ಕನ್ನಡಪ್ರಭ ವಾರ್ತೆ ಹಾವೇರಿ
ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ನಮ್ಮ ದೇಶದ ಮಹಾನ್ ಕೊಡುಗೆ. ಗಾಂಧಿ ಪ್ರತಿಮೆಗಳನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ, ಸಂರಕ್ಷಿಸಬೇಕು ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ. ಮಹೇಶ ನಾಲವಾಡ ಹೇಳಿದರು.ನಗರದ ಎಂ.ಜಿ. ರಸ್ತೆಯ ಗಾಂಧಿ ವೃತ್ತದಲ್ಲಿ ಮಹಾತ್ಮಾ ಗಾಂಧೀಜಿ ಅವರ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಒಂದು ದಿನದ ಉಪವಾಸ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾತ್ಮ ಗಾಂಧಿಯವರ ೭೬ನೇ ಪುಣ್ಯಸ್ಮರಣೆ ಇದು. ೧೦೮ ದೇಶಗಳಲ್ಲಿ ಗಾಂಧಿ ಪ್ರತಿಮೆಗಳಿವೆ. ಅವರ ಮೇಲೆ ೫೦೨ ಪುಸ್ತಕಗಳಿವೆ. ಜಗತ್ತಿನಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಹೊಂದಿರುವ ವ್ಯಕ್ತಿ ಗಾಂಧೀಜಿ. ಗಾಂಧಿ ಪ್ರತಿಮೆಗಳನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ, ಸಂರಕ್ಷಿಸುವ ಕಾರ್ಯವಾಗಬೇಕು ಎಂದರು.ಐತಿಹಾಸಿಕ ನಗರ ಹಾವೇರಿ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ಯಾಲಕ್ಕಿ ಕಂಪು ಮತ್ತೆ ಸೂಸಬೇಕು. ಈ ನಿಟ್ಟಿನಲ್ಲಿ ವಿವಿಧ ಹೋರಾಟ, ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಉಪವಾಸ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಐದು ನದಿಗಳು ಹರಿಯುವ ಜಿಲ್ಲೆ ಇದು. ಸಂಪದ್ಭರಿತ ಭೂಮಿ ಇದೆ. ಬ್ರಾಡಗೇಜ್ ಲೈನ್, ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ೪೫೩ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುರ್ದೈವ. ಇಲ್ಲಿನ ಸಂಪತ್ತು ಬಳಸಿಕೊಂಡು ಸಮಗ್ರ ಅಭಿವೃದ್ಧಿ ಹೊಂದುವಂತೆ ಮಾಡಬೇಕು ಎಂಬ ಸಂಕಲ್ಪ ಮಾಡಿದ್ದೇನೆ. ಅದಕ್ಕಾಗಿ ಗಾಂಧೀಜಿಯವರ ಉಪವಾಸ ಆಯುಧ ಬಳಸುತ್ತಿದ್ದೇನೆ ಎಂದರು.ಗಾಂಧೀಜಿ ಎರಡು ಸಲ ಹಾವೇರಿ ಜಿಲ್ಲೆಗೆ ಬಂದು ಹೋಗಿದ್ದಾರೆ. ಜಿಲ್ಲೆಯ ಸುಮಾರು ೧೦ ಸ್ವಾತಂತ್ರ್ಯ ಹೋರಾಟಗಾರರು ಪ್ರಾಣತ್ಯಾಗ ಮಾಡಿದ್ದಾರೆ. ಗಾಂಧೀಜಿಯವರ ಚಿತಾಭಸ್ಮ ಸಂಗೂರಿನಲ್ಲಿದೆ. ಅದರ ಪರಿಸ್ಥಿತಿ ಕೇಳಿದರೆ ಬೇಸರವಾಗುತ್ತದೆ ಎಂದರು.
ಗಾಂಧಿ ಪ್ರತಿಮೆಗೆ ಕನ್ನಡಕ ಅಳವಡಿಕೆ: ಹಾವೇರಿ ನಗರದ ಗಾಂಧಿ ವೃತ್ತ ಹಾಗೂ ಮುನ್ಸಿಪಲ್ ಹೈಸ್ಕೂಲ್ನಲ್ಲಿ ಇರುವ ಗಾಂಧಿ ಪ್ರತಿಮೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಮುನ್ಸಿಪಲ್ ಶಾಲೆಯ ಗಾಂಧಿ ಪ್ರತಿಮೆ ಎದುರು ನಿತ್ಯ ಮದ್ಯಪಾನ ಮಾಡುತ್ತಿದ್ದಾರೆ. ಎರಡೂ ಪ್ರತಿಮೆಗಳಿಗೆ ಕನ್ನಡಕ ಹಾಕಲಾಗಿಲ್ಲ. ಕನಿಷ್ಠ ಸ್ವಚ್ಛತೆಯನ್ನೂ ನಗರಸಭೆಯವರು ಮಾಡಿಲ್ಲ. ಆ ಕೆಲಸವನ್ನು ನಾವು ಮಾಡಿದ್ದೇವೆ. ಕನ್ನಡಕ ತೊಡಿಸಿ ಅವರ ಸ್ಮರಣಾರ್ಥ ಭಜನೆ ಮತ್ತು ಸಂಕಲ್ಪದ ಉಪವಾಸ ಕೈಗೊಳ್ಳಲಾಗಿದೆ ಎಂದು ಡಾ. ಮಹೇಶ ನಾಲವಾಡ ತಿಳಿಸಿದರು.