ಮುಂಡರಗಿ: ಪುರಸಭೆಯ ವ್ಯಾಪ್ತಿಯ ಶಿರೋಳ ಗ್ರಾಮದ ಹತ್ತಿರ ಸರ್ಕಾರದಿಂದ ಖರೀದಿಸಿರುವ ಸುಮಾರು 25 ಎಕರೆ ಜಮೀನಿನಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ವಿತರಿಸಿ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ತಾಲೂಕು ಕಿಸಾನ್ ಜಾಗೃತಿ ವಿಕಾಸ ಸಂಘದ ಆಶ್ರಯದಲ್ಲಿ ಸೋಮವಾರ ಮುಂಡರಗಿ ಪುರಸಭೆ ಎದುರಿನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ವಿ.ಎಸ್. ಘಟ್ಟಿ ಮಾತನಾಡಿ, ಪುರಸಭೆ ವ್ಯಾಪ್ತಿಯ ನಿರಾಶ್ರಿತ ಫಲಾನುಭವಿಗಳಿಗಾಗಿ 2017ರಲ್ಲಿ ಶಿರೋಳ ಗ್ರಾಮದ ಹತ್ತಿರ 25 ಎಕರ ಜಮೀನನ್ನು ಖರೀದಿ ಮಾಡಲಾಗಿದೆ. ಅದರೆ ಜಮೀನು ಖರೀದಿಸಿ 9 ವರ್ಷಗಳಾದರೂ ಇದುವರೆಗೂ ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಿಸಿ ಹಕ್ಕುಪತ್ರ ನೀಡಿಲ್ಲ. ಆದ್ದರಿಂದ ತಕ್ಷಣವೇ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿ, ಹಕ್ಕುಪತ್ರ ವಿತರಿಸುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ.
ನಿಗಮ ಹಾಗೂ ಪುರಸಭೆಯಿಂದ ಸ್ಪಷ್ಟತೆ ಸಿಗದ ಕಾರಣ ಮಂಗಳವಾರವೂ ಪ್ರತಿಭಟನೆ ಮುಂದುವರಿಯುತ್ತದೆ ಎಂದು ವಿ.ಎಸ್. ಘಟ್ಟಿ ತಿಳಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ ಭಂಡಾರಿ, ಕುಸುಮ ಹಳ್ಳಿಕೇರಿ ಫಲಾನುಭವಿಗಳಾದ ದ್ಯಾಮವ್ವ ಕೊರವರ, ಯಲ್ಲಮ್ಮ ಕೊರವರ, ದ್ಯಾಮವ್ವ ಕೊರವರ, ಈರಮ್ಮ, ಲಕ್ಷ್ಮವ್ವ, ಲಕ್ಷ್ಮಿ ಸೇರಿದಂತೆ 25ಕ್ಕೂ ಹೆಚ್ಚು ಫಲಾನುಭವಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.