ಮರ ಬೆಳೆಸಿ ಪರಿಸರ ಕಾಪಾಡಲು ಪ್ರತಿಯೊಬ್ಬರೂ ಕೈಜೋಡಿಸಿ: ನ್ಯಾ. ಭಾನುಮತಿ

KannadaprabhaNewsNetwork | Published : Jun 6, 2025 12:05 AM
ಚಿಕ್ಕಮಗಳೂರುಇಂದಿನ ಋತುಮಾನಗಳ ವ್ಯತ್ಯಾಸ, ತಾಪಮಾನದ ಹೆಚ್ಚಳದಲ್ಲಿ ಪರಿಸರದ ಪಾತ್ರ ಮುಖ್ಯವಾಗಿದೆ. ಸ್ವಚ್ಛ, ಸುಂದರ ಪರಿಸರ ಕಾಪಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಹಸಿರು ಪರಿಸರ ಪ್ರೀತಿ ಹೆಚ್ಚಲು, ಪರಿಸರದೊಂದಿಗೆ ಬಾಂಧವ್ಯ ಬೆಳೆಯಲು ಮನೆಯ ಸುತ್ತಮುತ್ತ ಮರ ಗಿಡಗಳನ್ನು ಬೆಳೆಸಬೇಕೆಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಭಾನುಮತಿ ಹೇಳಿದರು.

‘ಪ್ಲಾಸ್ಟಿಕ್ ತ್ಯಜಿಸಿ, ಪ್ಲಾಸ್ಟಿಕ್ ಬಳಸುವುದನ್ನು ಕೊನೆಗೊಳಿಸಿ’, ವಿಶ್ವ ಪರಿಸರ ದಿನಾಚರಣೆಯಲ್ಲಿ ಕರೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇಂದಿನ ಋತುಮಾನಗಳ ವ್ಯತ್ಯಾಸ, ತಾಪಮಾನದ ಹೆಚ್ಚಳದಲ್ಲಿ ಪರಿಸರದ ಪಾತ್ರ ಮುಖ್ಯವಾಗಿದೆ. ಸ್ವಚ್ಛ, ಸುಂದರ ಪರಿಸರ ಕಾಪಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಹಸಿರು ಪರಿಸರ ಪ್ರೀತಿ ಹೆಚ್ಚಲು, ಪರಿಸರದೊಂದಿಗೆ ಬಾಂಧವ್ಯ ಬೆಳೆಯಲು ಮನೆಯ ಸುತ್ತಮುತ್ತ ಮರ ಗಿಡಗಳನ್ನು ಬೆಳೆಸಬೇಕೆಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಭಾನುಮತಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಆಯುಷ್ ಇಲಾಖೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. 1972ರಲ್ಲಿ ವಿಶ್ವ ಸಂಸ್ಥೆ ವಿಶ್ವ ಪರಿಸರ ದಿನವನ್ನು ಘೋಷಿಸಿತು. ವಿಶ್ವದಾದ್ಯಂತ ಸುಮಾರು 143 ದೇಶಗಳು ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸುತ್ತಿವೆ. ಪರಿಸರ ಸಂರಕ್ಷಣೆಗೆ ಜಾಗೃತಿ ಮೂಡಿಸುವುದು ಇದರ ಮೂಲ ಉದ್ದೇಶ ವಾಗಿದೆ ಎಂದರು. ಆಧುನಿಕ ಶೈಲಿಯಿಂದ ಪರಿಸರದ ಮೇಲೆ ಅನೇಕ ರೀತಿಯ ದುಷ್ಪರಿಣಾಮಗಳು ಉಂಟಾಗುತ್ತಿವೆ. ಪರಿಸರ ಕಾಳಜಿ, ಪ್ರತಿ ಯೊಬ್ಬರಲ್ಲೂ ಮೂಡಬೇಕು. ‘ಪ್ಲಾಸ್ಟಿಕ್ ತ್ಯಜಿಸಿ, ಪ್ಲಾಸ್ಟಿಕ್ ಬಳಸುವುದನ್ನು ಕೊನೆಗೊಳಿಸಿ’ ಎಂಬುದು ಈ ವರ್ಷದ ವಿಶ್ವ ಪರಿಸರ ದಿನಾಚರಣೆ ಧ್ಯೇಯವಾಕ್ಯವಾಗಿದೆ. ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸುವುದರಿಂದ ಗಿಡ ಮರಗಳ ಬಗ್ಗೆ ಪ್ರೀತಿ ಹೆಚ್ಚಿ ಭವಿಷ್ಯದಲ್ಲಿ ಹಸಿರು ಪರಿಸರ, ಕಾಡು ಕಾಪಾಡಲು ಸಾಧ್ಯವಾಗುತ್ತದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಸುಜೇಂದ್ರ ಮಾತನಾಡಿ, ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು. ಹಳೆಯ ಮತ್ತು ತ್ಯಾಜ್ಯ ಉತ್ಪನ್ನ ಗಳನ್ನು ಮರುಬಳಕೆ ಮಾಡಬೇಕು. ಮರ ಗಿಡಗಳನ್ನು ನೆಡುವ ಮೂಲಕ ಪರಿಸರ ಕಾಪಾಡಬೇಕು. ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಬೆಳೆಸುವಂತೆ ಪ್ರೇರೇಪಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ ಪರಿಸರ ಸ್ವಚ್ಛತೆಗೆ ಕೈಜೋಡಿಸ ಬೇಕು ಎಂದು ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ಮರಗಿಡಗಳನ್ನು ಕಡಿಯುತ್ತಿರುವುದರಿಂದ ಪರಿಸರದ ಅಸಮತೋಲನ ಉಂಟಾಗುತ್ತಿದೆ. ಇದರಿಂದ ಉಸಿರಾಡಲು ಪರಿ ಶುದ್ಧವಾದ ಗಾಳಿ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಪರಿಸರ ಸಮತೋಲನ ಕಾಪಾಡಲು ಹಾಗೂ ಮುಂದಿನ ಪೀಳಿಗೆಗೆ ಉತ್ತಮವಾದ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಪ್ರತಿಯೊಬ್ಬರೂ ಮರ ಗಿಡಗಳನ್ನು ನೆಟ್ಟು ಪೋಷಿಸ ಬೇಕು ಎಂಬ ದೃಢ ಸಂಕಲ್ಪ ಮಾಡಿದರೆ ಉತ್ತಮ ಪರಿಸರ ಸೃಷ್ಟಿಸಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಭಾಗ್ಯ ಮಾತನಾಡಿದರು. ನ್ಯಾಯಾಧೀಶರಾದ ಪ್ರಕಾಶ್, ಕುಲಕರ್ಣಿ ಗುರುಪ್ರಸಾದ್ ರಾಘವೇಂದ್ರ, ಸುಜಾತಾ, ಎಸ್.ಬಿ.ದ್ಯಾವಪ್ಪ, ಜೆ.ಲತಾ, ಎಚ್.ಟಿ.ಅನುರಾಧ, ಕೆ.ಎಸ್.ಶರತ್‌ಕುಮಾರ್, ಎಸ್.ಆರ್.ನಂದಿನಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಗೀತಾ ಉಪಸ್ಥಿತರಿದ್ದರು. 5 ಕೆಸಿಕೆಎಂ 3ಚಿಕ್ಕಮಗಳೂರಿನ ಆಯುಷ್ ಇಲಾಖೆ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಯನ್ನು ಸಸಿ ನೆಡುವ ಮೂಲಕ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಭಾನುಮತಿ ಉದ್ಘಾಟಿಸಿದರು.