ಕೊಪ್ಪಳ: ಜಿಲ್ಲಾದ್ಯಂತ ವಾಣಿಜ್ಯ ಸಿಲಿಂಡರ್ ಸಮಸ್ಯೆ ಗೋಳು ತಪ್ಪುತ್ತಲೇ ಇಲ್ಲ. ಎಲ್ಪಿಜಿ ಗ್ಯಾಸ್ ಲಭ್ಯವಾಗದೆ ಇರುವುದರಿಂದ ಆಟೋ ಗ್ಯಾಸ್ ಸಿಗುತ್ತಿಲ್ಲ ಮತ್ತು ಕೆಲ ಪೆಟ್ರೋಲ್ ಬಂಕ್ ಬಂದ್ ಇರುವುದು ಸಮಸ್ಯೆಯಾಗಿದೆ.
ಕೆಲವರಂತೂ ಹಳೆಯ ಕಾಲದ ಸೌದೆ ಒಲೆಯಂತೆ ಬಳಕೆ ಮಾಡುತ್ತಿದ್ದರೆ ಇನ್ನು ಕೆಲವರು ಅತ್ಯಾಧುನಿಕ ಸೌದೆ ಒಲೆ ಬಳಕೆ ಮಾಡುತ್ತಿದ್ದಾರೆ. ಅತ್ಯಾಧುನಿಕ ಸೌದೆ ಒಲೆ ಸಿಗದೆ ಇರುವುದರಿಂದ ತಾವೇ ಸಿದ್ಧ ಮಾಡಿಕೊಳ್ಳುವ ಪ್ರಯೋಗ ಮಾಡುತ್ತಿದ್ದಾರೆ.
ನಗರದ ಹೋಟೆಲ್ ಮಾಲಿಕ ಗಿರೀಶ್ ಎನ್ನುವವರು ತಾವೇ ಸೌದೆ ಒಲೆಯೊಂದನ್ನು ಸಿದ್ಧ ಮಾಡಿಕೊಂಡಿದ್ದು, ಅತ್ಯುತ್ತಮವಾಗಿದೆ ಎನ್ನುತ್ತಾರೆ. ಇದರಿಂದ ನಮಗೆ ಅಡುಗೆ ಮಾಡಲು ಅನುಕೂಲವಾಗಿದ್ದು, ಸಮಸ್ಯೆಯಿಂದ ಪಾರಾಗುವಂತೆ ಆಗಿದೆ ಎನ್ನುತ್ತಾರೆ.ಸಿಲಿಂಡರ್ ಇಲ್ಲದೆ ಅಡುಗೆ ಮಾಡಲು ಆಗದೆ ಹೋಟೆಲ್ ಬಂದ್ ಮಾಡಿದ್ದೆವು, ಆದರೆ, ಈಗ ನಾವೇ ಸಿದ್ಧ ಮಾಡಿಕೊಂಡಿರುವ ಒಲೆಯ ಮೂಲಕ ಇಡ್ಲಿ, ಸಾಂಬರ್ ಮಾಡುತ್ತಿದ್ದೇವೆ ಎನ್ನುತ್ತಾರೆ.
ದುಬಾರಿಯಾದ ಇಡ್ಲಿ, ವಡಾ: ಸಾಮಾನ್ಯವಾಗಿ ಫುಟಪಾತ್ ಹೋಟೆಲ್ ನಲ್ಲಿ ಐದು ರುಪಾಯಿಗೆ ಒಂದು ಇಡ್ಲಿ, ಪ್ಲೇಟ್ ಇಡ್ಲಿಗೆ ₹10 ಇತ್ತು. ಆದರೆ, ಈಗ ಹತ್ತು ರುಪಾಯಿಗೆ ಸಿಂಗಲ್ ಮತ್ತು ಪ್ಲೇಟ್ ಗೆ ₹20 ರುಪಾಯಿ ಮಾಡಿದ್ದಾರೆ. ಎಲ್ಲದಕ್ಕೂ ಒಂದೇ ಉತ್ತರ ಗ್ಯಾಸ್ ಸಿಗುತ್ತಿಲ್ಲ. ಸಿಕ್ಕರೂ ದುಬಾರಿ. ಹೀಗಾಗಿ, ನಾವು ದರ ಏರಿಸಿದ್ದೇವೆ ಎನ್ನುತ್ತಾರೆ ಹೋಟೆಲ್ ಮಾಲಿಕರು.