ಮಾಗಡಿ: ತಳ ಹಾಗೂ ಬುಡಕಟ್ಟು ಸಮುದಾಯಗಳು ತಮ್ಮೊಳಗಿನ ಸಣ್ಣಪುಟ್ಟ ವೈಮನಸ್ಸುಗಳನ್ನು ಬದಿಗೊತ್ತಿ ಸಂಘಟಿತರಾದಾಗ ಮಾತ್ರ ಸಮಾಜದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ರಾಜ್ಯ ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಚಂದ್ರಗಿರಿ ಅಭಿಪ್ರಾಯಪಟ್ಟರು.
ತಾಲ್ಲೂಕು ಅಧ್ಯಕ್ಷ ಬಸವೇನಹಳ್ಳಿ ಸುರೇಶ್ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಸೂಕ್ತ ಜಾತಿ ಪ್ರಮಾಣ ಪತ್ರ ಸಿಗದೆ ಹಲವು ಸರ್ಕಾರಿ ಸೌಲಭ್ಯಗಳಿಂದ ವಂಚಿತನಾಗಿದ್ದೆ. ನನ್ನಂತೆಯೇ ಸಮುದಾಯದ ಇತರ ಮಕ್ಕಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಹಿರಿಯರಾದ ನಿವೃತ್ತ ಶಿಕ್ಷಕ ದೊಡ್ಡಬಾಣಗೆರೆ ಮಾರಣ್ಣ ಅವರ ನೆರವಿನಿಂದ ದಾಖಲೆಗಳನ್ನು ಸಂಗ್ರಹಿಸಿ, ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಯಿತು ಎಂದರು.
ಶಾಸಕ ಬಾಲಕೃಷ್ಣ ಅವರ ಕಾಳಜಿಯಿಂದಾಗಿ ತಾಲೂಕಿನಲ್ಲಿ ಈಗಾಗಲೇ 2,000ಕ್ಕೂ ಹೆಚ್ಚು ಮಂದಿಗೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ದೊರೆತಿದೆ. ಅಷ್ಟೇ ಅಲ್ಲದೆ, ಗೊಲ್ಲರಹಟ್ಟಿಗಳ ಅಭಿವೃದ್ಧಿಗೆ ಸುಮಾರು ₹ 20 ಕೋಟಿ ಅನುದಾನ ಮಂಜೂರಾಗಿದೆ. ಶೀಘ್ರದಲ್ಲೇ ಭೂಮಿ ಪೂಜೆ ನಡೆಯಲಿದೆ. ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ 20 ಗುಂಟೆ ಜಮೀನು ಕಾಯ್ದಿರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ನಾರಾಯಣಪ್ಪ, ಶ್ರೀಪತಿಹಳ್ಳಿ ನಾಗರಾಜು, ರಾಜಣ್ಣ, ತಟವಾಳ್ ಚಿತ್ತಣ್ಣ, ಪುಟ್ಟರಾಜು, ಮತ್ತಿಕೆರೆ ಕುಮಾರ್, ಆಗಲಕೋಟೆ ನಾಗರಾಜಪ್ಪ, ಲೋಕೇಶ್, ಅದರಂಗಿ ಕೃಷ್ಣಪ್ಪ, ಬೈಲಪ್ಪ, ಪ್ರಭು ಹೇಮಂತ, ಹನುಮಯ್ಯ, ಹೊಸಹಳ್ಳಿ ಹನುಮಂತರಾಜು, ಸಂಪಿಗೆ ಮರದ ಹಟ್ಟಿ ನವೀನ್, ಧನಂಜಯ, ಗೋಪಾಲ್, ಪೋಲೋಹಳ್ಳಿ ಶಿವಣ್ಣ, ಕೆಂಗಲ್, ಜಯಣ್ಣ, ದೊಳ್ಳಯ್ಯ, ನಿಂಗರಾಜು, ಪಾಳ್ಯ ರಾಜಣ್ಣ, ಪ್ರಸಾದಿ, ಅತ್ತಿಂಗೆರೆ ಗೋಪಾಲ್ ಉಪಸ್ಥಿತರಿದ್ದರು.
ಮಾಗಡಿಯಲ್ಲಿ ರಾಜ್ಯ ಕಾಡುಗೊಲ್ಲರ ಸಂಘದ ನೂತನ ತಾಲೂಕು ಅಧ್ಯಕ್ಷ ಬಸವೇನಹಳ್ಳಿ ಸುರೇಶ್ ಅವರನ್ನು ಸಮುದಾಯದ ಮುಖಂಡರು ಅಭಿನಂದಿಸಿದರು.