ಮುಂಡರಗಿ: ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿ ನಮಗೆ ನೀಡಿದ ಅನೇಕ ಅಂಶಗಳನ್ನು ಮರೆತಿದ್ದೇವೆ. ಔಷಧ ರಹಿತವಾಗಿ ನಮ್ಮ ಜೀವನಶೈಲಿ ಮಾರ್ಪಡಿಸಿಕೊಳ್ಳುವ ಮೂಲಕ ಮರೆತ ಅಂಶಗಳನ್ನು ಪ್ರಕೃತಿ ಚಿಕಿತ್ಸಾ ಪದ್ಧತಿ ನೆನಪಿಸುತ್ತಿದೆ ಎಂದು ಹರಪನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಉದಯಶಂಕರ ಭಟ್ ಅಭಿಪ್ರಾಯಪಟ್ಟರು.ಪತಂಜಲಿ ಯೋಗ ಸಮಿತಿ ಮತ್ತು ಎಸ್ಎಸ್ಕೆ ಸಮಾಜದ ಆಶ್ರಯದಲ್ಲಿ ಭಾನುವಾರ ಪಟ್ಟಣದ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.
ತುರ್ತು ಹಾಗೂ ಶಸ್ತ್ರಚಿಕಿತ್ಸೆ ಹೊರತುಪಡಿಸಿ ಎಲ್ಲ ರೋಗಗಳಿಗೆ ಈ ಔಷಧಿ ರಹಿತ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ಇದ್ದು, ಇದರ ಪ್ರಯೋಜನ ಪಡೆದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಮಂಜುನಾಥ ಅಳವಂಡಿ ಮಾತನಾಡಿ, ಯಾವುದೇ ಬಾಹ್ಯ ಔಷಧ, ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸಾ ವಿಧಾನವೆಂದರೆ ಪ್ರಕೃತಿ ಚಿಕಿತ್ಸೆ. ಪಂಚಭೂತಗಳಿಂದ ಆದ ಶರೀರಕ್ಕೆ ರೋಗಗಳು ಬಂದಾಗ ಬಗೆಹರಿಸುವ ಶಕ್ತಿ ಪಂಚಭೂತಗಳಲ್ಲೇ ಅಡಗಿದೆ ಎಂಬ ತತ್ವವನ್ನು ಆಧರಿಸಿದ ಈ ಸರಳ- ಸಹಜ ಚಿಕಿತ್ಸಾ ಪದ್ಧತಿ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು.ಕಾರ್ಯಕ್ರಮದಲ್ಲಿ ಅಂಬಾಭವಾನಿ ದೇವಸ್ಥಾನ ಸಮಿತಿ ಅಧ್ಯಕ್ಷ ಅಶೋಕ ಶಿದ್ಲಿಂಗ, ಗಣ್ಯರಾದ ಕರಬಸಪ್ಪ ಹಂಚಿನಾಳ, ಈರಣ್ಣ ಅಳವಂಡಿ, ಜಗದೀಶ್ ಸೋನಿ, ಜನನಿ ಸಂಸ್ಥೆಯ ವ್ಯವಸ್ಥಾಪಕ ಅನೀಶ್, ವೈದ್ಯರಾದ ಡಾ. ಮಾನಸ, ಡಾ. ಸಹನ, ಡಾ. ಅನೀಷಾ, ಡಾ. ಸುಷ್ಮಿತಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಯೋಗ ಪ್ರಾಧ್ಯಾಪಕ ಡಾ. ಜಯರಾಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಸವಣೂರು ನಿರೂಪಿಸಿದರು.