ಸಿದ್ದರಾಮಯ್ಯ ಶಕ್ತಿ ಎಂದು ಗುರುತಿಸಲು ದೇವೇಗೌಡರು ಕಾರಣ: ಮಾಜಿ ಸಚಿವ ಸಾ.ರಾ.ಮಹೇಶ್

KannadaprabhaNewsNetwork |  
Published : Nov 13, 2024, 12:50 AM IST
6 | Kannada Prabha

ಸಾರಾಂಶ

ರಾಜ್ಯ ಸರ್ಕಾರ ನೈತಿಕತೆ ಇದ್ದರೆ ಸಚಿವ ಸಂಪುಟದಿಂದ ಜಮೀರ್ ಅವರನ್ನು ವಜಾಗೊಳಿಸಬೇಕು. ಜಮೀರ್ ಅವರು ದೇವೇಗೌಡ, ಕುಮಾರಸ್ವಾಮಿ ಅವರ ಬಗ್ಗೆ ಇಂದು ಮಾತನಾಡಿರಬಹುದು. ಮುಂದೆ ನಿಮಗೂ ಇದೇ ಗತಿ ಬರಬಹುದು. ಏನು ಪಾಳೆಗಾರಿಕೆ ಮಾಡುತ್ತೀರಾ ಎಂದು ಅವರು ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಸಿದ್ದರಾಮಯ್ಯ ವ್ಯಕ್ತಿ ಅಲ್ಲ ಶಕ್ತಿ ಎಂದು ಗುರುತಿಸಲು ಎಚ್.ಡಿ. ದೇವೇಗೌಡರು ಕಾರಣ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಸಾ.ರಾ. ಮಹೇಶ್ ತಿರುಗೇಟು ನೀಡಿದರು.

ದೇವೇಗೌಡರನ್ನು ಮುಖ್ಯಮಂತ್ರಿಯನ್ನಾಗಿ ನೀವು ಮಾಡಿದ್ರಾ? ಈ ರಾಜ್ಯದ ಜನ ಮಾಡಿದ್ದು, ನೀವಲ್ಲ. ನಾಡಿನ ಜನರು ಎನ್ನುವುದನ್ನು ಅರಿಯಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರದಲ್ಲಿ ಮಾತನಾಡುವಾಗ ಎಚ್.ಡಿ. ದೇವೇಗೌಡರು ಯಾವ ಒಕ್ಕಲಿಗ ನಾಯಕರನ್ನು ಬೆಳೆಸದೆ ತುಳಿಯುವ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ನಿಮ್ಮ ಎಡ- ಬಲ ಭಾಗದಲ್ಲಿ ಕುಳಿತವರನ್ನು ಎತ್ತರಕ್ಕೆ ಬೆಳೆಸಿರುವುದು ದೇವೇಗೌಡರೇ ಹೊರತು ನೀವಲ್ಲ ಎಂದು ಅವರು ಕುಟುಕಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ತೊಳೆಯಲಾಗದ ಪಾಪದ ಕೂಪವಿದೆ. ಚುನಾವಣೆಯಲ್ಲಿ ಸ್ಟೀಲ್ ದುಡ್ಡು ಖರ್ಚು ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಹಾಗಾದರೆ, ನಿಮ್ಮದು ಯಾವ ದುಡ್ಡು. ದಲಿತರ ಹಿಂದುಳಿದ ವರ್ಗಗಳ ಅನುದಾನದಲ್ಲಿ ಲೂಟಿ ಮಾಡಿದ್ದನ್ನು ಖರ್ಚು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಜಮೀರ್ ರನ್ನು ವಜಾಗೊಳಿಸಿ:

ನಮ್ಮ ಪಕ್ಷದಲ್ಲಿದ್ದು ತಿಂದು ತೇಗಿ, ಬಸ್ ಓಡಿಸಿಕೊಂಡು ಹೋದರಲ್ಲಾ ಅವತ್ತು ಕುಮಾರಣ್ಣನ ಕಲರ್ ಗೊತ್ತಿರಲಿಲ್ವಾ ಜಮೀರ್? ಮೆಕ್ಕಾ ಮದೀನಾಗೆ ಹೋಗುವ ಸಂದರ್ಭದಲ್ಲಿ ರಾಜಕೀಯವಾಗಿ ಜನ್ಮ ಕೊಟ್ಟಿದ್ದು ಕುಮಾರಣ್ಣ ಅಂತಾ ನಮಸ್ಕಾರ ಮಾಡುತ್ತಿದ್ದರಲ್ಲ. ಆಗ ಕುಮಾರಣ್ಣನ ಬಣ್ಣ ಗೊತ್ತಿರಲಿಲ್ವಾ? ಬಣ್ಣ ತಂದೆಯಿಂದ ಬರುವ ಬಳುವಳಿ ಎಂದು ಅವರು ಕುಟುಕಿದರು.

ನಾವೆಲ್ಲರೂ ಪೂಜಿಸುವ ದೇವರು ಎಲ್ಲರದ್ದೂ ಕಪ್ಪು ಬಣ್ಣ. ನಾವೆಲ್ಲರೂ ಮೂಲತಃ ದ್ರಾವಿಡರು. ಪ್ರಧಾನಿಯಾಗಿ ದೇವೇಗೌಡರು ಒಂದು ಕಪ್ಪು ಚುಕ್ಕಿ ಇಲ್ಲದಂತೆ ಆಡಳಿತ ಮಾಡಿದರು. ಕುಮಾರಣ್ಣ ಅವರನ್ನು ಖರೀದಿಸುತ್ತೇನೆ ಅಂತೀರಾ? ಇದೇನಾ ನಿಮ್ಮ ಸಂಸ್ಕಾರ? ದೇವೇಗೌಡರ ಕಾಲಿನ ಧೂಳಿಗೂ ಸಮಾನರಲ್ಲ ನೀವು. ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿ ಹಾಗೆ ಮಾತನಾಡಬೇಡಿ ಎಂದು ಅವರು ಆಗ್ರಹಿಸಿದರು.

ರಾಜ್ಯ ಸರ್ಕಾರ ನೈತಿಕತೆ ಇದ್ದರೆ ಸಚಿವ ಸಂಪುಟದಿಂದ ಜಮೀರ್ ಅವರನ್ನು ವಜಾಗೊಳಿಸಬೇಕು. ಜಮೀರ್ ಅವರು ದೇವೇಗೌಡ, ಕುಮಾರಸ್ವಾಮಿ ಅವರ ಬಗ್ಗೆ ಇಂದು ಮಾತನಾಡಿರಬಹುದು. ಮುಂದೆ ನಿಮಗೂ ಇದೇ ಗತಿ ಬರಬಹುದು. ಏನು ಪಾಳೆಗಾರಿಕೆ ಮಾಡುತ್ತೀರಾ ಎಂದು ಅವರು ವಾಗ್ದಾಳಿ ನಡೆಸಿದರು.

ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚೆಲುವೇಗೌಡ, ನಗರಪಾಲಿಕೆ ಮಾಜಿ ಸದಸ್ಯರಾದ ಅಶ್ವಿನಿ ಅನಂತು, ಪ್ರೇಮಾ ಶಂಕರೇಗೌಡ, ಭಾಗ್ಯ ಮಾದೇಶ್, ಜಿಪಂ ಮಾಜಿ ಸದಸ್ಯ ಸಿ.ಜೆ. ದ್ವಾರಕೀಶ್, ಮುಖಂಡರಾದ ಎಚ್.ಕೆ. ರಾಮು, ಗಂಗಾಧರ್ ಗೌಡ, ಕೃಷ್ಣ ಮೊದಲಾದವರು ಇದ್ದರು.‘ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷದ ಸರ್ವೋಚ್ಚ ನಾಯಕರು. ಕೋರ್ ಕಮಿಟಿ ಅಧ್ಯಕ್ಷರು. ನಾನಾ ಒತ್ತಡಗಳಿಂದ ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ಬರದಿದ್ದರೂ ನಿಮಿಷಾಂಬ ದೇವಸ್ಥಾನದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ದಂಪತಿ ಸಮೇತ ವಿಶೇಷ ಪೂಜೆ ಸಲ್ಲಿಸಿದ್ದಾರೆ.’

- ಸಾ.ರಾ. ಮಹೇಶ್, ಮಾಜಿ ಸಚಿವರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌