ಗದಗ: ಲೋಕಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರುಗಳ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ ಕೈಗೊಂಡ ಕಾಮಗಾರಿಗಳ ಕುರಿತಂತೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಜಿಲ್ಲಾಡಳಿತ ಭವನದಲ್ಲಿ ಪ್ರಗತಿ ಪರಿಶೀಲನೆ ಜರುಗಿತು.
ಎಮ್ಪಿ ಹಾಗೂ ಎಮ್ಎಲ್ಸಿ ಪ್ರದೇಶಾಭಿವೃದ್ಧಿ ಅನುದಾನದಡಿ ಕೈಗೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನೆಯು ಕೆಡಿಪಿ ಸಭೆಯಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲಾಗುತ್ತದೆ. ಕೆಡಿಪಿ ವರದಿಯನ್ನು ನೇರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಗಮನಿಸುವರು. ಇದನ್ನೆಲ್ಲ ಅನುಷ್ಟಾನ ಏಜೆನ್ಸಿಗಳು ಗಮನದಲ್ಲಿಟ್ಟುಕೊಂಡು ಕಾಮಗಾರಿಗಳನ್ನು ನಿರ್ವಹಿಸಬೇಕು ಎಂದರು.ಕಾಮಗಾರಿ ನಿರ್ವಹಿಸುವಾಗ ನಿಗದಿಪಡಿಸಿದ ಅವಧಿ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಕಾಮಗಾರಿ ಅನುಷ್ಠಾನದಲ್ಲಿ ತೊಡುಕುಗಳು ಎದುರಾದಲ್ಲಿ ತಕ್ಷಣವೇ ಜಿಲ್ಲಾಡಳಿತದ ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ತರುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. 2022-23 ಹಾಗೂ 2023-24ರ ಆರ್ಥಿಕ ವರ್ಷದಲ್ಲಿ ಕೈಗೊಂಡ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಪೂರ್ಣಗೊಳಿಸಿದ ಮಾಹಿತಿಯನ್ನು ಮುಂದಿನ ಒಂದು ವಾರದೊಳಗಾಗಿ ಗಾಂಧೀ ಸಾಕ್ಷಿ ಪೋರ್ಟಲನಲ್ಲಿ ನಿಯಮಾನುಸಾರ ಛಾಯಾಚಿತ್ರಗಳೊಂದಿಗೆ ಅಪ್ಲೋಡ್ ಮಾಡಬೇಕು. ವಿನಾಕಾರಣ ನೋದಣಿಗೆ ವಿಳಂಬ ಬೇಡ ಎಂದು ಸೂಚಿಸಿದರು. ಕಾಮಗಾರಿ ಪೂರ್ಣಗೊಳಿಸಿದ ಬಗ್ಗೆ ಥರ್ಡ ಪಾರ್ಟಿ ಪರಿಶೀಲನಾ ವರದಿ ಕಡ್ಡಾಯವಾಗಿದೆ. 2023-24 ರ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅನುಷ್ಟಾನ ಏಜೆನ್ಸಿಗಳು ಆಗಸ್ಟ್ 20ರೊಳಗಾಗಿ ಬಾಕಿ ಉಳಿದ ಅಂದಾಜು ಪಟ್ಟಿ ಸಲ್ಲಿಸಬೇಕು. ಜೊತೆಗೆ ಕಾಮಗಾರಿ ಪೂರ್ಣಗೊಳಿಸಿದ ಕುರಿತಂತೆ ಬಳಕೆ ಪ್ರಮಾಣ ಪತ್ರ ನೀಡಬೇಕು. ಕಾಮಗಾರಿ ಬದಲಾವಣೆಗೆ ಬಯಸಿದಲ್ಲಿ ಸಂಬಂಧಿತ ಜನಪ್ರತಿನಿಧಿಗಳಿಂದ ಕಾಮಗಾರಿ ಬದಲಾವಣೆ ಕುರಿತಂತೆ ಮಾಹಿತಿ ಸಲ್ಲಿಸಿ ಕಾಮಗಾರಿ ಮಾರ್ಪಡಿಸಲು ಅವಕಾಶವಿದ್ದು ಅನುಷ್ಠಾನ ಏಜೆನ್ಸಿಗಳು ಈ ಕುರಿತಂತೆ ಸೂಕ್ತ ಕ್ರಮಗಳನ್ನು ವಹಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರ, ಪಿಆರ್ಇಡಿ, ಕೆಆರ್ಐಡಿಎಲ್, ಗ್ರಾಮೀಣ ನೀರು ಸರಬರಾಜು, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಅನುಷ್ಟಾನ ಏಜೆನ್ಸಿ ಹಾಗೂ ಇಲಾಖೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು.