ಹೊಸಪೇಟೆ: ಉಡುಪಿ ಶ್ರೀಕೃಷ್ಣ ಮಠದಲ್ಲಿ 2026ರ ಜನವರಿ 18ರಿಂದ ಶಿರೂರು ಮಠದ ಪರ್ಯಾಯ ಅವಧಿ ಆರಂಭವಾಗಲಿದ್ದು, ಎಲ್ಲ ಭಕ್ತರನ್ನೂ ಒಂದೇ ಭಾವದಲ್ಲಿ, ಒಂದೇ ರೀತಿಯಲ್ಲಿ ಕಾಣುವ ವ್ಯವಸ್ಥೆಯೂ ಬರಲಿದೆ. ಎಲ್ಲರಿಗೂ ಭಗವಂತನ ಸೇವೆ ಮಾಡುವುದಕ್ಕೆ ಕೂಡ ಅವಕಾಶ ಸಿಗಲಿದೆ ಎಂದು ಸರ್ವಜ್ಞಪೀಠ ಏರಲಿರುವ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹೇಳಿದರು.
ಚತುರ್ವೇದಗಳು ಸನಾತನ ಧರ್ಮದ ದಿಕ್ಸೂಚಿಗಳಾಗಿದ್ದು, ಅವುಗಳ ಶ್ರವಣದಿಂದಲೂ ಪುಣ್ಯ ಪ್ರಾಪ್ತಿ ನಿಶ್ಚಿತ. ಪರ್ಯಾಯ ಎಂದರೆ ಅದು ಸ್ವಾಮಿಗಳ ಪ್ರತಿಷ್ಠೆಯಲ್ಲ, ಅದು ಎಲ್ಲ ಭಕ್ತರೂ ಒಳಗೊಳ್ಳುವ ಪುಣ್ಯ ಕೆಲಸ. ತಮ್ಮೆಲ್ಲರ ಪರವಾಗಿ ದೇವರಿಗೆ ಪೂಜೆ ಮಾಡುವುದಕ್ಕೆ ಮಾತ್ರ ನಾವು ಅಲ್ಲಿರುತ್ತೇವೆ. ಹೀಗಾಗಿ ಭಕ್ತರು ಉಡುಪಿಗೆ ದೊಡ್ಡ ಸಂಖ್ಯೆಯಲ್ಲಿ ಬಂದು ಶ್ರೀಕೃಷ್ಣ ಮುಖ್ಯಪ್ರಾಣನ ಕೃಪೆಗೆ ಪಾತ್ರರಾಗಬೇಕು. ದಾನ, ಧರ್ಮಗಳನ್ನು ಹೆಚ್ಚು ಮಾಡುವ ಮೂಲಕ ಸ್ಥಿತಿವಂತರು ತಮ್ಮ ಕೈಲಾದ ಕೊಡುಗೆಯನ್ನು ಸಮಾಜಕ್ಕೆ ಸಲ್ಲಿಸುತ್ತ ಇರಬೇಕು ಎಂದರು.
ಇದಕ್ಕೂ ಮೊದಲು ಬೆಳಗ್ಗೆ ಪಾದಗಟ್ಟೆ ಆಂಜನೇಯ ದೇವಸ್ಥಾನದಿಂದ ವಡಕರಾಯ ದೇವಸ್ಥಾನದವರೆಗೆ ಶ್ರೀಗಳ ಶೋಭಾಯಾತ್ರೆ ನಡೆಯಿತು. ಸಂಜೆ ನಗರದ ಹಲವು ಭಕ್ತರ ಮನೆಗಳಲ್ಲಿ ಶ್ರೀಗಳಿಗೆ ಪಾದಪೂಜೆ ಸೇವೆ ನಡೆಯಿತು.ಹೊಸಪೇಟೆ ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ. ದಿವಾಕರ್, ಕಾರ್ಯದರ್ಶಿ ನರಸಿಂಹಮೂರ್ತಿ (ಅಪ್ಪಣ್ಣ), ವಿಷ್ಣು ಸೇವಾ ಸಮಿತಿಯ ಶ್ರೀಪತಿ, ನರಸಿಂಹಾಚಾರ್, ವಾದಿರಾಜ ಭಟ್ ಮತ್ತಿತರರಿದ್ದರು.