ಕಾರು, ಲಾರಿಗಳ ಮಧ್ಯ ಭೀಕರ ಅಪಘಾತದಲ್ಲಿ ನಾಲ್ವರ ಸಾವು

KannadaprabhaNewsNetwork |  
Published : May 10, 2026, 02:00 AM IST
 ಫೋಟೋ ಇದೆ : 9 ಕೆಜಿಎಲ್  1 : ಘಟನೆ ಸ್ಥಳದಲ್ಲಿ  ಪರಿಶೀಲಿಸುತ್ತಿರುವ ಪೊಲೀಸರು. | Kannada Prabha

ಸಾರಾಂಶ

ಮೃತ ದಂಪತಿ ತಮ್ಮ 25ನೇ ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ತುಮಕೂರಿನ ಬಳಿ ಇರುವ ದೇವರಾಯನ ದುರ್ಗದ ಯೋಗ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ವಾಪಸ್ ಬರುವಾಗ ಈ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ತಾಲೂಕಿನ ಕೊತ್ತಗೆರೆ ಹೋಬಳಿಯ ಚಿಗನಿಪಾಳ್ಯದ ಬಳಿ ಕುಣಿಗಲ್- ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಮಂಡ್ಯ ಮೂಲದ ನಾಲ್ಕು ವ್ಯಕ್ತಿಗಳು ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟವರು ಮಂಡ್ಯ ಮೂಲದ ಸ್ವರ್ಣನಗರ ನಿವಾಸಿಗಳೆಂದು ತಿಳಿದು ಬಂದಿದೆ. ಮೃತ ದಂಪತಿ ಕುಮಾರ ನರಸಿಂಹಮೂರ್ತಿ (65) ಹಾಗೂ ಆತನ ಪತ್ನಿ ಗಾಯತ್ರಿ (61), ತಂಗಿ ಕೆ.ಆರ್. ಗಾಯಿತ್ರಿ (60) ಡ್ರೈವರ್ ರಘುಕುಮಾರ್ (55) ಮೃತಪಟ್ಟವರು.

ಮೃತ ದಂಪತಿ ತಮ್ಮ 25ನೇ ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ತುಮಕೂರಿನ ಬಳಿ ಇರುವ ದೇವರಾಯನ ದುರ್ಗದ ಯೋಗ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ವಾಪಸ್ ಬರುವಾಗ ಈ ಘಟನೆ ನಡೆದಿದೆ.

ಮಂಡ್ಯ ನಗರದಲ್ಲಿ ನಡೆಯಬೇಕಾಗಿದ್ದ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಬಂಧ ವಾಪಸ್ ಹೋಗುವಾಗ ಎದುರಿಗೆ ಬಂದ ಗೊಬ್ಬರ ತುಂಬಿದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಪ್ರಯಾಣಿಕರ ದೇಹ ಹಾಗೂ ಕಾರಿನ ಬಿಡಿ ಭಾಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಚೆಲ್ಲಿದ್ದವು.

ಅಪಘಾತ ನಡೆದ ನಂತರ ಕಾರಿನಲ್ಲಿದ್ದ ಮೃತ ದೇಹಗಳನ್ನು ಹೊರ ತೆಗೆಯಲು ಪೊಲೀಸರು ಹಾಗೂ ಸಾರ್ವಜನಿಕರು ಗಂಟೆಗಟ್ಟಲೆ ಹರಸಾಹಸ ಪಡಬೇಕಾಯಿತು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಕಿರಿದಾದ ರಸ್ತೆ ಆದ್ದರಿಂದ ಸುಮಾರು ಮೂರು ಕಿಲೋಮೀಟರ್‌ವರೆಗೂ ಎಡ ಮತ್ತು ಬಲ ಭಾಗದಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು .

ಪೊಲೀಸರು ಸಂಚಾರಿ ಸುಗಮಗೊಳಿಸುವಲ್ಲಿ ಗಂಟೆಗಟ್ಟಲೇ ಸಾಹಸಪಟ್ಟು ನಂತರ ರಸ್ತೆ ಸುಲಭ ಸಂಚಾರಕ್ಕೆ ಅನುವು ಮಾಡಿದ್ದರು.

ದಿನನಿತ್ಯ ಸಾವು:

ಕಳೆದ ಹಲವಾರು ದಿನಗಳಿಂದ ತುಮಕೂರು- ಮದ್ದೂರು ಕೆಶಿಪ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ವಾರಾಂತ್ಯದಲ್ಲಿ ಅಪಘಾತಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ ಮೂರು ದಿನಗಳಲ್ಲಿ ಕೊತ್ತಗೆರೆ ಬಳಿ ನಡೆದಂತಹ ಅಪಘಾತಗಳಲ್ಲಿ ಎರಡು, ಗವಿಮಠದ ಬಳಿ ಒಂದು ಹಾಗೂ ಈ ಘಟನೆಯಲ್ಲಿ ನಾಲ್ಕು ಮಂದಿ ಸೇರಿ ಒಟ್ಟಾರೆ ಏಳು ಮಂದಿ ಮೃತಪಟ್ಟಿದ್ದಾರೆ.

ರಸ್ತೆ ಅಗಲೀಕರಣಕ್ಕೆ ಒತ್ತಾಯ:

ಕೆಶಿಪ್‌ ರಸ್ತೆ ಅಭಿವೃದ್ಧಿಪಡಿಸುವ ನೆಪದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಭೂಮಿಯನ್ನು ವಶಕ್ಕೆ ಪಡೆದು ಸರ್ಕಾರ ಪರಿಹಾರ ನೀಡಿದೆ. ಆದರೆ ಕೆಲವೆಡೆ ಆ ಭೂಮಿಯನ್ನು ಕೂಡ ರಸ್ತೆಗೆ ಬಳಸಿಕೊಳ್ಳದೆ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ವೈಜ್ಞಾನಿಕವಾಗಿ ರಸ್ತೆ ಅಭಿವೃದ್ಧಿಪಡಿಸಿದರೆ ಅಪಘಾತಗಳನ್ನು ತಡೆಯಲು ಸಂಪೂರ್ಣ ಸಾಧ್ಯವಾಗುತ್ತದೆ. ಏಕಪದ ರಸ್ತೆಯಿಂದ ದ್ವಿಪಥ ರಸ್ತೆಗೆ ಮೇಲ್ದರ್ಜೆಗೇರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಕುಲಕ್ಕೆ ಮಾನವೀಯ ಸಂದೇಶ ಸಾರಿದ ಬಸವಣ್ಣ
ಗುಡಿಸಾಗರ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತೆ ರಾಡಿ ನೀರು ಪೂರೈಕೆ!