ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ಸಾಸಲಕುಂಟೆ ಪೆನ್ನೋಬನಹಳ್ಳಿ ಹಾಗೂ ಲಿಂಗದಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಈ ಕಳ್ಳತನ ನಡೆದಿದ್ದು, ರೈತರು ಆತಂಕಕ್ಕಿಡಾಗಿದ್ದಾರೆ. ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ರಾತ್ರಿ ವೇಳೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ನಿತ್ಯ ನಡೆಯುವ ಈ ಘಟನೆಗಳಿಂದ ಹೈನುಗಾರಿಕೆ ನಿರತ ರೈತರು ಹಾಗೂ ಈ ಭಾಗದ ಜನಸಾಮಾನ್ಯರಿಗೆ ನಿದ್ದೆ ಮಾಡದಂತಾಗಿದೆ. ಕಳೆದ 3 ದಿನಗಳ ಹಿಂದಷ್ಟೆ 20ರ ರಾತ್ರಿ ವೇಳೆ ತಾಲೂಕಿನ ಸಾಸಲಕುಂಟೆ ಗ್ರಾಮಕ್ಕೆ ಪ್ರವೇಶಿಸಿದ ಕಳ್ಳರು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ರೈತ ಧಶ್ವಂತ್ರೆಡ್ಡಿಗೆ ಸೇರಿದ್ದ ಸುಮಾರು 50ಸಾವಿರ ಮೌಲ್ಯದ ಸೀಮೆ ಹಸುವೊಂದನ್ನು ಕಳವು ಮಾಡಿದ್ದು, ಸ್ವಲ್ಪ ಸಮಯದ ನಂತರ ಕೊಟ್ಟಿಗೆಯಲ್ಲಿ ಹಸು ಕಾಣದೇ ಇದ್ದ ಕಾರಣ ಗಾಬರಿಗೊಂಡ ರೆಡ್ಡಿ ಹಾಗೂ ಈತನ ಸಹೋದರ ಬೈಕಿನಲ್ಲಿ ಲಿಂಗದಹಳ್ಳಿ ಮಾರ್ಗ ಬೆನ್ನೆತ್ತಿ ಹೋದ ವೇಳೆ ಗ್ರಾಮದ ಸಮೀಪದ ಪೆನ್ನೋಬನಹಳ್ಳಿಯಲ್ಲಿ ರಸ್ತೆ ಪಕ್ಕದಲ್ಲಿದ್ದ ಮತ್ತೊಬ್ಬ ರೈತನ ಸೀಮೆ ಹಸುವಿನ ಕಳವು ಮಾಡಲು ಹಸುವಿನ ಹಗ್ಗ ಬಿಚ್ಚುತ್ತಿದ್ದ ವೇಳೆ ಬೈಕಿನ ಹೆಡ್ ಲೈಟ್ ನೋಡಿ ಕಳವಿನ ಹಸುವಿನ ಜತೆ ಟೆಂಪೋದಲ್ಲಿದ್ದ ಕಳ್ಳನೊಬ್ಬ ಬೈಕಿನಲ್ಲಿದ್ದವರ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಇದರಿಂದ ಗಾಬರಿಯಾದ ಆ ರೈತರು ಸ್ವಲ್ಪ ದೂರದಲ್ಲಿಯೆ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಇನ್ನೂಂದು ಸೀಮೆ ಹಸುವಿನ ಕಳವಿನ ಯತ್ನ ಕೈಬಿಟ್ಟು ಅಲ್ಲಿಂದ ಟೆಂಪೋದಲ್ಲಿ ಪರಾರಿಯಾಗಿರುವುದಾಗಿ ತಿಳಿಸಿದ್ದಾರೆ.
ಮರುದಿನ ರಾತ್ರಿ 21ರಂದು ನವೀನ್ಕುಮಾರ್ ಅವರಿಗೆ ಸೇರಿದ್ದ ಸುಮಾರು 50ಸಾವಿರ ಮೌಲದ್ಯ ಸೀಮೆ ಹಸು ಹಾಗೂ ಇದೇ ದಿನ ಪೆನ್ನೊಬನಹಳ್ಳಿಯ ರೈತ ವಿರೇಶ್ ಕುಮಾರ್ ಅವರಿಗೆ ಸೇರಿದ್ದ 50ಸಾವಿರ ಸೀಮೆ ಹಸು ಮತ್ತು ಅದೇ ಗ್ರಾಮದ ಸೋಮಶೇಖರೆಡ್ಡಿ ಅವರಿಗೆ ಸೇರಿದ್ದ ಸೀಮೆ ಹಸು ಹಾಗೂ ತಾಲೂಕಿನ ಕೊಡಿಗೇನಹಳ್ಳಿಯ ರೈತ,ಅಮಲ ರಂಗಪ್ಪನಿಗೆ ಸೇರಿದ್ದ ಸಿಮೆ ಹಸುಗಳನ್ನು ಹಸುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.ಇನ್ನೂ ಅದೇ ದಿನ ತಾಲೂಕಿನ ಸಾಸಲಕುಂಟೆ ಗ್ರಾಮದ ರೈತ ದಿವಾಕರರೆಡ್ಡಿಗೆ ಸೇರಿದ್ದ ಸುಮಾರು 1ಲಕ್ಷ ಮೌಲ್ಯದ 28ಮೀಟರ್ ಡಬಲ್ ಕೇಬಲ್ ವೈರು ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ರೈತರು ಅರಸೀಕೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಇಲ್ಲಿನ ಸಿಸಿ ಕ್ಯಾಮೆರಾಗಳಿದ್ದರೂ ನಿಷ್ಕ್ರೀಯವಾಗಿವೆ.ಅಲ್ಲದೇ ಇಷ್ಟು ದಿನ ರಾತ್ರಿ ವೇಳೆ ಪೊಲೀಸ್ ಗಸ್ತಿನ ವಾಹನ ತಿರುಗಾಡುತ್ತಿತ್ತು. ಈಗ ಅರಸೀಕೆರೆ ಪೊಲೀಸ್ ಠಾಣೆಯ ಪೊಲೀಸ್ ಗಸ್ತಿನ ವಾಹನ ಓಡಾಡುತ್ತಿಲ್ಲ. ಪರಿಣಾಮ ಕಳ್ಳತನಗಳು ಹೆಚ್ಚಾಗುತ್ತಿವೆ. ಈ ಸಂಬಂಧ ಠಾಣೆಗೆ ಸಂಬಂಧಿಸಿದ ಸಿಪಿಐಗೆ ಮಾಹಿತಿ ನೀಡಲು ಎಷ್ಟು ಬಾರಿ ಕರೆ ಮಾಡಿದರೂ ಫೊನ್ ಸ್ವೀಕರಿಸುತ್ತಿಲ್ಲ ಎಂದು ಈ ಭಾಗದ ರೈತರು,ಅಳಲು ತೋಡಿಕೊಂಡಿದ್ದಾರೆ.