ಕೊಪ್ಪಳ: ಸತತ ಎಂಟು ದಿನಗಳಿಂದ ನೀರು ಬಾರದ ಹಿನ್ನೆಲೆಯಲ್ಲಿ ನಗರದ ವಡ್ಡರ ಓಣೀಯ ನಿವಾಸಿಗಳು ನೀರು ಬಿಡುವಂತೆ ಒತ್ತಾಯಿಸಿ ಖಾಲಿ ಕೊಡ ಪ್ರದರ್ಶನ ಮಾಡುವ ಮೂಲಕ ನಗರದ ಶಾರದಾ ಟಾಕೀಸ್ ಹತ್ತಿರ ದೀಢಿರ್ ಧರಣಿ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಳೆಯಾಗುತ್ತಿದೆ ಹಾಗೂ ಕೊಪ್ಪಳ ಸಮೀಪದಲ್ಲಿಯೆ ತುಂಗಭದ್ರಾ ಡ್ಯಾಂ ತುಂಬಿದ್ದು ನಮ್ಮ ಓಣಿಗೆ ನೀರು ಯಾಕೆ ಬಿಡುತ್ತಿಲ್ಲ, ನಮ್ಮ ಓಣಿಯ ಕುರಿತು ನಗರಸಭೆ ಅಧಿಕಾರಿ ಹಾಗೂ ವಾರ್ಡ್ ಸದಸ್ಯರು ನಿರ್ಲಕ್ಷ್ಯತನ ತೋರುತ್ತಿದ್ದಾರೆ ನಮಗೆ ನೀರು ಬಿಡುವ ತನಕ ಪ್ರತಿಭಟನೆ ಹಿಂಪಡೆಯುವದಿಲ್ಲ ಎಂದು ಪಟ್ಟು ಹಿಡಿದು ನಗರಸಭೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸುದ್ದಿ ತಿಳಿದು ನಗರಸಭೆ ವಾರ್ಡ ಸದಸ್ಯ ಅಕ್ಬರಪಾಷಾ ಪಲ್ಟಾನ ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಮಾತನಾಡಿ,ಇನ್ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇನೆ ಅಧಿಕಾರಿಗಳಿಗೆ ತಿಳಿ ಹೇಳುವ ಮೂಲಕ ಸಮರ್ಪಕ ನೀರನ್ನು ಒದಗಿಸಲಾಗುವದು ಎಂದರು.ಈ ಹಿಂದೆಯೂ ಅನೇಕ ಬಾರಿ ಈ ರೀತಿಯಾಗಿದ್ದು, ಇದು ಕೊನೆಯ ಸಲದ ಎಚ್ಚರಿಕೆಯಾಗಿದ್ದು ಮುಂದಿನ ದಿನಗಳಲ್ಲಿ ನಮ್ಮ ಓಣಿಗೆ ಸಮರ್ಪಕ ನೀರನ್ನು ಬಿಡಬೇಕು ಇಲ್ಲದಿದ್ದರೆ ದೊಡ್ಡ ಮಟ್ಟದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದುಕೊಂಡರು. ಈ ಸಂದರ್ಭದಲ್ಲಿ ವಾರ್ಡ್ ನಿವಾಸಿಗಳು ಇದ್ದರು.