ಗೋಕರ್ಣ: ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸರಿಯಾದ ನಿದ್ರೆ ಅತ್ಯಂತ ಅವಶ್ಯಕ. ಹೀಗಾಗಿ ರಾತ್ರಿ ಸಮಯದಲ್ಲಿ ಸುಖನಿದ್ರೆ ಮಾಡುವುದು ಆರೋಗ್ಯಕರ ಜೀವನದ ಮೂಲಾಧಾರ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಆಯುರ್ವೇದದ ಪ್ರಕಾರ ರಾತ್ರಿ ಜಾಗರಣೆ ಹಾಗೂ ಹಗಲು ನಿದ್ರೆ ಎರಡೂ ಆರೋಗ್ಯಕ್ಕೆ ಹಾನಿಕಾರಕ. ಹಗಲು ನಿದ್ರೆಯಿಂದ ಕಫದೋಷ ಹೆಚ್ಚಾಗಿ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ಅನೇಕ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಹಗಲು ನಿದ್ರೆಯನ್ನು ತಪ್ಪಿಸುವಂತೆ ಸಲಹೆ ನೀಡಿದರು.
ಸುಖನಿದ್ರೆಯಿಂದ ದೇಹದಲ್ಲಿ ಜಠರಾಗ್ನಿ ಪ್ರಬಲವಾಗಿ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ದೇಹಕ್ಕೆ ಬಲ, ಮನಸ್ಸಿಗೆ ಪ್ರಸನ್ನತೆ ಹಾಗೂ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ನಿದ್ರೆಯ ಕೊರತೆಯಿಂದ ಮಾನಸಿಕ ಒತ್ತಡ, ದೌರ್ಬಲ್ಯ, ಜ್ಞಾನಕ್ಷಯ ಹಾಗೂ ಜೀವನದ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಿದರು.ಸರಿಯಾದ ನಿದ್ರೆ ವ್ಯಕ್ತಿಯ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕ ಸಮತೋಲನ, ನೆನಪಿನ ಶಕ್ತಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಕ್ಕೂ ಅತ್ಯಂತ ಮುಖ್ಯವಾಗಿದೆ. ನಿರಂತರವಾಗಿ ನಿದ್ರೆಯ ಕೊರತೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನಿದ್ರೆಯನ್ನು ಜೀವನಶೈಲಿಯ ಅವಿಭಾಜ್ಯ ಅಂಗವಾಗಿ ಪರಿಗಣಿಸಿ ಅದರ ಮಹತ್ವ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಮಚಂದ್ರಾಪುರ ಮಂಡಲದ ನಿಟ್ಟೂರು, ತುಮರಿ, ಹೊಸನಗರ, ಹೊಸಕೊಪ್ಪ, ಸಂಪೆಕಟ್ಟೆ ವಲಯದ ಪರವಾಗಿ ಮಂಜುನಾಥ ದಂಪತಿ ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಪ್ರಕಾಶ ಬೇರಾಳ, ಲಕ್ಷ್ಮೀನಾರಾಯಣ ಕೌಲಕೈ, ರಚನಾ ಜಗದೀಶ ಹೊನ್ನಗೋಡು, ಗಣಪತಿ ಭಟ್ಟ ಜಟ್ಟಿಮನೆ, ಶಂಕರನಾರಾಯಣ ಮಾಗಲು ಸೇರಿದಂತೆ ರಾಮಚಂದ್ರಾಪುರ ಮಂಡಲದ ಪ್ರಮುಖರು ಹಾಗೂ ದಿನ ಪ್ರಧಾನರಾದ ಪ್ರಕಾಶ ಬಾಗಿ ದಂಪತಿ ಉಪಸ್ಥಿತರಿದ್ದರು.ವಿಶೇಷ ವಿನಾಯಿತಿ: ಬಾಲಕರು, ವೃದ್ಧರು, ಶ್ರಮಜೀವಿಗಳು, ಗಾಯಗೊಂಡವರು ಮತ್ತು ಪ್ರಯಾಣದಿಂದ ದಣಿದವರಿಗೆ ಹಗಲು ನಿದ್ದೆಗೆ ವಿಶೇಷ ವಿನಾಯಿತಿಯಿದ್ದು, ಖಾಲಿ ಹೊಟ್ಟೆಯಲ್ಲಿ ಒಂದು ಮುಹೂರ್ತ (ಸುಮಾರು ೪೮ ನಿಮಿಷ) ಮಲಗಲು ಆಯುರ್ವೇದ ಅವಕಾಶ ನೀಡಿದೆ ಎಂದು ಶ್ರೀಗಳು ತಿಳಿಸಿದರು.