ಕನ್ನಡಪ್ರಭ ವಾರ್ತೆ ಬೆಂಗಳೂರು
ಶನಿವಾರ ನಗರದಲ್ಲಿ ಸ್ನೇಹ ಬುಕ್ ಹೌಸ್ ಪ್ರಕಾಶನದ ಡಾ. ಶಾರದಾ ಚೈತ್ರ ಅವರ ನಿಗಳ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯುವ ಲೇಖಕರು ನಿರಂತರವಾಗಿ ಬರೆಯುತ್ತಿರಬೇಕು. ಬರೆದಿದ್ದೆಲ್ಲಾ ಕಾದಂಬರಿಯಾಗಲಿ, ಕತೆಯಾಗಲಿ ಎಂದು ನಿರೀಕ್ಷಿಸುವುದು ಬೇಡ. ಆದರೆ, ನೀವು ಬರೆಯುವ ಬರವಣಿಗೆ ಓದುಗನ ಮನಸ್ಸಿಗೆ ಮುಟ್ಟಿದರೆ ಅದೇ ಸಾಹಿತ್ಯವಾಗುತ್ತದೆ ಎಂದು ಬರಹಗಾರರಿಗೆ ಕಿವಿಮಾತು ಹೇಳಿದರು.
ಸಾಹಿತ್ಯ, ಕಲೆಗಳ ಸೃಷ್ಟಿಯಲ್ಲಿ ಹೆಣ್ಣು-ಗಂಡು ಎಂಬ ಭೇದ ಗೌಣವಾಗುತ್ತದೆ. ಕಲೆ, ಸಾಹಿತ್ಯ ಸರಾಗವಾಗಿ ಮೂಡಬೇಕು. ಮೌಲ್ಯ, ತತ್ವಶಾಸ್ತ್ರ, ವೇದಾಂತ, ಆಧುನಿಕ ಯುಗದಲಿ ಮೌಲ್ಯಗಳು ಕಣ್ಮರೆಯಾಗುವ ಸಂದರ್ಭವನ್ನು ನಿಗಳ ಕಾದಂಬರಿಯಲ್ಲಿ ಒತ್ತಿ ಹೇಳಲಾಗಿದೆ. ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿದೆ. ಇಂತಹ ಇನ್ನಷ್ಟು ಕಾದಂಬರಿಗಳು ಮೂಡಿ ಬರಲಿ ಎಂದು ಆರ್.ಗಣೇಶ್ ಶುಭ ಹಾರೈಸಿದರು.ಲೇಖಕಿ ಡಾ. ಶಾರದಾ ಚೈತ್ರ ಮಾತನಾಡಿ, ಇತ್ತೀಚೆಗೆ ಮಹಿಳೆಯರು, ತಮ್ಮ ಕಷ್ಟ-ನೋವುಗಳನ್ನು ನಿರ್ಭೀತಿಯಿಂದ ಬರೆಯುತ್ತಿದ್ದಾರೆ. ಕುದಿಯುವ ನೀರಲ್ಲಿ ಕುದ್ದು ಆವಿಯಾಗುವ ಅಥವಾ ಅಗ್ನಿಕುಂಡದಲ್ಲಿ ಸುಟ್ಟು ಭಸ್ಮವಾಗಿ ಅಗ್ನಿಹಂಸದಂತೆ ಮೇಲೆಳುತ್ತಿದ್ದಾರೆ. ನಿಗಳ ಕಾದಂಬರಿ ಒಂದು ಆಧುನಿಕ ಸಮಾಜದ ತಲ್ಲಣವನ್ನು ಕಟ್ಟಿಕೊಡುತ್ತದೆ. ಈ ನನ್ನ ಕೃತಿ ಸಮುದ್ರದ ನೀರಿನಲ್ಲಿ ಒಂದು ಹನಿ ಎಂದು ಭಾವಿಸಿದ್ದೇನೆ ಎಂದರು.