ಕನ್ನಡಪ್ರಭ ವಾರ್ತೆ ಕೋಲಾರಸಮಾಜದಲ್ಲಿ ಮಕ್ಕಳನ್ನು ಸಭ್ಯ ಪ್ರಜೆಗಳನ್ನಾಗಿ ರೂಪಿಸುವಲ್ಲಿ ತಾಯಿಯ ಪಾತ್ರ ಪ್ರಧಾನವಾಗಿರುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಟೇಶ್.ಆರ್ ಅಭಿಪ್ರಾಯಪಟ್ಟರು. ನಗರದ ಪತ್ರಕರ್ತರ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಸ್ಥೆ ಹಾಗೂ ಡಾ,ಡಿ.ವೀರೇಂದ್ರ ಹೆಗ್ಗಡೆ ಮತ್ತು ಶ್ರೀ ಹೇಮಾವತಿ ವಿ.ಹೆಗ್ಗಡೆ ಮಾರ್ಗದರ್ಶನದೊಂದಿಗೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.ಗಂಡು- ಹೆಣ್ಣು ಭೇದಭಾವ ಇಲ್ಲ
ಮಹಿಳೆಯರು ಕುಟುಂಬದಲ್ಲಿ ಶೋಷಣೆಗೆ ಒಳಗಾದರೆ ಕೌಟುಂಬಿಕ ದೌರ್ಜನ್ಯದಡಿ ಪ್ರಕಣವನ್ನು ದಾಖಲಿಸುವ ಮೂಲಕ ನ್ಯಾಯ ಪಡೆಯಲು ಉಚಿತವಾದ ಕಾನೂನು ವ್ಯವಸ್ಥೆ ಮಾಡಲಾಗಿದೆ ಇದನ್ನು ಎಲ್ಲಾ ಮಹಿಳೆಯರು ಸದ್ಬಳಿಸಿಕೊಳ್ಳುವಂತ ಅವಕಾಶವಿದೆ. ಪೋಷಕರು ತಮಗೆ ತಿಳಿದೋ ತಿಳಿಯದೆಯೋ ೧೮ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು ಕಾನೂನಿನಲ್ಲಿ ಅಪರಾಧವಾಗಿ ಪರಿಗಣಿಸಿದೆ. ರಾಜ್ಯದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಬಾಲಕಿಯರು ಗರ್ಭಿಣಿಯಾಗಿದ್ದು ನಮ್ಮ ಜಿಲ್ಲೆಯಲ್ಲಿ ೨೯೬ ಮಂದಿ ಬಾಲಕಿಯರು ಗರ್ಭ ಧರಿಸಿರುವುದು ಮಾಧ್ಯಮಗಳು ವರದಿ ಮಾಡಿರುವುದು ಕಳವಳಕಾರಿ ಸಂಗತಿ ಎಂದರು.
56 ಪೋಕ್ಸೊ ಪ್ರಕರಣ ದಾಖಲುಬಾಲಕಿಯರನ್ನು ವಿವಾಹವಾಗಿರುವವರೂ ಸೇರಿದಂತೆ ಇತರೆ ಘಟನೆಗಳಿಗೆ ಸಂಬಂಧಿಸಿದಂತೆ ೫೬ ಮಂದಿ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದ್ದು ವಿಚಾರಣಾಧೀನ ಕೈದಿಗಳಾಗಿದ್ದಾರೆ. ಬಾಲಕಿಯರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕುವ ದೆಸೆಯಲ್ಲಿ ವಿಶೇಷವಾಗಿ ಪೋಕ್ಸೋ ಕಾಯ್ದೆ ಜಾರಿಗೆ ತಂದಿದೆ. ಪೋಕ್ಸೋ ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯನ್ನು ಪೋಷಕರ ಸಮ್ಮತಿ ಪಡೆದು ವಿವಾಹವಾಗಿದ್ದರೂ ಸಹ ಅಪರಾಧಿಯಾಗಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ೧೮ ವರ್ಷದೊಳಗಿನ ಬಾಲಕಿಯರಿಗೆ ವಿವಾಹ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ವಿವರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನಾ ಸಂಸ್ಥೆಯ ಜಿಲ್ಲಾ ನಿದೇಶಕ ಶಿವಾನಂದ ಆಚಾರ್ಯ, ನಗರಸಭೆ ಮಾಜಿ ಅಧ್ಯಕ್ಷೆ ಕೆ. ಲಕ್ಷ್ಮೀದೇವಮ್ಮ, ರತ್ನಗೌಡ, ಸಮಾಜ ಸೇವಕ ಆಂಜನಪ್ಪ , ಮಹಿಳಾ ಪೊಲೀಸ್ ಇಲಾಖೆಯ ಶಂಕರಚಾರ್ಯ ಇದ್ದರು. ಜ್ಞಾನ ವಿಕಾಸ ಪ್ರತಿನಿಧಿಗಳಿಂದ ಪ್ರಾರ್ಥನೆ, ಯೋಜನಾಧಿಕಾರಿ ಸಿದ್ದಗಂಗಯ್ಯ.ಟಿ.ಎಸ್ ಸ್ವಾಗತಿಸಿದರು. ನಗರಸಭಾ ವಲಯದ ಮೇಲ್ವಿಚಾರಕ ಪವನ್ ಕುಮಾರ್ ನಿರೂಪಿಸಿದರು.