ಪ್ರತಿಯೊಬ್ಬರು ಸೈಬರ್ ಕ್ರೈಂ ಬಗ್ಗೆ ಜಾಗೃತರಾಗಬೇಕು

KannadaprabhaNewsNetwork | Published : Sep 23, 2024 1:22 AM

ಸಾರಾಂಶ

ಸೈಬರ್ ಕ್ರೈಂನಿಂದ ಜಿಲ್ಲೆಯ ಜನರು ಅಂದಾಜು ₹5 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಸೈಬರ್ ಕ್ರೈಂ ಬಗ್ಗೆ ಜಾಗೃತರಾಗಿ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಐಪಿಎಸ್ ಆಗಿ ಪದೋನ್ನತಿ ಹೊಂದಿದ ಪ್ರಸನ್ ದೇಸಾಯಿ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸೈಬರ್‌ ಕ್ರೈಂನಿಂದ ಜಿಲ್ಲೆಯ ಜನರು ಅಂದಾಜು ₹5 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಸೈಬರ್ ಕ್ರೈಂ ಬಗ್ಗೆ ಜಾಗೃತರಾಗಿ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಐಪಿಎಸ್‌ ಆಗಿ ಪದೋನ್ನತಿ ಹೊಂದಿದ ಪ್ರಸನ್ ದೇಸಾಯಿ ಸಲಹೆ ನೀಡಿದರು.

ಇಲ್ಲಿಯ ಜ್ಯೋತಿ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ(ಬ್ಯಾಂಕ್‌)ಯ ವಾರ್ಷಿಕ ಸರ್ವಸಾಧರಣ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಮೊಬೈಲ್ ಹೇಗೆ ಬಳಸಬೇಕು ಎಂಬುವುದರ ಮೇಲೆ ಭವಿಷ್ಯ ನಿಂತಿದೆ. ಮೊಬೈಲ್ ಬಳಕೆ ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಇತ್ತೀಚಿಗೆ ಸೈಬರ್ ಕ್ರೈಂ ಜಾಸ್ತಿಯಾಗುತ್ತಿದ್ದು, ದೇಶದ 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂತಹ ಅಪರಾಧ ಪ್ರಕರಣ ನಡೆಯುತ್ತಿವೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿದ್ದುಕೊಂಡು ಸೈಬರ್ ಕ್ರೈಂ ಅಪರಾಧಿಗಳು ಜನರ ಹಣವನ್ನು ಕಂಪ್ಯೂಟರ್‌ ಬಳಸಿಕೊಂಡು ಅಮಾಯಕರ, ಶಿಕ್ಷಣವಂತರ ದುಡ್ಡನ್ನು ಲೂಟಿ ಮಾಡುತ್ತಿದ್ದಾರೆ. ದೇಶದ 35 ಹಾರ್ಟ್‌ಸ್ಪಾಟ್‌ ಸ್ಥಳಗಳಲ್ಲಿದ್ದುಕೊಂಡು ಅಪರಾಧವನ್ನು ಎಸಗುತ್ತಿದ್ದಾರೆ ಎಂದರು.

ನೆಟ್ ಬ್ಯಾಂಕಿಂಗ್, ಎಟಿಎಂ ಬಳಸುವಾಗ, ಏನಾದರೂ ಗಿಪ್ಟ್ ಬಂದಿದೆ ಎಂದು ಆಸೆ ತೋರಿಸುವುದು, ಇನ್ನೂ ಹಲವಾರು ಕಾರಣಗಳನ್ನು ನೀಡಿ ಸೈಬರ್ ಕ್ರೈಂ ಅಪರಾಧಿಗಳು ಜನರನ್ನು ಮರಳು ಮಾಡಿ ದುಡ್ಡು ಹೊಡೆಯುತ್ತಿದ್ದಾರೆ. ನಿಮ್ಮಿಂದ ಏನಾದರೂ ಹಣಹೋದರೆ (ವರ್ಗಾವಣೆ)ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದರೆ ಅಪರಾಧಿಗಳನ್ನು ಪತ್ತೆ ಹಚ್ಚಲು ಸಹಾಯಕಾರಿಯಾಗುತ್ತದೆ ಎಂದು ಹೇಳಿದರು.

ಮಕ್ಕಳು ಒಳ್ಳೆಯ ಗುರಿಯನ್ನು ಸಾಧಿಸಬೇಕಾದರೆ ಪಾಲಕರು ಅವರಿಗೆ ನೆರವಾಗಬೇಕು. ಪ್ರತಿಭಾವಂತರು ತಮ್ಮ ಗುರಿ ಸಾಧಿಸಲು ನಮ್ಮಿಂದ ಏನಾದರೂ ಮಾರ್ಗದರ್ಶನ ಬೇಕಾದರೆ ಪಡೆದುಕೊಳ್ಳಬಹುದು ಎಂದರು.

ಜ್ಯೋತಿ ಕೋ-ಆಫ್ ಕ್ರೆಡಿಟ್ ಸೊಸಾಯಿಟಿ(ಬ್ಯಾಂಕು) ಅಧ್ಯಕ್ಷ ಮಲ್ಲನಗೌಡ ನಾಡಗೌಡರ ಮಾತನಾಡಿ, ಪ್ರಸಕ್ತ ವರ್ಷ ಬ್ಯಾಂಕ್‌ 1,14,12,000 ರು. ನಿವ್ವಳ ಲಾಭ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಬ್ಯಾಂಕು ಪ್ರಗತಿಯತ್ತ ಸಾಗುತ್ತಿದೆ ಎಂದರು.

ಬ್ಯಾಂಕಿನ ನಿರ್ದೇಶಕ ಅಶೋಕ ಲಾಗಲೋಟಿ ಮಾತನಾಡಿ, 341 ಸದಸ್ಯರೊಂದಿಗೆ ಆರಂಭಗೊಂಡ ಬ್ಯಾಂಕ್‌ ಇಂದು 6062 ಸದಸ್ಯರನ್ನು ಹೊಂದಿ 4,90,65,332 ಶೇರು ಬಂಡವಾಳ ಹೊಂದಿದೆ ಎಂದು ಹೇಳಿದರು.

ಈ ವೇಳೆ ಉಪಾಧ್ಯಕ್ಷ ಪ್ರಕಾಶ ನ್ಯಾಮಗೌಡರ, ನಿರ್ದೇಶಕ ಸಿದ್ದಣ್ಣ ಕಾಖಂಡಕಿ, ಬಸಲಿಂಗಪ್ಪ ಹೋಕ್ರಾಣಿ, ಅಶೋಕ ಲಾಗಲೋಟಿ, ನಿಂಗಣ್ಣ ಗೋಡಿ, ಬಾಳಪ್ಪ ಹಟ್ಟಿ, ಮುತ್ತಪ್ಪ ಕೆಂಪನ್ನವರ, ಧರಿಯಪ್ಪ ಯಳ್ಳಿಗುತ್ತಿ, ಪ್ರಭಾತಿ ಹೆರಕಲ್, ಪಾರ್ವತಿ ಜಾಗನೂರ, ಪರಸಪ್ಪ ಮಾದರ, ಕಾರ್ಮಿಕ ಇಲಾಖೆಯ ಅಧಿಕಾರಿ ರಮೇಶ ಸುಂಬದ, ಹೆಸ್ಕಾಂ ಸಿಪಿಐ ವೆಂಕಟೇಶ ಮುರನಾಳ, ಅಬಕಾರಿ ಇಲಾಖೆಯ ಸಿಪಿಐ ವೆಂಕಟೇಶ ಮುರನಾಳ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಬಾಬು ನಾಡಗೌಡರ ಇದ್ದರು. ನೀಲಪ್ಪ ಗಾಣಿಗೇರ ನಿರೂಪಿಸಿದರು. ಸಾಧಕರು,ಎಸ್.ಎಸ್.ಎಲ್.ಸಿ,ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು.

---

ಕೋಟ್..

ಬೈಕುಗಳಲ್ಲಿ ತೆರಳುವಾಗ ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು. ಶೇ.70ರಷ್ಟು ಜನ ಹೆಲ್ಮೇಟ್ ಇಲ್ಲದೇ ಅಪಘಾತವಾದಾಗ ಸಾವು ಕಾಣುತ್ತಿದ್ದಾರೆ. ಕುಟುಂಬ, ಜೀವನಕ್ಕೆ ಹಾಗೂ ಪ್ರಾಣವನ್ನು ಉಳಿಸಿಕೊಳ್ಳಲು ಹೆಲ್ಮೇಟ್ ಇಲ್ಲದೇ ಬೈಕ್‌ ಓಡಿಸಬೇಡಿ.

-ಪ್ರಸನ್ ದೇಸಾಯಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ

Share this article