ಕನ್ನಡಪ್ರಭ ವಾರ್ತೆ ಹೊಸದುರ್ಗ
ಶನಿವಾರ ಸಾಣೇಹಳ್ಳಿ ಮಠದ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ ಮಲ್ಲಿಕಾರ್ಜುನ್ ಅವರಿಗೆ ಆಶೀರ್ವದಿಸಿ ಮಾತನಾಡಿದ ಶ್ರೀಗಳು, ನಿಮ್ಮ ತಾತ ಶಾಮನೂರು ಶಿವಶಂಕರಪ್ಪನವರು ಅಜಾತಶತ್ರು. ಕಾಯಕ, ದಾಸೋಹ, ಇಷ್ಟಲಿಂಗ ನಿಷ್ಠೆಯುಳ್ಳವರು. ಅಂತಹ ಸದ್ಗುಣಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಹೆಸರನ್ನು ಅಜರಾಮರವಾಗಿಸಬೇಕು. ಸಾಮಾನ್ಯ ವ್ಯಕ್ತಿ ಫೋನ್ ಮಾಡಿದರೂ ಕರೆ ಸ್ವೀಕರಿಸಿ ಸ್ಪಂದಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ಜನರ ನಂಬಿಕೆಗೆ ಅರ್ಹರಾಗುತ್ತೀರಿ ಎಂದರು.
ಹೊನ್ನಾಳಿ ಹಾಗೂ ಭದ್ರಾವತಿ ತಾಲೂಕಿನ ಮಂಗೋಟಿ ಸೇರಿದಂತೆ ವಿವಿಧೆಡೆ ಭಾರಿ ಗಾಳಿ-ಮಳೆಗೆ ಲಕ್ಷಾಂತರ ಅಡಕೆ ಹಾಗೂ ಬಾಳೆ ಮರಗಳು ಧರೆಗೆ ಉರುಳಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಷಯವನ್ನು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಗಂಭೀರವಾಗಿ ಧ್ವನಿಯೆತ್ತಿ, ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕು, ಜೊತೆಗೆ ಸದನದ ಎಲ್ಲಾ ಕಲಾಪಗಳಲ್ಲಿ ಕಡ್ಡಾಯವಾಗಿ ಮತ್ತು ಸಕ್ರಿಯವಾಗಿ ಭಾಗವಹಿಸುವಂತೆ ಸಲಹೆ ನೀಡಿದರು.ಶ್ರೀಗಳ ಮಾರ್ಗದರ್ಶನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಶಾಸಕ ಸಮರ್ಥ್ ಮಲ್ಲಿಕಾರ್ಜುನ್, ಚುನಾವಣೆಗಳಲ್ಲಿ ಸೋಲು-ಗೆಲುವಿಗಿಂತ ಜನರ ಮಧ್ಯೆ ಇದ್ದು ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ. ದಿನದ 24 ಗಂಟೆಯೂ ಸಾರ್ವಜನಿಕರಿಗೆ ಲಭ್ಯವಿದ್ದು, ಪಕ್ಷಪಾತವಿಲ್ಲದೆ ಕೆಲಸ ಮಾಡಿಕೊಡಲಾಗುವುದು. ಪೊಲೀಸ್ ಠಾಣೆ ಅಥವಾ ತಹಸೀಲ್ದಾರ್ ಕಚೇರಿ ಸೇರಿದಂತೆ ಯಾವುದೇ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಕ್ಷಣ ಸ್ಪಂದಿಸುವ ಭರವಸೆ ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮುದೇಗೌಡ್ರು ಗಿರೀಶ್, ಪ್ರಮುಖ ಮುಖಂಡರುಗಳಾದ ಉಮೇಶ್, ಆಸಿಕ್ ಜೈನ್, ಎರಗುಂಟೆ ವೀರೇಶ್, ಗ್ಯಾರೇಹಳ್ಳಿ ಮಂಜು ಮತ್ತು ನರೇಂದ್ರ ಎರಗುಂಟೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.