ಹುಬ್ಬಳ್ಳಿ: ಇಲ್ಲಿಯ ಹಳೇ ಕೋರ್ಟ್ ವೃತ್ತದ ಬಳಿ ನಡೆದ ಫ್ಲೈಒವರ್ ಕಾಮಗಾರಿ ವೇಳೆ ಮೇಲಿಂದ ಕಬ್ಬಿಣದ ರಾಡ್ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಎಎಸ್ಐ ನಾಭಿರಾಜ ದಾಯಣ್ಣವರ (59) ಭಾನುವಾರ ಮೃತಪಟ್ಟಿದ್ದಾರೆ.
ಮೃತರ ನೇತ್ರದಾನ:
ಎಎಸ್ಐ ದಾಯಣ್ಣನವರ ಸಾವಿನ ನಂತರವೂ ಸಾರ್ಥಕತೆ ಮೆರದಿದ್ದಾರೆ. ನೇತ್ರದಾನ ಮಾಡಬೇಕೆಂಬ ಅವರ ಇಚ್ಛೆಯನ್ನು ಕುಟುಂಬಸ್ಥರು ಈಡೇರಿಸಿದ್ದಾರೆ. ಕುಟುಂಬದವರು ಮೃತರ ನೇತ್ರಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಉಳಿದ ಅಂಗಾಂಗ ದಾನಕ್ಕೂ ಕುಟುಂಬಸ್ಥರು ಮುಂದಾಗಿದ್ದರು. ಆದರೆ, ಅವರ ಅಂಗಾಂಗಗಳು ನಿಷ್ಕ್ರಿಯವಾಗಿದ್ದರಿಂದ ಧಾರವಾಡದ ಸತ್ತೂರು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ಎಎಸ್ಐ ನಾಭಿರಾಜ ಅವರು ರಜೆ ಹಾಕದೇ ಕರ್ತವ್ಯ ನಿರ್ಹಿಸುತ್ತಿದ್ದರು ಎಂಬುದು ವಿಶೇಷ.ಇದಕ್ಕೂ ಪೂರ್ವದಲ್ಲಿ ಕೆಎಂಸಿಆರ್ಐಗೆ ಭೇಟಿ ನೀಡಿದ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಪಡೆದ ಕಂಪನಿಯ ಎಂಡಿ ಸೇರಿದಂತೆ 19ಕ್ಕೂ ಹೆಚ್ಚು ಜನರ ವಿರುದ್ಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಎಎಸ್ಐ ಮೃತಪಟ್ಟಿದ್ದು, ಇದನ್ನು ಗಂಭೀರ ಸ್ವರೂಪದ ಪ್ರಕರಣ ಎಂದು ಪರಿಗಣಿಸಲಾಗುತ್ತದೆ ಎಂದರು.
ಈ ಕಾಮಗಾರಿಯಲ್ಲಿ ಬರುವ ಎಲ್ಲ ಇಲಾಖೆಗಳು ಇದಕ್ಕೆ ಹೊಣೆಯಾಗಿದ್ದು, ಸಂಬಂಧಿತ ಗುತ್ತಿಗೆದಾರ ಕಂಪನಿ, ಮಾಲೀಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳ ಮೇಲೂ ಪ್ರಕರಣ ದಾಖಲಾಗುತ್ತದೆ ಎಂದರು. ಪ್ರಕರಣದ ಹಿನ್ನೆಲೆಯಲ್ಲಿ ಫ್ಲೈಒವರ್ ಕಾಮಗಾರಿಯನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದರು.