ಮಹದಾಯಿ ಯೋಜನೆ ಜಾರಿ ವಿರೋಧಿಸುವ ಪರಿಸರವಾದಿಗಳ ಗಡಿಪಾರಿಗೆ ಆಗ್ರಹ

KannadaprabhaNewsNetwork | Updated : Jun 07 2025, 12:43 AM IST
ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ವಿರೋಧ ಮಾಡುವ ಪರಿಸರವಾದಿಗಳನ್ನು ಸರ್ಕಾರ ಗಡಿಪಾರು ಮಾಡಬೇಕೆಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಭಸಪ್ಪ ಹೂಗಾರ ಆಗ್ರಹಿಸಿದರು.

ನರಗುಂದ: ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ವಿರೋಧ ಮಾಡುವ ಪರಿಸರವಾದಿಗಳನ್ನು ಸರ್ಕಾರ ಗಡಿಪಾರು ಮಾಡಬೇಕೆಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಭಸಪ್ಪ ಹೂಗಾರ ಆಗ್ರಹಿಸಿದರು.

ಅವರು 3610ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ರಾಜ್ಯದ ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನಾಲ್ಕು ಜಿಲ್ಲೆ ಹನ್ನೊಂದು ತಾಲೂಕಿನ ರೈತ ಸಮುದಾಯಿ ಕಳೆದ 40 ವರ್ಷದಿಂದ ಈ ಭಾಗದ ಕುಡಿಯುವ ನೀರಿನ ಬವಣೆ ತಪ್ಪಿಸಲು ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ಹೋರಾಟ ಮಾಡಿದ್ದರಿಂದ ಸದ್ಯ ವನ್ಯಜೀವಿಗಳ ಇಲಾಖೆ ಪರವಾನಗಿ ನೀಡಿದ ತಕ್ಷಣ ಈ ಯೋಜನೆ ಕಾಮಗಾರಿ ಪ್ರಾರಂಭವಾಗುತ್ತದೆ, ಆದರೆ ಈ ಸಂದರ್ಭದಲ್ಲಿ ಕೆಲವು ಬೆಳಗಾವಿ, ಖಾನಾಪುರ ಪರಿಸರವಾದಿಗಳು ರಾಜಕೀಯ ನಾಯಕರ ಮಾತು ಕೇಳಿಕೊಂಡು ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆಯಿಂದ ಪಶ್ಚಿಮ ಘಟ್ಟದ ಪ್ರದೇಶದ ಪರಿಸರ ಹಾಳು ಆಗುತ್ತದೆಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು ಖಂಡನೀಯ ಎಂದರು.

ಈ ಪರಿಸರವಾದಿಗಳು 40 ವರ್ಷದಿಂದ ರೈತ ಸಮುದಾಯ ಮಹದಾಯಿ ಯೋಜನೆ ಜಾರಿ ಮಾಡಬೇಕೆಂದು ಹೋರಾಟ ಮಾಡುವ ಸಂದರ್ಭದಲ್ಲಿ ಏಕೆ ಸುಮ್ಮನಿದ್ದರು. ಈಗ ದಿಢೀರ್‌ ಈ ಯೋಜನೆಯಿಂದ ಪರಿಸರ ಹಾಳು ಆಗುತ್ತದೆ ಎಂದು ವಿರೋಧ ಏಕೆ ಮಾಡುವದು ಎಂದು ಪ್ರಶ್ನೆ ಮಾಡಿ ಈ ಎಲ್ಲಾ ಪರಿಸರವಾದಿಗಳನ್ನು ಸರ್ಕಾರ ಗಡಿಪಾರು ಮಾಡಬೇಕೆಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಸುಭಾಸ ಗಿರಿಯಣ್ಣವರ, ಸಿ.ಎಸ್. ಪಾಟೀಲ, ಹನಮಂತ ಸರನಾಯ್ಕರ, ಮಲ್ಲೇಶ ಅಣ್ಣಿಗೇರಿ, ಅರ್ಜುನ ಮಾನೆ, ಫಕೀರಪ್ಪ ಅಣ್ಣಿಗೇರಿ, ಸೋಮಲಿಂಗಪ್ಪ ಆಯಿಟ್ಟಿ, ಶಂಕ್ರಪ್ಪ ಜಾಧವ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವಾಣ, ವಿಜಯಕುಮಾರ ಹೂಗಾರ, ಸೇರಿದಂತೆ ಮುಂತಾದವರು ಇದ್ದರು.