ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಉಚಿತ ಸಾರಿಗೆ ವ್ಯವಸ್ಥೆ

KannadaprabhaNewsNetwork | Published : Dec 19, 2024 12:31 AM

ಸಾರಾಂಶ

ಜಿಲ್ಲೆಯ 7 ತಾಲೂಕು ಸೇರಿದಂತೆ ಹೊರ ಜಿಲ್ಲೆಗಳಿಂದ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರಿಗೆ ನೆರವಾಗಲು ಬಸ್ ವ್ಯವಸ್ಥೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಕೆಎಸ್‌ಆರ್‌ಟಿಸಿ ವತಿಯಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಚಲುವರಾಯಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ 7 ತಾಲೂಕು ಸೇರಿದಂತೆ ಹೊರ ಜಿಲ್ಲೆಗಳಿಂದ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರಿಗೆ ನೆರವಾಗಲು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಮ್ಮೇಳನದ ಮೂರು ದಿನ 7 ತಾಲೂಕು ಕೇಂದ್ರಗಳಿಂದ ಸಮ್ಮೇಳನ ನಡೆಯುವ ಸ್ಥಳಕ್ಕೆ 15 ವಿಶೇಷ ವಾಹನಗಳನ್ನು ಒಳಗೊಂಡಂತೆ 105 ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಮತ್ತು ಬೆಂಗಳೂರಿನಿಂದ ಪ್ರತಿ 30 ನಿಮಿಷಕ್ಕೆ ಒಂದರಂತೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ಮಂಡ್ಯ ನಗರದ ವಿವಿಧ ಸ್ಥಳಗಳಿಂದ ಸಮ್ಮೇಳನದ ಸ್ಥಳಕ್ಕೆ ಜನರನ್ನು ಕರೆತರಲು 15 ವಾಹನಗಳ ಸಾರಿಗೆ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಲಾಗಿದೆ. ಮೊದಲನೆಯದಾಗಿ ಮಂಡ್ಯ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ, ನಂದಾ ಸರ್ಕಲ್, ಫ್ಯಾಕ್ಟರಿ ಸರ್ಕಲ್, ಸ್ವರ್ಣಸಂದ್ರ, ಮಾಂಡವ್ಯ ಕಾಲೇಜ್, ಉಮ್ಮಡಹಳ್ಳಿ ಗೇಟ್, ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ ಎಂದರು.

ಎರಡನೆಯದಾಗಿ ಮಂಡ್ಯ ಬಸ್ ನಿಲ್ದಾಣದಿಂದ ಕೋರ್ಟ್ ನಿಲ್ದಾಣ- ವಿಶ್ವವಿದ್ಯಾಲಯ- ಕಲ್ಲಹಳ್ಳಿ- ವಿ.ವಿ.ನಗರ-ಶನೇಶ್ವರ ದೇವಸ್ಥಾನ-ಚಾಮುಂಡೇಶ್ವರಿ ದೇವಸ್ಥಾನ-ಕನ್ನಿಕಾ ಪರಮೇಶ್ವರಿ ದೇವಸ್ಥಾನ-ಕರ್ನಾಟಕ ಬಾರ್ ಸರ್ಕಲ್-ಹೊಸಹಳ್ಳಿ ಸರ್ಕಲ್-ಬೆ.ರಾಮಣ್ಣ ಸರ್ಕಲ್-ಎಂವಿಜಿ ಬೇಕರಿ-ನಂದಾ ಸರ್ಕಲ್-ಫ್ಯಾಕ್ಟರಿ ಸರ್ಕಲ್-ಸ್ವರ್ಣಸಂದ್ರ-ಮಾಂಡವ್ಯ ಕಾಲೇಜ್-ಉಮ್ಮಡಹಳ್ಳಿ ಗೇಟ್-ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ ಎಂದು ಹೇಳಿದರು.

ಮೂರನೇಯದಾಗಿ ಹುಣಸೇಮರ-ಕಾಳಿಕಾಂಬ ದೇವಸ್ಥಾನ-ನಂದಾ ಸರ್ಕಲ್-ಫ್ಯಾಕ್ಟರಿ ಸರ್ಕಲ್-ಗುತ್ತಲು ಕಾಲೋನಿ-ಜಯಲಕ್ಷ್ಮಿ ಟಾಕೀಸ್-ಅರಕೇಶ್ವರ ದೇವಸ್ಥಾನ-ಉಮ್ಮಡಹಳ್ಳಿ ಗೇಟ್-ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ.

ನಾಲ್ಕನೇಯದಾಗಿ ಸತ್ವ ಪಾರ್ಕಿಂಗ್ ಸ್ಥಳದಿಂದ ಉಮ್ಮಡಹಳ್ಳಿ ಗೇಟ್-ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ. ಮತ್ತು ಅದೇ ಮಾರ್ಗದಲ್ಲಿ ವಾಪಸ್ ಆಗಲಿದೆ ಎಂದು ಸಚಿವರು ವಿವರಿಸಿದರು.

-----------

18ಕೆಎಂಎನ್ ಡಿ14

ಸುದ್ದಿಗೋಷ್ಠಿಯಲ್ಲಿ ಸಚಿವ ಚಲುವರಾಯಸ್ವಾಮಿ ಮಾತನಾಡಿದರು.

Share this article