ಕನ್ನಡಪ್ರಭ ವಾರ್ತೆ ವಿಜಯಪುರಕಳೆದ ಬಾರಿ ವೀಣಾ ಕಾಶಪ್ಪನವರ ಇದ್ದಾಗ ಭಿನ್ನಮತ ಇತ್ತು. ಆದರೆ, ಈಗ ಬಾಗಲಕೋಟೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲ ಶಾಸಕರು ಸೇರಿಯೇ ಪ್ರಚಾರ ಮಾಡಿದ್ದೇವೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ನಾವು ಬಾಗಲಕೋಟೆ, ವಿಜಯಪುರ, ಹಾವೇರಿಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕೂಡಲ ಸಂಗಮ ಶ್ರೀಗಳ ಕುರಿತು ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿಕೆ ವಿಚಾರವನ್ನು ಸ್ವಾಮೀಜಿಯವರಿಗೆ ಕೇಳಬೇಕು. ನಿರಾಣಿಯವರಿಗೆ ಕೇಳಬೇಕು, ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಬಾಗಲಕೋಟೆ ಟಿಕೆಟ್ ವಿಚಾರಕ್ಕೆ ವಿಜಯಾನಂದ ಕಾಶಪ್ಪನವರ ಜೊತೆಗೆ ಕೂಡಲ ಸಂಗಮಶ್ರೀ ದೆಹಲಿಗೆ ಹೋದ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಹೋದರೇನು ಬಿಟ್ಟರೇನು ನಾನೇ ಹೋಗಿಲ್ಲ. ಒಮ್ಮೆ ಹೈಕಮಾಂಡ್ ತೀರ್ಮಾನ ಮಾಡಿದ ಮೇಲೆ ಮುಗಿತು. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ತಿಳಿಸಿದರು.ಗ್ಯಾರಂಟಿಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಗರಂ ಸಚಿವ ಶಿವಾನಂದ ಪಾಟೀಲ, ₹2 ಸಾವಿರದಿಂದ ಯಾರಾದರೂ ದಾರಿ ಬಿಡ್ತಾರಾ? ಅವರು ಅಪಪ್ರಚಾರ ಮಾಡ್ತಾರೆ ಎಂದು ನೀವು ಹಾಗೆ ಮಾಡಬಾರದು ಎಂದ ಅವರು, ಬಡತನ ರೇಖೆಗಿಂತ ಕೆಳಗಿರುವವರಿಗೆ ವರ್ಷಕ್ಕೆ 60 ಸಾವಿರ ಸಿಕ್ಕರೆ ಅವರ ಬದುಕು ಹಸನಾಗುತ್ತದೆ. ಅವರು ತಮ್ಮ ಜೀವನ ಕಟ್ಟಿಕೊಳ್ತಾರೆ. ಬರ ಇದೆ, ಕೂಲಿ ಸಿಗುತ್ತಿಲ್ಲ. ಸರ್ಕಾರ ಅವರನ್ನು ಬದುಕಿಸಬೇಕಲ್ಲ. ಮೋದಿ ಕಾಲದಲ್ಲಿ ಯಾವುದು ಸಸ್ತಾ ಇಲ್ಲ, ಮೋದಿ ಕಾಲದಲ್ಲಿ ಎಲ್ಲ ತುಟ್ಟಿಯಾಗಿದೆ ಎಂದು ಶಿವಾನಂದ ಪಾಟೀಲ್ ಟೀಕಿಸಿದರು.ಕೋಟ್
ಹಿಂದೆ ಯತ್ನಾಳ್ ಬಿಜೆಪಿ ಬಿಟ್ಟು ಹೋಗಿದ್ರಲ್ವಾ? ಅವರು ಬೇರೆ ಪಕ್ಷಕ್ಕೆ ಹೋಗಲು ಸ್ವಾತಂತ್ರ್ಯ ಇತ್ತಲ್ವಾ? ಹಾಗೆಯೇ ನನ್ನ ಮಗ ಹೋದರೆ ಏನ್ ತಪ್ಪು?, ಇದರಿಂದ ಏನ ಆಗೋದಿದೆ. ನನ್ನ ಮಗಳು ಬೇರೆ ಪಕ್ಷಕ್ಕೆ ಹೋದರೂ ತಪ್ಪಿಲ್ಲ, ನಾನು ಎಲ್ಲಿರಬೇಕೋ ಅಲ್ಲಿದ್ದೇನೆ. ಆತ ಹೋಗಿ ಎರಡು ವರ್ಷ ಆಗಿದೆ, ಅದನ್ನ ಈಗ ಪ್ರಚಾರ ಮಾಡ್ತಿದ್ದಾರೆ. ಅದು ಅವರ ಹಣೆ ಬರಹ. ಬಿಜೆಪಿಯವರಿಗೆ ರಾಜಕೀಯ ಮಾಡಲು ಬೇರೆ ಬೇರೆ ಅಭಿವೃದ್ಧಿ ಕೆಲಸಗಳಿವೆ. ಆದರೆ ಇವರು ಅದನ್ನೆಲ್ಲ ಬಿಟ್ಟು ಜನರನ್ನು ಭ್ರಮನಿರಸನ ಮಾಡುತ್ತಿದ್ದಾರೆ.ಶಿವಾನಂದ ಪಾಟೀಲ, ಸಚಿವ