ನಕಲಿ ಔಷಧಗಳ ಮರು ಪ್ಯಾಕಿಂಗ್ ಹಾಗೂ ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ಬಂಧನಕ್ಕೊಳಗಾಗಿರುವ ಆರೋಪಿ ವೀರೇಶ್ ಕುಮಾರ್ ಜೈನ್ ಕ್ಯಾನ್ಸರ್ ಸಂಬಂಧಿತ ನಕಲಿ ಔಷಧಿಯನ್ನು ನಗರದ 90ಕ್ಕೂ ಹೆಚ್ಚು ಆಸ್ಪತ್ರೆಗಳು ಹಾಗೂ ಕ್ಲಿನಿಕ್ಗಳಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಕಲಿ ಔಷಧಗಳ ಮರು ಪ್ಯಾಕಿಂಗ್ ಹಾಗೂ ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ಬಂಧನಕ್ಕೊಳಗಾಗಿರುವ ಆರೋಪಿ ವೀರೇಶ್ ಕುಮಾರ್ ಜೈನ್ ಕ್ಯಾನ್ಸರ್ ಸಂಬಂಧಿತ ನಕಲಿ ಔಷಧಿಯನ್ನು ನಗರದ 90ಕ್ಕೂ ಹೆಚ್ಚು ಆಸ್ಪತ್ರೆಗಳು ಹಾಗೂ ಕ್ಲಿನಿಕ್ಗಳಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ವೀರೇಶ್ ಕುಮಾರ್ ಜೈನ್ನನ್ನು ಶನಿವಾರ ಬಂಧಿಸಿದ ಎಸ್ಐಟಿ ಆತನ ಪ್ರಾಥಮಿಕ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಂಗಳವಾರ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಆರೋಪಿಗಳು ಕಡಿಮೆ ಬೆಲೆಯ ಔಷಧಿಗಳಿಗೆ ಬೇರೆ ಹೆಸರುಗಳನ್ನು ಮರುನಾಮಕರಣ ಮಾಡಿ ಮಾರಾಟ ಮಾಡುತ್ತಿದ್ದರು. ಹಾಗೆಯೇ, ಅವಧಿ ಮುಗಿದ ಔಷಧಿಗಳಿಗೆ ನಕಲಿ ಲೇಬಲ್ ಅಂಟಿಸಿ, ಹೊಸ ಕಂಟೈನರ್ಗಳಲ್ಲಿ ಮರುಪ್ಯಾಕ್ ಮಾಡುತ್ತಿದ್ದರು. ಮೆಡಿಕಲ್ ಶಾಪ್, ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳಿಗೆ ವಿತರಿಸುವ ಮೊದಲು, ಮಿನರ್ವ ಸರ್ಕಲ್ನಲ್ಲಿರುವ ಔಷಧ ಮಾರಾಟ ಏಜೆನ್ಸಿಯನ್ನು ದಾಸ್ತಾನು ಕೇಂದ್ರವಾಗಿ ಬಳಸಲಾಗುತ್ತಿತ್ತು ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ದಂಧೆಗೆ ಹಲವರ ಸಹಕಾರ:
ಈ ದಂಧೆ ಕರ್ನಾಟಕದ ಗಡಿಯಾಚೆಗೂ ವಿಸ್ತರಿಸಿದ್ದು ಸುಮಾರು 15ಕ್ಕೂ ಹೆಚ್ಚು ವೈದ್ಯಕೀಯ ಪ್ರತಿನಿಧಿಗಳು ವೀರೇಶ್ ಕುಮಾರ್ ದಂಧೆಗೆ ಸಹಕಾರ ನೀಡಿರುವ ಸಾಧ್ಯತೆಯಿದೆ. ಆರೋಪಿಗಳು, ನಕಲಿ ಔಷಧಗಳಿಗೆ ಲೇಬಲ್ಗಳನ್ನು ಟರ್ಕಿ ದೇಶದಿಂದ ಹಡಗು ಮೂಲಕ ಆಮದು ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಬಹುರಾಷ್ಟ್ರೀಯ ಕಂಪನಿ ಹಾಗೂ ಬೇರೆ ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಲೇಬಲ್ ಅಂಟಿಸಿ ಔಷಧ ಅಂಗಡಿ ಮತ್ತು ಆಸ್ಪತ್ರೆಗಳಿಗೆ ಮಾರಾಟ ಮಾಡಿ ವಂಚಿಸುತ್ತಿರುವುದು ತನಿಖೆ ವೇಳೆ ಗೊತ್ತಾಗಿದೆ.
ಪ್ರಕರಣದ ಹಿನ್ನೆಲೆ: ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಆಯುಕ್ತ ಶ್ರೀನಿವಾಸ್, ಬೆಂಗಳೂರು ದಕ್ಷಿಣ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ನೇತೃತ್ವ ತಂಡ ಆ.18ರಂದು ಬಿಡದಿಯ ಕುರುಬರಕೇರನ ಹಳ್ಳಿಯ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಸುಮಾರು 4.91 ಕೋಟಿ ರು. ಮೌಲ್ಯದ ನಕಲಿ ಔಷಧಗಳು, ಬಾಟಲಿಗಳು, ನಕಲಿ ಲೇಬಲ್ಗಳು, ಸ್ಟ್ಯಾಂಪ್ಗಳು, ಪ್ಯಾಕೇಜಿಂಗ್ ಸಾಮಗ್ರಿ ಮತ್ತು ಉಪಕರಣಗಳನ್ನು ವಶಪಡಿಸಿಕೊಂಡಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.