ಗಂಗಾವತಿ: ನಗರದ ಶ್ರೀ ಕೃಷ್ಣದೇವರಾಯ ಕಲಾಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ 5ನೇ ಕೊಪ್ಪಳ ಜಿಲ್ಲಾ ಸಮ್ಮೇಳನ ಜರುಗಿತು. ಕಾರ್ಯಕ್ರಮವನ್ನು ಸಂಘದ ರಾಜ್ಯಾಧ್ಯಕ್ಷ ಯು. ಬಸವರಾಜ ಉದ್ಘಾಟಿಸಿದರು.
ಹವಾಮಾನದ ಬದಲಾವಣೆಗಳಿಂದಾಗಿ ಮಳೆಯಾಶ್ರಯದಲ್ಲಿ ಕೃಷಿ ಮಾಡಲು ಸಾಧ್ಯವಾಗದೆ ಕೊಳವೆ ಬಾವಿಗಳ ಮೂಲಕ ಕೃಷಿ ಮಾಡಲು ಮುಂದಾಗಿದ್ದು, ರೈತರಿಗೆ ಇದುವರೆಗೆ 10 ಎಚ್ಪಿ ವರೆಗಿನ ಮೋಟರ್ಗೆ ಉಚಿತ ವಿದ್ಯುತ್ ಕೊಡಲಾಗುತ್ತಿತ್ತು. ಆದರೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ವಿದ್ಯುತ್ ಖಾಸಗೀಕರಣ ಮಸೂದೆಯ ಮೂಲಕ ರೈತರ ಪಂಪ್ಸೆಟ್ಗಳಿಗೆ ಡಿಜಿಟಲ್ ಸ್ಮಾರ್ಟ್ ಮೀಟರ್ ಅಳವಡಿಸಲು ಹೊರಡಿಸಿದೆ. ಮತ್ತೊಂದೆಡೆ ರೈತರು ಸ್ವಾವಲಂಬಿಗಳಾಗಿದ್ದು, ಬಿತ್ತನೆ ಬೀಜಗಳನ್ನು ಸಂಪೂರ್ಣವಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ವಹಿಸಿ ರೈತರ ಕೈಯನ್ನು ಬರದಾಗಿಸಿ ಕಂಪನಿಗಳಿಗೆ ಲಾಭ ಮಾಡುವ ಬೀಜ ಮಸೂದೆಯನ್ನು ಜಾರಿಗೆ ತರಲು ಬಿಜೆಪಿ ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.
ರೈತರು ಬೆಳೆದ ಎಲ್ಲ ಬೆಳೆಗಳಿಗೂ ಕೃಷಿ ತಜ್ಞ ಡಾ. ಎಂ.ಎಸ್. ಸ್ವಾಮಿನಾಥನ್ ಅವರ ಸಮಿತಿ ಶಿಫಾರಸಿನಂತೆ ಉತ್ಪಾದನಾ ವೆಚ್ಚಕ್ಕೆ ಶೇ. 50ರಷ್ಟು ಲಾಭಾಂಶವನ್ನು ಸೇರಿಸಿ ಬೆಲೆ ನಿಗದಿ ಮಾಡಲು ಬೇಕಾದ ಕಾನೂನನ್ನು ಜಾರಿಗೊಳಿಸಲು ರೈತ ಸಮುದಾಯ ಒತ್ತಡ ತಂದರೂ ಇದರ ಬಗ್ಗೆ ಕೇಂದ್ರ ಸರ್ಕಾರ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ ಎಂದರು.ನಿರೂಪಾದಿ ಬೆಣಕಲ್, ಸಂಗಮ್ಮ ಕುಷ್ಟಗಿ, ಬಸವರಾಜ್ ಎಂ., ಸುಂಕಪ್ಪ ಗದಗ, ಹುಲಿಗೆಮ್ಮ, ಬಾಲಾಜಿ, ಹುಸೇನಪ್ಪ ಕೆ., ಬಾಳಪ್ಪ ಹುಲಿಹೈದರ್, ಜಿ. ನಾಗರಾಜ್, ಶ್ರೀನಿವಾಸ ಹೊಸಳ್ಳಿ, ಅಕ್ಕಮ್ಮ, ಮಂಜುನಾಥ ಡಗ್ಗಿ, ಶಿವಣ್ಣ ಬೆಣಕಲ್, ಮುತ್ತಣ್ಣ ದಾಸನಾಳ್ ಹಾಗೂ ಪ್ರಮುಖರು ಭಾಗವಹಿಸಿದ್ದರು.