ಹಳಿಯಾಳ: ನೂರು ವರ್ಷಗಳ ದೀರ್ಘ ಪ್ರಯಾಣವನ್ನು ಕ್ರಮಿಸಿ ಯಶಸ್ವಿ ವಿಜಯದ ಹೆಜ್ಜೆಯಿಡುತ್ತಿರುವ ಆರ್ಎಸ್ಎಸ್ ಪ್ರಚಾರಕರ ಸೇವೆಗೆ ನಿಮ್ಮ ಕುಟುಂಬದ ಮಕ್ಕಳನ್ನು ಧಾರೆಯೆರೆಯಿರಿ ಎಂದು ಕರ್ನಾಟಕ ಎರಡೂ ಪ್ರಾಂತಗಳ ಪ್ರಚಾರಕ ಅರುಣಕುಮಾರಜೀ ಕರೆನೀಡಿದರು.
ದೇಶ ಪರಮ ವೈಭವಕ್ಕೆ: ಆರ್.ಎಸ್.ಎಸ್. ಇದೊಂದು ದೇಶದ ಅತಿದೊಡ್ಡ ಹಿಂದೂ ರಾಷ್ಟ್ರೀಯವಾದಿ ಸಂಘಟನೆಯಾಗಿದ್ದು, ಇದು ಸದಾ ಶಿಸ್ತು, ಹಿಂದೂ ಏಕತೆ ಮತ್ತು ರಾಷ್ಟ್ರಸೇವೆಗೆ ಒತ್ತು ನೀಡುತ್ತಿದೆ. ಇಂದು ದೇಶವು ಪರಮ ವೈಭವಕ್ಕೆ ತಲುಪಿರುವುದನ್ನು ನಾವು ಕಾಣುತ್ತಿದ್ದೇವೆ. ಇದು ಡಾ. ಹೆಡಗೆವಾರ್ ಅವರ ತಪಸ್ಸಿನ ಫಲವಾಗಿದೆ ಎಂದರು.
ಆರ್.ಎಸ್.ಎಸ್. ಇದು ತ್ಯಾಗದ ಸಂಘಟನೆಯಾಗಿದ್ದು, ನಮ್ಮ ತ್ಯಾಗವನ್ನು ಹೋಲಿಕೆ ಮಾಡಲು ಅಸಾಧ್ಯ. ದೇಶದ ಹಾಗೂ ಸಮಾಜದ ಅಭಿವೃದ್ಧಿಗಾಗಿ ಮತ್ತು ಪರಿವರ್ತನೆಗಾಗಿ ಸದಾ ಶ್ರಮಿಸುತ್ತಿರುವ ಸಂಘದ ಬಗ್ಗೆ ನಮಗೆ ಅಭಿಮಾನ, ಸಾತ್ವಿಕತೆ ಇರಬೇಕೆ ಹೊರತು ಅಹಂಕಾರ ಬೇಡ ಎಂದರು. ಸಂಘ ಏನೂ, ಸಂಘದ ಶಕ್ತಿ, ಹಿನ್ನಲೆಯ ಅರಿವು ನಮಗಿರಬೇಕು ಎಂದರು.ಟೀಕಿಸುವರಿಗೊಂದು ಸವಾಲು: ಸಂಘವು ಯಾವತ್ತೂ ಸಂವಿಧಾನ ವಿರೋಧಿಯಾಗಿಲ್ಲ, ಸದಾ ಸಂವಿಧಾನದ ಬೆನ್ನೆಲುಬಾಗಿ ನಿಂತಿದೆ. ಅಂಬೇಡ್ಕರ್ ಅವರ ಬಗ್ಗೆ ಸಂಘ ಅಪಾರ ಗೌರವ ಹೊಂದಿದ್ದು, ದೇಶದ ಎಲ್ಲ ಮಹಾಪುರುಷರ ಸಾಲಿನಲ್ಲಿ ಬಹುಎತ್ತರದ ಸ್ಥಾನದಲ್ಲಿ ನೋಡುತ್ತಿದೆ ಎಂದರು.
ಮಾಜಿ ಶಾಸಕ ಸುನೀಲ ಹೆಗಡೆ, ಪ್ರಮುಖರಾದ ಮಂಗೇಶ ದೇಶಪಾಂಡೆ, ಶಿವಾಜಿ ನರಸಾನಿ, ಅಪ್ಪಾರಾವ್ ಪೂಜಾರಿ ಇದ್ದರು. ಆರ್.ಎಸ್.ಎಸ್. ತಾಲೂಕು ಕಾರ್ಯವಾಹ ಅಕ್ಷಯ ಕುಸನೂರ ಕಾರ್ಯಕ್ರಮ ನಿರ್ವಹಿಸಿದರು.