ಹಾನಗಲ್ಲ: ಪರಸ್ಪರ ಸಹಕಾರ, ನಂಬಿಕೆ, ವಿಶ್ವಾಸದಿಂದ ಮಾತ್ರ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಆಡಳಿತ ಮಂಡಳಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ಸಹಕಾರಿ ಸಂಘಗಳು ಅಭಿವೃದ್ಧಿಯತ್ತ ಮುಖ ಮಾಡಲಿವೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿ ಹೊಸದಾಗಿ ಆರಂಭಿಸಲಾಗಿರುವ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಬಡವರು, ಮಧ್ಯಮ ಹಾಗೂ ರೈತಾಪಿ ವರ್ಗಕ್ಕೆ ಬ್ಯಾಂಕಿನ ಸಕಲ ಸೌಲಭ್ಯಗಳು ದೊರಕಬೇಕಿದೆ. ಬ್ಯಾಂಕುಗಳು ಕೇವಲ ಆರ್ಥಿಕ ಚಟುವಟಿಕೆಗಷ್ಟೇ ಸೀಮಿತವಾಗದೇ ಬೇರೆ ಬೇರೆ ನಾಗರಿಕ ಸೇವೆಗಳನ್ನೂ ನೀಡಲು ಮುಂದೆ ಬರಬೇಕಿದೆ. ಸಾಲ ಮಂಜೂರಾತಿ ಪ್ರಕ್ರಿಯೆ ಸರಳಗೊಳಿಸಿ ಅರ್ಹರಿಗೆ ಸುಲಭವಾಗಿ ಸಾಲ ಸೌಲಭ್ಯ ದೊರಕುವಂತೆ ಕಾಳಜಿ ವಹಿಸಬೇಕಿದೆ. ಸಾಲಗಾರರೂ ಪಡೆದ ಸಾಲವನ್ನು ನಿಗದಿತ ಉದ್ದೇಶಕ್ಕೆ ಸದ್ಬಳಕೆ ಮಾಡಿಕೊಂಡು ಸಕಾಲಕ್ಕೆ ಸಾಲ ಮರುಪಾವತಿ ಮಾಡಿದರೆ ಸಹಕಾರಿ ಕ್ಷೇತ್ರದ ಬ್ಯಾಂಕುಗಳು ಆರ್ಥಿಕ ಪ್ರಗತಿ ಕಾಣಲಿದೆ. ಇನ್ನಷ್ಟು ಜನರಿಗೆ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.ಪುರಸಭೆ ಮಾಜಿ ಅಧ್ಯಕ್ಷ ಎಸ್.ಎ. ಪೀರಜಾದೆ, ಮುಖಂಡರಾದ ಮುಜೀಬ್ ಬಾಳೂರ, ದುದ್ದು ಅಕ್ಕಿವಳ್ಳಿ, ನಾಸೀರ್ ಖಾಜಿ, ನಿಸಾರ ಪಾನವಾಲೆ, ಮುಸ್ತಾಕ್ ಸುತಾರ, ಇರ್ಫಾನ್ ಮಿಠಾಯಿಗಾರ, ಚಮನಸಾಬ ಕಿತ್ತೂರ, ಎಂ.ಎಂ. ಮುಲ್ಲಾ, ಇಲಿಯಾಸ್ ಶಿರಸಿ, ಬಾಬಾಜಾನ್ ಕೊಂಡವಾಡಿ, ಹನೀಫ್ ಜಾಲೆಗಾರ, ತನ್ವೀರ್ ಮಾಸೂರ, ನವೀದ್ ಯಾವಗಲ್ ಉಪಸ್ಥಿತರಿದ್ದರು.ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ
ಹಿರೇಕೆರೂರು: ಪ್ರತಿಯೊಬ್ಬ ನಾಗರಿಕರು ಯಾವುದೇ ಪಟ್ಟಣ, ಕಾಲನಿ, ನಗರಗಳನ್ನು ನಮ್ಮದು ಎಂದು ಭಾವಿಸಿ, ಕಾಲನಿಗಳಲ್ಲಿ ಒಳ್ಳೆಯ ಸಾಮಾಜಿಕ ಕಾರ್ಯಗಳನ್ನು ಆಯೋಜಿಸುವ ಮೂಲಕ ವೈಚಾರಿಕತೆಯನ್ನು ಬೆಳೆಸಬೇಕು ಎಂದು ಸಿಪಿಐ ಬಸವರಾಜ ಪಿ.ಎಚ್. ತಿಳಿಸಿದರು.ಪಟ್ಟಣದ ರಾಘವೇಂದ್ರ ಕಾಲನಿಯ ರಾಮದೇವ ಭಕ್ತ ಸಮೂಹದ ಸಭಾಭವನದಲ್ಲಿ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಕಾಲನಿಯ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾಲನಿಯ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ, ಪರಂಪರೆ ಬೆಳಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬೆಳೆಯುವಂತೆ ಪ್ರೇರೇಪಿಸಲು ಇಂತಹ ಕಾರ್ಯಕ್ರಮ ಅತ್ಯವಶ್ಯವಾಗಿವೆ ಎಂದರು.ಪಪಂ ಸದಸ್ಯ ರಮೇಶ ತೋರಣಗಟ್ಟಿ, ರಾಣಿಬೆನ್ನೂರು ತಹಸೀಲ್ದಾರ್ ಅರುಣಕುಮಾರ ಕಾರಗಿ, ಶಿಕ್ಷಕ ಎನ್.ಎಸ್. ಹೆಗ್ಗೇರಿ ಮಾತನಾಡಿದರು. ರಾಘವೇಂದ್ರ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಪರಮೇಶಪ್ಪ ಹಲವಾಗಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಜಿ.ಎಚ್. ತಳವಾರ, ಬಿ. ರುದ್ರಪ್ಪ, ವಿ.ಎಸ್. ಪುರದ, ಸುರೇಶ ಮಾಯಾಚಾರಿ, ಅಮೃತಪ್ಪ ತಡಗಣಿ, ಈರಣ್ಣ ಕಾಟೇನಹಳ್ಳಿ, ಚಂದ್ರಪ್ಪ ಮರಕಳ್ಳಿ, ಶಾಂತೇಶಗುಜ್ಜೇರ, ಹನುಮಾನಸಿಂಗ್ ರಾಜಪುರೋಹಿತ, ಮಹೇಶ ಮೊಗಲಿಶೆಟ್ಟರ, ಜವರಲಾಲ್ ಚೌಧರಿ, ಮಲ್ಲೇಶಪ್ಪ ಕೊಡೇರ, ನಾಗೇಂದ್ರಪ್ಪ ಕುಡಪಲಿ ಹಾಗೂ ಸೇವಾ ಸಮೀತಿಯ ಪದಾಧಿಕಾರಿಗಳು ಇದ್ದರು. ಶಿಕ್ಷಕರಾದ ಕೆ.ಟಿ. ಪಾಟೀಲ, ಜಯಲಿಂಗಪ್ಪ ಗೂಲಣ್ಣನವರ, ಜಯಪ್ಪ ಚಪ್ಪರದಳ್ಳಿ, ರವಿ ಹುಲ್ಲತ್ತಿ ನಿರ್ವಹಿಸಿದರು.