ಕನ್ನಡಪ್ರಭ ವಾರ್ತೆ ಸರಗೂರು
ಮುಖ್ಯಮಂತ್ರಿಗಳು ಬರುವ ರಸ್ತೆ ಅಧಿಕಾರಿಗಳ ಕಣ್ಣಿಗೆ ಕಾಣುತ್ತದೆ, ಬಿದರಹಳ್ಳಿ ಮೂರ್ ಬಂದ್ ಹಳ್ಳಿಯ ರೈತರು ತಿರುಗಾಡುವ ರಸ್ತೆ ಸರ್ಕಾರಕ್ಕೆ ಕಾಣುತ್ತಿಲ್ಲವೇ ಎಂದು ರೈತರು ಪ್ರಶ್ನಿಸಿದ್ದಾರೆ.ಪ್ರಾಣಿಗಳು ಕೂಡ ತಿರುಗಾಡಲು ಯೋಗ್ಯವಲ್ಲದ ರಸ್ತೆಯಾಗಿದ್ದು, ಮುಖ್ಯಮಂತ್ರಿಗಳ ಓಲೈಕೆಗಾಗಿ ಮೈಸೂರು- ಎಚ್.ಡಿ. ಕೋಟೆ ರಸ್ತೆ ಹಳ್ಳಕೊಳ್ಳ ಮುಚ್ಚುವ ಕಾರ್ಯ ನಡೆದಿದೆ. ಕ್ಷೇತ್ರದ ಶಾಸಕರಿಗೆ ಬಿದರಹಳ್ಳಿ ರಸ್ತೆ ಕಾಣುತ್ತಿಲ್ಲವೇ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಭೀಮನ ಕೊಲ್ಲಿ ಶುಂಠಿ ಬೆಳೆಗಾರರ ಸಭೆಗೆ ಹೋಗುವಾಗ ರಸ್ತೆ ಹಳ್ಳಗುಂಡಿಗಳನ್ನು ನೋಡಿ ದಿಢೀರನೆ ಹಳ್ಳ ಕೊಳ್ಳಗಳ ರಸ್ತೆಯಲ್ಲಿ ಕುಳಿತು ಜಾನುವಾರುಗಳ ಮೂಲಕ ಪ್ರತಿಭಟಿಸಿದರು.ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಮುಖ್ಯಮಂತ್ರಿಗಳು ಬರುತ್ತಾರೆ ಎಂದು ರಾಷ್ಟ್ರೀಯ ಹೆದ್ದಾರಿಗಳ ಹಳ್ಳಕೊಳ್ಳ ಮುಚ್ಚುತ್ತಾರೆ. ಇದೇ ಕ್ಷೇತ್ರದ ಕಾಡಂಚಿನ ಭಾಗದಲ್ಲಿರುವ ರೈತರು ಜಾನುವಾರುಗಳು ತಿರುಗಾಡುವ ರಸ್ತೆ ಅವ್ಯವಸ್ಥೆಯಾಗಿದೆ. ಇದು ಶಾಸಕರಿಗೆ, ಅಧಿಕಾರಿಗಳಿಗೆ ಕಾಣುತ್ತಿಲ್ಲವೇ? ಈ ಭಾಗದ ಜನರು ಪ್ರಾಣಿಗಳೇ? ಯಾಕೆ ಸರ್ಕಾರ ಈ ಬಗ್ಗೆ ಚಿಂತನೆ ನಡೆಸುತ್ತಿಲ್ಲ? ಕೂಡಲೇ ರಸ್ತೆ ಸರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯ ಮುಖ್ಯ ಕೇಂದ್ರದಲ್ಲಿ ಸಂಬಂಧಪಟ್ಟ ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.
ಬೇಕೇ ಬೇಕು ನ್ಯಾಯ ಬೇಕು, ಕಾಡಂಚಿನ ಹಳ್ಳಿಗಳ ರಸ್ತೆ ದುರಸ್ತಿ ಆಗಲೇಬೇಕು ಎಂದು ಘೋಷಣೆ ಕೂಗಿ ಸ್ವಲ್ಪ ಕಾಲ ಪ್ರತಿಭಟಿಸಿದರು.ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಸುನಿಲ್, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಗುಂಡ್ಲುಪೇಟೆ ನಾಗಾರ್ಜುನ, ಪಿ. ಸೋಮಶೇಖರ್, ಸುರೇಶ್ ಶೆಟ್ಟಿ, ಮರಿಸ್ವಾಮಿ ನಾಯಕ, ಸುನಿಲ್ ಕುಮಾರ್, ಕೆಂಡಗಣ್ಣಸ್ವಾಮಿ, ಪರಶಿವಮೂರ್ತಿ, ಅಂಬಳೆ ಮಂಜುನಾಥ್, ಮಲ್ಲೇಶ್, ರಂಗರಾಜು, ಬನ್ನೂರು ಸೂರಿ, ಶಿವಸ್ವಾಮಿ ಇದ್ದರು.