ದರೆ, ಹತ್ತಾರು ಕಾಗೆಗಳು ಆ ರಣಹದ್ದನ್ನು ಸುತ್ತುವರಿದಿದ್ದವು.ಕಾಗೆಗಳು ಸುತ್ತುವರಿದಿದ್ದರೂ ಕೆಲ ಸಮಯ ನಿರ್ಭೀತಿಯಿಂದ ಕುಳಿತಿದ್ದ ರಣಹದ್ದು ಸಾರಿಗೆ ಬಸ್ ಬರುತ್ತಿದ್ದಂತೆ ಹಾರಿಹೋಗಿದೆ. ಬರಗದ್ದೆಯ ಪ್ರಗತಿಪರ ಕೃಷಿಕ ಪ್ರದೀಪಕುಮಾರ ಹೆಗಡೆ ಅಪರೂಪಕ್ಕೆ ಕಾಣಿಸಿದ ಈ ಹದ್ದನ್ನು ವೀಕ್ಷಿಸಿ ಫೋಟೋ ಕ್ಲಿಕ್ಕಿಸಿದ್ದಾರೆ. ರಣಹದ್ದುಗಳು ಈ ಪ್ರದೇಶದಿಂದ ಕಣ್ಮರೆಯಾಗಿವೆ ಎಂದುಕೊಂಡಿರುವಾಗ ಒಂದು ಹದ್ದು ಕಾಣಿಸಿರುವುದು ಪಕ್ಷಿಪ್ರೇಮಿಗಳಲ್ಲಿ ಸಂತಸ, ಕುತೂಹಲಕ್ಕೆ ಕಾರಣವಾಗಿದೆ.

ರಣಹದ್ದು ಎರಡು ಮೂರು ದಶಕಗಳಿಂದ ಉತ್ತರ ಕನ್ನಡದಲ್ಲಿ ಕಣ್ಮರೆಯಾಗಿವೆ. ಹಿಂದೆಲ್ಲ ಜಾನುವಾರುಗಳು, ಪ್ರಾಣಿಗಳು ಮೃತಪಟ್ಟಲ್ಲಿ ನೂರಾರು ರಣಹದ್ದುಗಳು ಸುತ್ತುವರಿದು ಭಕ್ಷಿಸುತ್ತಿದ್ದವು. ಜಾನುವಾರುಗಳಿಗೆ ನೀಡುವ ನೋವು ನಿವಾರಕಗಳಿಂದಾಗಿ ಜಾನುವಾರುಗಳ ಕಳೇಬರವನ್ನು ತಿನ್ನುವ ರಣಹದ್ದುಗಳ ಕಿಡ್ನಿ ವೈಫಲ್ಯದಿಂದ ಹದ್ದುಗಳು ಸಾವಿಗೀಡಾಗುತ್ತಿವೆ ಎನ್ನುವ ಅಂಶವನ್ನು ಅಧ್ಯಯನ ವರದಿಯೊಂದು ಹೊರಹಾಕಿದೆ.

Share this article