ದ.ರಾ. ಬೇಂದ್ರೆ ಅವರ ಜನ್ಮದಿನ ಆಚರಿಸಲಾಗುತ್ತಿರುವುದು ಸಂತಸದ ಕ್ಷಣವಾಗಿದೆ. ನರಬಲಿ ಎಂಬ ಪದ್ಯ ಬರೆದು ಬ್ರಿಟಿಷರಿಂದ ಜೈಲುವಾಸ ಅನುಭವಿಸಿದ ಸಾಹಿತಿ ಬೇಂದ್ರೆ.

ಹುಬ್ಬಳ್ಳಿ:

ಅನ್ಯಾಯದ ವಿರುದ್ಧ ಸೆಣಸಾಡಲು ನರಬಲಿಯೇ ಮಾಡಬೇಕಾಗುತ್ತದೆ ಎಂಬ ವರಕವಿ ಡಾ. ದ.ರಾ. ಬೇಂದ್ರೆ ಅವರ ಸಂದೇಶ ಎಂದಿಗೂ ಮರೆಯಬಾರದು. ಹೀಗಾಗಿ ರಾಕ್ಷಸಿಯ ಆಡಳಿತ ವಿನಾಶವಾಗಬೇಕು, ಪ್ರಜಾಪ್ರಭುತ್ವ ಗೆಲ್ಲಬೇಕು ಎಂದು ಕರ್ನಾಟಕ ರಾಜ್ಯ ದಿನಗೂಲಿ ಹೋರಾಟಗಾರರ ಮಹಾಮಂಡಳದ ಅಧ್ಯಕ್ಷ, ಬೇಂದ್ರೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಕೆ.ಎಸ್. ಶರ್ಮಾ ಹೇಳಿದರು.

ಅವರು ಇಲ್ಲಿನ ಗೋಕುಲ ರಸ್ತೆಯ ಡಾ. ಕೆ.ಎಸ್. ಶರ್ಮಾ ಕಾಲೇಜಿನ ಸಭಾಂಗಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವರಕವಿ ದ.ರಾ. ಬೇಂದ್ರೆಯವರ 130ನೇ ಜನ್ಮ ದಿನಾಚರಣೆ, ವಿದ್ಯಾವಿನಾಯಕ ದೇವಾಲಯದ 4ನೇ ವಾರ್ಷಿಕೋತ್ಸವ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಕಲಬುರಗಿಯ ಉಪಕಾರ್ಮಿಕ ಆಯುಕ್ತ ಡಾ. ವೆಂಕಟೇಶ ಅಪ್ಪಯ್ಯ ಶಿಂದಿಹಟ್ಟಿ ಅವರಿಗೆ ಬೆನಕಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ದ.ರಾ. ಬೇಂದ್ರೆ ಅವರ ಜನ್ಮದಿನ ಆಚರಿಸಲಾಗುತ್ತಿರುವುದು ಸಂತಸದ ಕ್ಷಣವಾಗಿದೆ. ನರಬಲಿ ಎಂಬ ಪದ್ಯ ಬರೆದು ಬ್ರಿಟಿಷರಿಂದ ಜೈಲುವಾಸ ಅನುಭವಿಸಿದ ಸಾಹಿತಿ ಬೇಂದ್ರೆ. ನರಬಲಿ‌ ಮಾಡೋಕೆ ಸಿದ್ಧರಾಗಿ ಭಜನೆ ಮಾಡುವುದರಿಂದ ಸ್ವಾತಂತ್ರ್ಯ ಸಿಗುವುದಿಲ್ಲ ಎಂದು‌ ಅವರು ಸಾರಿದ್ದರು ಎಂದರು.

ಕೆಎಲ್ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹಾಗೂ ಬೆನಕಶ್ರೀ ಪ್ರಶಸ್ತಿ ಸ್ವೀಕರಿಸಿದ ಕಲಬುರಗಿ ಉಪ ಆಯುಕ್ತ ಡಾ. ವೆಂಕಟೇಶ ಶಿಂದಿಹಟ್ಟಿ ಮಾತನಾಡಿದರು. ಇದೇ ವೇಳೆ ದ.ರಾ. ಬೇಂದ್ರೆ ರಚಿಸಿದ ಎರಡು ನಾಟಕಗಳಾದ ಗೋಲ್ ಹಾಗೂ ಶೋಭನಾ ಇವುಗಳ ಮರು ಮುದ್ರಣಗೊಂಡ ಕೃತಿಗಳು ಮತ್ತು ಹನುಮಂತ ಅಂಕುಶ ಇವರು ರಚಿಸಿದ ನಾ ಕಂಡಂತೆ ಕೆ.ಎಸ್. ಶರ್ಮಾ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಎನ್.ಬಿ. ಕುಲಕರ್ಣಿ, ಧಾರವಾಡ ಆಕಾಶವಾಣಿಯ ವಿಶ್ರಾಂತ ಬಾನುಲಿ ನಿರ್ದೇಶಕ ಸಿ.ಯು‌. ಬೆಳ್ಳಕ್ಕಿ, ಸುಮಿತ್ರಾ ಪೋತ್ನೀಸ್, ಸುಲೋಚನಾ ಪೋತ್ನಿಸ್, ಅಶ್ವಿನಿ ಶಿಂದಿಹಟ್ಟಿ, ಡಾ. ಶ್ರೀನಿವಾಸ ಬನ್ನಿಗೋಳ, ಸಿ.ಸಿ. ಹಿರೇಮಠ, ಸೋಮಶೇಖರ್ ಹುದ್ದಾರ, ವಿದ್ಯಾಲಯದ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಸೇರಿದಂತೆ ಹಲವರಿದ್ದರು.