ಮೂರು ಮನೆಗಳಿಗೆ ಹಾನಿ । ಕಂದಾಯ ಇಲಾಖೆ ಭೇಟಿ, ಪರಿಶೀಲನೆ
ಕನ್ನಡಪ್ರಭ ವಾರ್ತೆ ಬೀರೂರುಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಸತತ ಜಿಟಿಮಳೆಗೆ ಬೀರೂರು ಹೋಬಳಿಯಲ್ಲಿ ಮೂರು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ನಾಡಕಚೇರಿಯಲ್ಲಿ ವರದಿಯಾಗಿದೆ.
ಹೋಬಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಮಳೆಯ ಹೊಡೆತಕ್ಕೆ ಎಮ್ಮೆದೊಡ್ಡಿ ಹಳೇಸಿದ್ದರಹಳ್ಳಿಯ ರೇವಣಸಿದ್ದಪ್ಪ, ಚಿಕ್ಕಿಂಗಳ ಹಾಗೂ ಬೀರೂರು ಗ್ರಾಮದ ಅಶೋಕ ನಗರ ನಿವಾಸಿ ಮುತ್ತುಲಕ್ಷ್ಮಿ ಸೇರಿದಂತೆ 3 ಮನೆಗಳ ಗೋಡೆಗಳು ಬಿದ್ದಿದ್ದು ಯಾವುದೇ ಅನಾಹುತಗಳು ಸಂಭವಿಸಿಲ್ಲ.ನಾಡಕಚೇರಿಗೆ ದೂರು ಸಲ್ಲಿಕೆಯಾಗುತ್ತಿದ್ದಂತೆ ಘಟನ ಸ್ಥಳಕ್ಕೆ ಕಂದಾಯಾಧಿಕಾರಿ ಶ್ರೀನಿವಾಸ್, ಗ್ರಾಮ ಲೆಕ್ಕಿಗ ಸುರೇಶ್ ಭೇಟಿ ನೀಡಿ, ಕುಟುಂಬದ ಮುಖ್ಯಸ್ಥರಿಂದ ಮಾಹಿತಿ ಪಡೆದು, ನೆರೆ ಪರಿಹಾರಕ್ಕಾಗಿ ತಾಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಜತೆಗೆ ಮಳೆ ಹಾನಿಯಿಂದಾ ಹೋಬಳಿಯಲ್ಲಿ ಯಾವುದೇ ಪ್ರಾಣಹಾನಿ, ಬೆಳೆಹಾನಿಯಾಗಿಲ್ಲ ಎಂದು ಪತ್ರಿಕೆಗೆ ಮಾಹಿತಿ ನೀಡಿದರು.
4 ವರ್ಷವಾದ್ರು ಬಿಡುಗಡೆಯಾಗದ ನೆರೆ ಸಂತ್ರಸ್ತರ ಪರಿಹಾರ:ಕಳೆದ ನಾಲ್ಕು ವರ್ಷಗಳ ಹಿಂದೆ ಹೋಬಳಿಯ ಚಿಕ್ಕಿಂಗಳ ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ಎಕೆ ಕಾಲೋನಿಯ ಗುಳ್ಳಪ್ಪ ಎಂಬುವವರ ಮನೆ ಸಂಪೂರ್ಣ ಹಾನಿಯಾಗಿತ್ತು, ತಾಲೂಕು ಕಂದಾಯ ಅಧಿಕಾರಿಗಳು ಭೇಟಿ ನೀಡಿ 5 ಲಕ್ಷ ರು. ಪರಿಹಾರ ನೆರೆ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ವರದಿ ಮಾಡಿ, ನಂತರ ಬರೀ 96 ಸಾವಿರ ರು.ವನ್ನು ಸರ್ಕಾರದಿಂದ ಮೊದಲ ಕಂತಾಗಿ ಬಿಡುಗಡೆ ಮಾಡಲಾಯಿತು. ಹಾನಿಗೊಳಗಾದ ಗುಳ್ಳಪ್ಪ ಪುನಃ ಮನೆ ನಿರ್ಮಾಣ ಮಾಡಿಕೊಳ್ಳಲು ಬಂದ ಪರಿಹಾರದ ಹಣದಲ್ಲಿ ಮನೆಗೆ ಅಡಿಪಾಯ ಹಾಕಿದ್ದಾರೆ. ಉಳಿದ ಪರಿಹಾರದ ಹಣ ನಾಲ್ಕೂ ವರ್ಷವಾದರೂ ಬಂದಿಲ್ಲ. ತಾಲೂಕು ಕಚೇರಿ ಅಧಿಕಾರಿಗಳು ಈ ಬಗ್ಗೆ ಯಾವುದೇ ಸ್ಪಂದನೆ ನೀಡಿಲ್ಲ.
ಉಡಾಫೆ ಉತ್ತರ ನೀಡಿ ಕಳಿಹಿಸುತ್ತಾರೆ. ಇಂದು ಅದೇ ಅಡಿಪಾಯದ ಮುಂಭಾಗದಲ್ಲಿ ಸೋಗೆ ಗುಡ್ಡಲಿನಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರ ನೆರೆ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೀದಿಯಲ್ಲಿ ಅವರು ಜೀವನ ಮಾಡುವಂತಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡುವಂತೆ ಚಿಕ್ಕಿಂಗಳ ಗ್ರಾಮದ ದುರ್ಗಾಂಭಿಕ ಸೇವಾ ಸಮಿತಿ ಅಧ್ಯಕ್ಷ ಸಿ.ಎಚ್.ಲಕ್ಷ್ಮಣ್ ಕೋರಿದ್ದಾರೆ.