ರೈತರು ಹೇಳಿದ ದರ ನೀಡಲು ಕಾರ್ಖಾನೆಯವರು ಒಪ್ಪಿಗೆ ಸೂಚಿಸದ ಕಾರಣ ಗುರುವಾರ ಸಂಜೆ ದರ ನಿಗದಿಪಡಿಸಲು ನಡೆದ ಸಭೆಯು ಯಾವುದೇ ತೀರ್ಮಾನೆಕ್ಕೆ ಬರದೇ ಅಪೂರ್ಣಗೊಂಡಿತು.
ಕನ್ನಡಪ್ರಭ ವಾರ್ತೆ ಹಳಿಯಾಳ
ಪ್ರತಿ ಟನ್ ಕಬ್ಬಿಗೆ ಕೇವಲ ₹50 ದರ ಏರಿಸುವುದಾಗಿ ಅಂದರೇ ಈ ಮೊದಲು ಘೋಷಿಸಿದ ದರ ₹ 3050 ಬದಲು ₹3100 ನೀಡುವುದಾಗಿ ಕಾರ್ಖಾನೆ ಆಡಳಿತಾಧಿಕಾರಿಗಳು ನೀಡಿದ ಭರವಸೆಯನ್ನು ತಿರಸ್ಕರಿಸಿದ ರೈತರು ಪ್ರತಿ ಟನ್ ಕಬ್ಬಿಗೆ ₹3350 ದರ ನೀಡುವಂತೆ ಪಟ್ಟು ಹಿಡಿದರು. ಆದರೆ ರೈತರು ಹೇಳಿದ ದರ ನೀಡಲು ಕಾರ್ಖಾನೆಯವರು ಒಪ್ಪಿಗೆ ಸೂಚಿಸದ ಕಾರಣ ಗುರುವಾರ ಸಂಜೆ ದರ ನಿಗದಿಪಡಿಸಲು ನಡೆದ ಸಭೆಯು ಯಾವುದೇ ತೀರ್ಮಾನೆಕ್ಕೆ ಬರದೇ ಅಪೂರ್ಣಗೊಂಡಿತು.
ರೈತರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರಿಂದ ಮಾತುಕತೆ ನಡೆಸಲು ಜಿಲ್ಲಾಡಳಿತ ಒತ್ತಡಕ್ಕೆ ಮಣಿದು ರೈತರೊಂದಿಗೆ ಸಂಧಾನ ಸಭೆ ನಡೆಸಲು ಕಾರ್ಖಾನೆಯ ಪ್ರತಿನಿಧಿಗಳು ತಾಲೂಕಾಡಳಿತ ಸೌಧಕ್ಕೆ ಸಂಜೆ ದಾವಿಸಿ, ಸುದೀರ್ಘ ಸಭೆ ನಡೆಸಿದರು.
ಕಾರ್ಖಾನೆಯ ಹಿರಿಯ ಅಧಿಕಾರಿ ಬಾಲಾಜಿ ಮಾತನಾಡಿ, ನಾವು ಘೋಷಿಸಿದ ದರದ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಗಮನಿಸಿ, ಈಗ ಪ್ರತಿ ಟನ್ ಕಬ್ಬಿಗೆ ₹50 ದರವನ್ನು ಹೆಚ್ಚಿಗೆ ಅಂದರೇ ಪ್ರತಿ ಟನ್ಗೆ ₹3100 ನೀಡುವುದಾಗಿ ತಮ್ಮ ನಿಲುವು ಹೇಳಿದರು.
ಆದರೆ ಕಾರ್ಖಾನೆ ಘೋಷಿಸಿದ ದರ ತಿರಸ್ಕರಿಸಿದ ರೈತ ಮುಖಂಡರು ಪ್ರತಿಟನ್ ಕಬ್ಬಿಗೆ ₹3350 ದರ ನೀಡಬೇಕೆಂದು ಪಟ್ಟು ಹಿಡಿದರು. ಆದರೆ ರೈತರ ಹೇಳಿದ ದರಕ್ಕೆ ನೀಡಲು ಆಗುವುದಿಲ್ಲ ಎಂದು ಕಾರ್ಖಾನೆಯವರು ತಮ್ಮ ಅಸಮ್ಮತಿ ವ್ಯಕ್ತಪಡಿಸಿದರು. ಕಾರ್ಖಾನೆಯವರ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು ಮುಷ್ಕರ ಮುಂದುವರೆಸುವುದಾಗಿ ಘೋಷಿಸಿದರು.
ಹೀಗೆ ಸಭೆಯು ಯಾವುದೇ ತೀರ್ಮಾನ ಕಾಣದಿರುವುದನ್ನು ಕಂಡು ಮದ್ಯಸ್ಥಿಕೆ ವಹಿಸಿ ಮಾತನಾಡಿದ ತಹಸೀಲ್ದಾರ ಫಿರೋಜ ಷಾ ಹಾಗೂ ಸಿಪಿಐ ಪಾಟೀಲ ಕಾರ್ಖಾನೆಯವರು ಇನ್ನೊಮ್ಮೆ ದರದ ಬಗ್ಗೆ ತಮ್ಮ ಮೇಲಾಧಿಕಾರಿಗಳೊಂದಿಗೆ ಮಾತನಾಡಿ, ಬೇಕಾದರೇ ದರ ಘೋಷಣೆಗೆ ಇನ್ನೂ ಕಾಲಾವಕಾಶ ತೆಗೆದುಕೊಳ್ಳಿ ಎಂದರು. ತಹಸೀಲ್ದಾರ ಸಲಹೆಗೆ ಕಾರ್ಖಾನೆ ಅಧಿಕಾರಿಗಳ ನಿಯೋಗ ಒಪ್ಪಿಗೆ ಸೂಚಿಸಿತು. ದರ ನಿಗದಿಯ ವಿಷಯವು ಶುಕ್ರವಾರ ಮುಂದುವರೆಯುವ ಸಾಧ್ಯತೆ ಇದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.