ನೇರಲಕೆರೆ ಗ್ರಾಮ ಪಂಚಾಯಿತಿಯಲ್ಲಿ ಪೋಷನ್ ಮಾಸಾಚರಣೆ
ಗರ್ಭಿಣಿಯರ ಸೀಮಂತ ಕಾರ್ಯಕ್ರಮ ಮತ್ತು ಮಗುವಿಗೆ ನಡೆಯುವ ಅನ್ನ ಪ್ರಾಶನ ವಿಧಿ ಪೋಷಕರಿಗೆ ಸಂತೋಷ ಮಾತ್ರವಲ್ಲ, ಸಮಾಜದಲ್ಲಿ ಆರೋಗ್ಯದ ಪ್ರಾರಂಭದ ಸಂಕೇತವೂ ಆಗಿದೆ ಎಂದು ಗ್ರಾಪಂ ಅಧ್ಯಕ್ಷ ಹೇಮಶೇಖರ್ ಹೇಳಿದರು.
ನೇರಲಕೆರೆ ಗ್ರಾಪಂನಲ್ಲಿ ಪೋಷನ್ ಮಾಸಾಚರಣೆ ಗ್ರಾಮಸ್ಥರ ಸಕ್ರಿಯ ಸಹಭಾಗಿತ್ವದೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅರ್ಥಪೂರ್ಣ ಪೋಷನ್ ಮಾಸಾಚರಣೆ ಬಗ್ಗೆ ತಿಳಿಸಿ ಸರ್ಕಾರದ ವಿವಿಧ ಪೌಷ್ಟಿಕತೆ ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.ಸಿಡಿಪಿಒ ಚರಣ್ ರಾಜ್ ಮಾತನಾಡಿ ಪೋಷನ್ ಅಭಿಯಾನ ಭಾರತದಾದ್ಯಂತ ಗರ್ಭಿಣಿಯರು, ಶಿಶುಗಳು ಹಾಗೂ ತಾಯಂದಿರ ಆರೋಗ್ಯ ಮತ್ತು ಪೌಷ್ಟಿಕತೆ ಸುಧಾರಿಸಲು ಆರಂಭಗೊಂಡ ರಾಷ್ಟ್ರೀಯ ಚಳುವಳಿ. ಪೌಷ್ಟಿಕಾಂಶದ ಕೊರತೆ ಯಿಂದ ಉಂಟಾಗುವ ಸಮಸ್ಯೆಗಳು ಮಕ್ಕಳ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಅಂಗನವಾಡಿ ಕೇಂದ್ರಗಳ ಮೂಲಕ ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಕ್ಕಳ ಬೆಳವಣಿಗೆ ಹಂತದಲ್ಲಿ ಪೌಷ್ಟಿಕ ಆಹಾರವೇ ಶರೀರದ ಬೆಳವಣಿಗೆ ಮೂಲ ಶಕ್ತಿ ಎಂದು ಹೇಳಿದರು.
ತರೀಕೆರೆ ಸಮೀಪದ ನೇರಲಕೆರೆಯಲ್ಲಿ ನಡೆದ ಪೋಷನ್ ಮಾಸಾಚರಣೆಯಲ್ಲಿ ಗ್ರಾಪಂ ಅಧ್ಯಕ್ಷ ಹೇಮಶೇಖರ್ , ಸಿಡಿಪಿಒ ಚರಣ್ ರಾಜ್, ಪಿಡಿಒ ಮಲ್ಲಿಕಾರ್ಜುನ ಶಿರಹಟ್ಟಿ ಮತ್ತಿತರರು ಭಾಗವಹಿಸಿದ್ದರು.