ಕನ್ನಡಪ್ರಭ ವಾರ್ತೆ ರಾಯಚೂರು
ಯಾವುದೇ ರೈತರು ಸರತಿ ಸಾಲಲ್ಲಿ ನಿಂತು ಕಾಯದಂತೆ, ಸಣ್ಣ ರೈತರು ಸೇರಿದಂತೆ ಎಲ್ಲರಿಗೂ ಸಮರ್ಪಕ ಗೊಬ್ಬರ ವಿತರಣೆಗೆ ಅಗತ್ಯ ಕ್ರಮವಹಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಕೃಷಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಇಲ್ಲಿನ ತಾಲೂಕು ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಪಂ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿ ದರು. ಮೊದಲನೇ ಬೆಳೆಗೆ ಸಹಜವಾಗಿ ರಸಗೊಬ್ಬರದ ಬೇಡಿಕೆ ಹೆಚ್ಚಿರುತ್ತದೆ. ಎರಡನೇ ಬೆಳೆಗೆ ಒತ್ತಡ ಇರುವುದಿಲ್ಲ. ಗೊಂದಲಕ್ಕೆ ಅವಕಾಶವಿಲ್ಲದ ಹಾಗೆ ಶಿಸ್ತುಬದ್ಧವಾಗಿ ರಸಗೊಬ್ಬರ ವಿತರಣೆಯಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಕೃಷಿ ಪ್ರದೇಶ ವಿಸ್ತರಣೆಯಾಗಬೇಕು. ಹನಿ ನೀರಾವರಿ ಸೇರಿ ಪ್ರೋತ್ಸಾಹದಾಯಕ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ಕೊಡಬೇಕು ಅಷ್ಟೇ ಅಲ್ಲದೇ ರೈತರ ಬೇಡಿಕೆಗನುಸಾರ ತೋಟಗಾರಿಕಾ ಸಸಿಗಳ ವಿತರಣೆಗೆ ಕ್ರಮ ವಹಿಸಬೇಕು ಎಂದರು.
ಗ್ರಾಮೀಣ ಕ್ಷೇತ್ರದ ಯಾವುದೇ ಗ್ರಾಮದಲ್ಲಿ ಕುಡಿವ ನೀರಿಗೆ ತೊಂದರೆಯಾಗಬಾರದು. ಮುಂದಿನ ದಿನಗಳಲ್ಲಿ ಅನುಕೂಲವಾಗುವಂತೆ ಕೆರೆ ತುಂಬಲು ಒತ್ತು ಕೊಡಬೇಕು. ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಆದಾಗ್ಯು ನದಿ ತಟದ ಸುತ್ತಲಿನ ಗ್ರಾಮಸ್ಥರು ನಮಗೆ ನೀರು ಸಿಗುತ್ತಿಲ್ಲ ಎಂದು ದೂರಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ವಿದ್ಯುತ್ ಮೀಟರ್ ಇಲ್ಲ, ಬಿಲ್ ಕಟ್ಟಿಲ್ಲ ಎಂದು ಯಾವುದೇ ಹಳೆಯ ಮನೆಗಳು ಮತ್ತು ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ವಿದ್ಯುತ್ ಕಡಿತ ಮಾಡಕೂಡದು. ಬಿಲ್ ಕಟ್ಟಿಲ್ಲ ಎಂದು ಬೀದಿದೀಪಗಳನ್ನು ಆಫ್ ಮಾಡಬಾರದು ಎಂದು ಶಾಸಕರು ನಿರ್ದೇಶಿಸಿದರು.
ಸಭೆಯಲ್ಲಿ ಅಕ್ರಮ ಮರಳುಗಾರಿಗೆ ತಡೆ, ತೋಟಗಾರಿಕೆ,ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆಯನ್ನು ನಡೆಸಲಾಯಿತು.ಸಭೆಯಲ್ಲಿ ಪ್ರಮುಖರಾದ ಜಯಂತ ರಾವ್, ಮಲ್ಲಿಕಾರ್ಜುನ, ಪವನ್ ಪಾಟೀಲ, ತಹಸೀಲ್ದಾರ ಸುರೇಶ ವರ್ಮಾ, ತಾಪಂ ಆಡಳಿತಾಧಿಕಾರಿ ಶರಣ ಬಸವ ರಾಜ, ತಾಪಂ ಇಒ ಚಂದ್ರಶೇಖರ ಪವರ್, ತ್ರೈಮಾಸಿಕ ಕೆಡಿಪಿ ಸಭೆಯ ನಾಮ ನಿರ್ದೇಶಿತ ಸದಸ್ಯರಾದ ಫಾರುಕ್ ಹುಸೇನ್, ಪಲ್ಲವಿ, ಈರೇಶ, ಜಿಂದಪ್ಪ, ಶರಣಬಸವ, ತಿಮ್ಮಪ್ಪ ನಾಯಕ, ರಾಯಚೂರು ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಚನ್ನಬಸವ ನಾಯಕ ದದ್ದಲ್ ಸೇರಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.