ರೈತರಿಂದ ಸಿಎಂ, ಡಿಸಿಎಂ ಅಣಕು ಪಿಂಡ ಪ್ರದಾನ

KannadaprabhaNewsNetwork | Published : Mar 5, 2025 12:33 AM

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮಟ್ಟಿ ಆಲಮಟ್ಟಿ ಜಲಾಶಯದಿಂದ ತೆಲಂಗಾಣಕ್ಕೆ ನೀರು ಹರಿಸಿದ್ದಕ್ಕೆ ಆಕ್ರೋಶಗೊಂಡ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಅಣಕು ಪಿಂಡ ಪ್ರದಾನ ಮಾಡುವ ಮೂಲಕ ಸರ್ಕಾರದ ನಡೆಗೆ ರೈತರು ಹಾಗೂ ರೈತ ಸಂಘಟನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಆಲಮಟ್ಟಿ ಜಲಾಶಯದಿಂದ ತೆಲಂಗಾಣಕ್ಕೆ ನೀರು ಹರಿಸಿದ್ದಕ್ಕೆ ಆಕ್ರೋಶಗೊಂಡ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಅಣಕು ಪಿಂಡ ಪ್ರದಾನ ಮಾಡುವ ಮೂಲಕ ಸರ್ಕಾರದ ನಡೆಗೆ ರೈತರು ಹಾಗೂ ರೈತ ಸಂಘಟನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.

ಆಲಮಟ್ಟಿಯ ಕೃಷ್ಣಾ ನದಿ ತೀರದ ಹಿನ್ನೀರಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿದ ರೈತ ಸಂಘಟನೆ ಮುಖಂಡರು, ಸಂಪ್ರದಾಯದಂತೆ ನೀರಲ್ಲಿ ಮುಳುಗಿ ನಂತರ ಕ್ರಿಯಾಕರ್ಮಗಳನ್ನು ನೆರವೇರಿಸಿದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸಿ ಪಿಂಡವನ್ನು ಇಟ್ಟು, ಅದರ ಮೇಲೆ ಕರಿ ಎಳ್ಳು ಹಾಕಿ ದರ್ಬೆ ಅರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಬಳಿಕ, ಭಾವಚಿತ್ರಗಳನ್ನು ಕೃಷ್ಣಾ ನದಿಯಲ್ಲಿ ಹರಿ ಬಿಟ್ಟು ಆಕ್ರೋಶ ಹೊರಹಾಕಿದರು.

ರೈತರ ಪಾಲಿಗೆ ಇನ್ನಿಲ್ಲದ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಆಲಮಟ್ಟಿಯ ಲಾಲ ಬಹದ್ದೂರ ಶಾಸ್ತ್ರೀ ಜಲಾಶಯದಿಂದ ತೆಲಂಗಾಣ ರಾಜ್ಯಕ್ಕೆ ನೀರು ಹರಿಸಿದ್ದನ್ನು ಖಂಡಿಸಿ ವಿಜಯಪುರದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ಕೂಡ ನಡೆಸಲಾಗಿತ್ತು. ಇದರ ಭಾಗವಾಗಿ ಇದೀಗ ಅಣಕು ಪಿಂಡ ಪ್ರದಾನ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ರೈತ ಸಂಘದ ಪದಾಧಿಕಾರಿಗಳು ನದಿಯಲ್ಲಿ ಇಳಿದು ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಅರವಿಂದ ಕುಲಕರ್ಣಿ, ಅವಳಿ ಜಿಲ್ಲೆಯ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ ತೆಲಂಗಾಣ ರಾಜ್ಯಕ್ಕೆ ನಿರಂತರವಾಗಿ ನೀರು ಹರಿಸಿ ಆಲಮಟ್ಟಿ ಜಲಾಶಯದ ನೀರನ್ನು ಸಂಪೂರ್ಣ ಖಾಲಿ ಮಾಡಲು ಹೊರಟಿದೆ. ತೆಲಂಗಾಣಕ್ಕೆ ಕೇವಲ 1.27 ಟಿ.ಎಮ್.ಸಿ ಮಾತ್ರ ನೀರು ಹರಿ ಬಿಟ್ಟಿದ್ದೇವೆಂದು ಹೇಳಿ, ಫೆ.17 ರಿಂದ ಇಲ್ಲಿಯವರೆಗೂ 10 ಟಿ.ಎಮ್.ಸಿ ಗೂ ಅಧಿಕ ನೀರು ಹರಿಸಲಾಗಿದೆ. ಸರ್ಕಾರದ ಈ ರೈತ ವಿರೋಧಿ ನೀತಿ ಅನುಸರಿಸಿ ಅವಳಿ ಜಿಲ್ಲೆಯ ರೈತರಿಗೆ ಘೋರ ಅನ್ಯಾಯ ಮಾಡಲು ಮುಂದಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ವಿಠ್ಠಲ ಬಿರಾದಾರ, ತಾಲೂಕಾ ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಈರಪ್ಪ ಹಂಚನಾಳ, ಸೋಮು ಬಿರಾದಾರ, ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ಮಲ್ಲಪ್ಪ ಪಡಸಲಗಿ, ಗಿರಿಮಲ್ಲಪ್ಪ ದೊಡಮನಿ, ಪುತ್ರಪ್ಪ ಬೂದಗೋಳಿ ದಾವಲಸಾಬ ನದಾಫ, ಹಣಮಂತ್ರಾಯ ಹಂದ್ರಾಳ, ರಾಜೇಸಾಬ ವಾಲಿಕಾರ, ಈರಣ್ಣ ದೇವರಗುಡಿ, ಮೋತಿಲಾಲ್ ಲಮಾಣಿ, ಶಟ್ಟೆಪ್ಪ ಲಮಾಣಿ, ಸಿದ್ದನಗೌಡ ಕುಂಟೋಜಿ, ಬಸನಗೌಡ ಪಾಟೀಲ, ಚಂದ್ರಶೇಖರ ಪಾಟೀಲ, ಹಣಮಂತ್ರಾಯ ಗುಣಕಿ ಮುಂತಾದವರು ಹಾಜರಿದ್ದರು.-------------

ಕೋಟ್‌

ತೆಲಂಗಾಣಕ್ಕೆ ಕೇವಲ 1.27 ಟಿ.ಎಮ್.ಸಿ ಮಾತ್ರ ನೀರು ಹರಿ ಬಿಟ್ಟಿದ್ದೇವೆಂದು ಹೇಳಿ, ಫೆ.17 ರಿಂದ ಇಲ್ಲಿಯವರೆಗೂ 10 ಟಿ.ಎಮ್.ಸಿ ಗೂ ಅಧಿಕ ನೀರು ಹರಿಸಲಾಗಿದೆ. ಜಿಲ್ಲೆಯ ಜನ ಪ್ರತಿನಿಧಿಗಳು ಇದ್ದು ಸತ್ತಂತಿದ್ದಾರೆ. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತೆಲಂಗಾಣಕ್ಕೆ ಹರಿಸುತ್ತಿರುವ ನೀರನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಅವಳಿ ಜಿಲ್ಲೆಯ ರೈತರು ಸರ್ಕಾರದ ವಿರುದ್ಧ ಸಿಡಿದೆದ್ದು ಕ್ರಾಂತಿ ಮಾಡಬೇಕಾಗುತ್ತದೆ.

ಅರವಿಂದ ಕುಲಕರ್ಣಿ, ರೈತ ಮುಖಂಡ

Share this article