ಬಸವರಾಜ ಸರೂರರಾಣಿಬೆನ್ನೂರು: ಪ್ರಸಕ್ತ ವರ್ಷ ಬೇಸಿಗೆ ಪ್ರಾರಂಭದಲ್ಲಿಯೇ ವಾತಾವರಣದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಕೆಲವು ಕಡೆ ಮನುಷ್ಯರು ನೀರಿಗಾಗಿ ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ಕೃಷ್ಣಮೃಗ ಅಭಯಾರಣ್ಯದಲ್ಲಿನ ವನ್ಯಜೀವಿಗಳಿಗೆ ತೊಂದರೆಯಾಗಬಾರದು ಎಂಬ ಚಿಂತನೆಯಿಂದ ವನ್ಯಧಾಮದ ಪ್ರದೇಶದಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ.ಅಭಯಾರಣ್ಯವು ಒಟ್ಟು 11,950 ಹೆಕ್ಟೇರ್ ವ್ಯಾಪ್ತಿ ಹೊಂದಿದ್ದು, 2015ರ ಸೆಪ್ಟಂಬರ್ ವರದಿ ಪ್ರಕಾರ 7100ಕ್ಕೂ ಅಧಿಕ ಕೃಷ್ಣಮೃಗ, ಜಿಂಕೆ ಹಾಗೂ ಕಾಡುಹಂದಿ, ಗುಳ್ಳೆನರಿ, ತೋಳ, ನರಿ, ಕತ್ತೆಕಿರುಬ ಹಾಗೂ ನೂರಾರು ಬಗೆಯ ಪಕ್ಷಿಗಳು ಅಭಯಾರಣ್ಯದಲ್ಲಿ ಆಶ್ರಯ ಪಡೆದುಕೊಂಡಿವೆ. ಆಗಾಗ ಚಿರತೆಗಳು ಕಾಣಸಿಗುತ್ತಿವೆ.ನೀರಿನ ವ್ಯವಸ್ಥೆ: ಸದ್ಯ ಬಿಸಿಲಿನ ಪ್ರಖರತೆಗೆ ಅಭಯಾರಣ್ಯದಲ್ಲಿರುವ ಕೆರೆ, ಹೊಂಡಗಳಲ್ಲಿ ನೀರಿಲ್ಲ. ಇದರಿಂದ ಮುಂಜಾಗ್ರತೆ ವಹಿಸಿದ ಅರಣ್ಯ ಅಧಿಕಾರಿಗಳು ಪ್ರಾಣಿಗಳಿಗೆ ಸಮರ್ಪಕ ನೀರು ಒದಗಿಸುವ ನಿಟ್ಟಿನಲ್ಲಿ ಕೃಷ್ಣಮೃಗ ಅಭಯಾರಣ್ಯ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ 35 ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಅವುಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ ಪ್ರಾಣಿಗಳ ದಾಹ ತೀರಿಸಲು ಮುಂದಾಗಿದ್ದಾರೆ.ನೀರಿಗಾಗಿ ಹೊರಹೋಗದಂತೆ ಕ್ರಮ: ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ನೀರು ಹಾಗೂ ಆಹಾರ ದೊರಕದ ಕಾರಣ ಪ್ರಾಣಿಗಳು ರೈತರ ಜಮೀನುಗಳತ್ತ ಮುಖ ಮಾಡುತ್ತಿವೆ. ಬೇಸಿಗೆ ದಿನಗಳಲ್ಲಂತೂ ಕೃಷ್ಣಮೃಗಗಳಿಗೆ ಹಸಿರು ಕಾಣುವುದು ಕಷ್ಟಕರವಾಗುತ್ತದೆ. ಆದ್ದರಿಂದ ಅವು ಸುತ್ತಮುತ್ತಲಿನ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ತಿನ್ನುತ್ತಿವೆ. ಇನ್ನು ರೈತರ ಜಮೀನಿಗೆ ಬೆಳೆ ಹಾಳು ಮಾಡಬಾರದು ಎನ್ನುವ ಉದ್ದೇಶದಿಂದ ತೊಟ್ಟಿಗಳಲ್ಲಿ ನೀರು ಹಾಕಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಕೃಷ್ಣಮೃಗ ಹಾಗೂ ಜಿಂಕೆಗಳನ್ನು ಹುಡುಕಿಕೊಂಡು ಬರುವ ಚಿರತೆಗಳು ಆಕಳು, ನಾಯಿ, ಎತ್ತುಗಳ ಮೇಲೆ ದಾಳಿ ಮಾಡುತ್ತಿವೆ ಎಂಬುದು ಅರಣ್ಯ ಪ್ರದೇಶ ಅಂಚಿನ ಜಮೀನುಗಳ ರೈತರ ಆರೋಪವಾಗಿದೆ.