ಕುಷ್ಟಗಿ: ಮೃತಪಟ್ಟರೂ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮೃತಪಟ್ಟ ಫಲಾನುಭವಿಗಳ ಮಾಹಿತಿಯನ್ನು ಕುಟುಂಬಸ್ಥರು ಇಲಾಖೆಗೆ ನೀಡದಿದ್ದರೆ, ವಾರಸುದಾರರಿಗೆ ನೋಟಿಸ್ ಜಾರಿ ಮಾಡಿ ಬಾಕಿ ಹಣ ವಾಪಸ್ ಪಡೆಯಬೇಕು ಎಂದು ಸೂಚಿಸಲಾಯಿತು.
ಸಿಡಿಪಿಒ ಯಲ್ಲಮ್ಮ ಹಂಡಿ ಮಾತನಾಡಿ, ಕುಷ್ಟಗಿ ತಾಲೂಕಿನಲ್ಲಿ 1,358 ಗೃಹಲಕ್ಷ್ಮೀ ಫಲಾನುಭವಿಗಳು ಮೃತಪಟ್ಟಿರುವುದು ಪತ್ತೆಯಾಗಿದೆ. ಆದರೆ, ಕುಟುಂಬಸ್ಥರು ಮಾಹಿತಿಯನ್ನು ಇಲಾಖೆಗೆ ನೀಡದಿರುವುದು ಸಮಸ್ಯೆಯಾಗಿದೆ. ಕುಟುಂಬಸ್ಥರ ಮನವೊಲಿಸಿ ಮಾಹಿತಿ ಪಡೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ತಾಪಂ ಇಒ ಅಮರೇಶ ಮಾತನಾಡಿ, ಮೃತಪಟ್ಟ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಯಲ್ಲಿದ್ದ ₹18.44 ಲಕ್ಷ ಈಗಾಗಲೇ ಸರ್ಕಾರಕ್ಕೆ ಮರುಪಾವತಿಯಾಗಿದೆ. ಇನ್ನೂ ₹31 ಲಕ್ಷ ಬಾಕಿ ಇದೆ. ಬಾಕಿ ಹಣ ಪಾವತಿಸದಿದ್ದರೆ ಸಂಬಂಧಿಸಿದ ವಾರಸುದಾರರಿಗೆ ಇಲಾಖೆಯಿಂದ ನೋಟಿಸ್ ಜಾರಿ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.ಡಿಪೋ ಮ್ಯಾನೇಜರ್ ಶಿವಶಂಕರಗೌಡ ಪಾಟೀಲ ಮಾತನಾಡಿ, ಶೌಚಾಲಯ ನಿರ್ವಹಣೆಗೆ ಡಿಪೋ ಮಟ್ಟದಲ್ಲಿ ಟೆಂಡರ್ ಕರೆಯಬೇಕಿದೆ. ಬಸ್ ನಿಲ್ದಾಣದಲ್ಲಿನ ಕಸವನ್ನು ಪುರಸಭೆ ಸಿಬ್ಬಂದಿ ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಅನ್ಯ ವ್ಯಕ್ತಿಗಳೂ ಕಸ ಹಾಕುತ್ತಿರುವುದರಿಂದ ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ ಎಂದು ತಿಳಿಸಿದರು.
ಗಡಚಿಂತಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು. ಗ್ರಾಮಕ್ಕೆ ರೂಟ್ ಹಾಗೂ ರಸ್ತೆ ಸೌಲಭ್ಯವಿದ್ದರೂ ಬಸ್ ಸಂಚಾರವಿಲ್ಲ. ಗ್ರಾಮಸ್ಥರ ಅನುಕೂಲಕ್ಕಾಗಿ ಬಸ್ ಸೇವೆ ಆರಂಭಿಸಬೇಕು ಎಂದು ಸಮಿತಿ ಸದಸ್ಯ ಯಮನೂರಪ್ಪ ಅಬ್ಬಿಗೇರಿ ಒತ್ತಾಯಿಸಿದರು.
ಹನುಮಸಾಗರ ಬಸ್ ನಿಲ್ದಾಣದ ಶೌಚಾಲಯ ಸ್ವಚ್ಛತೆ ಇಲ್ಲ. ನೀರು ಹಾಗೂ ಸಿಸಿ ಕ್ಯಾಮೆರಾ ವ್ಯವಸ್ಥೆಯೂ ಇಲ್ಲ. ಕಳೆದ ಮೂರು ವರ್ಷಗಳಿಂದ ಸಮಸ್ಯೆ ಹೇಳುತ್ತಿದ್ದರೂ ಇದುವರೆಗೆ ಪರಿಹಾರವಾಗಿಲ್ಲ ಎಂದು ಸಮಿತಿ ಸದಸ್ಯೆ ಶೋಭಾ ಪುರ್ತಗೇರಿ ಆಕ್ರೋಶ ವ್ಯಕ್ತಪಡಿಸಿದರು.
ದೋಟಿಹಾಳ ಬಸ್ ನಿಲ್ದಾಣದ ಎದುರುಗಡೆಯಿರುವ ಅಂಗಡಿಗಳಿಂದ ನಿಲ್ದಾಣ ಗಲೀಜಾಗುತ್ತಿದೆ. ಮಹಿಳೆಯರಿಗೆ ಕುಳಿತುಕೊಳ್ಳಲು ಸ್ಥಳವಿಲ್ಲದೆ ರಸ್ತೆಯಲ್ಲೇ ನಿಲ್ಲುವ ಪರಿಸ್ಥಿತಿ ಇದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಅಂಗಡಿಗಳನ್ನು ತೆರವುಗೊಳಿಸಲು ಗ್ರಾಪಂಗೆ ನಿರ್ದೇಶನ ನೀಡಬೇಕು ಎಂದು ಸಮಿತಿ ಸದಸ್ಯ ಬಾಳಪ್ಪ ಅರಳಿಕಟ್ಟಿ ಆಗ್ರಹಿಸಿದರು.
ಆಹಾರ ಇಲಾಖೆಯ ಶಿರಸ್ತೆದಾರ ರಮೇಶ ತಾಳಕೇರಿ ಮಾತನಾಡಿ, ಆಹಾರ ಇಲಾಖೆಯ ಸೇವೆಗಳಿಗೆ ಸರ್ವರ್ ಸಮಸ್ಯೆ ಅಡ್ಡಿಯಾಗುತ್ತಿದೆ. ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಸೇವೆಗಳಲ್ಲಿ ವಿಳಂಬವಾಗುತ್ತಿದೆ. ಸಮಸ್ಯೆ ಹಿನ್ನೆಲೆಯಲ್ಲಿ ಬೆಳಗ್ಗೆ ಹಾಗೂ ರಾತ್ರಿ ವೇಳೆಯಲ್ಲಿಯೂ ಕೆಲಸ ನಿರ್ವಹಿಸಲಾಗುತ್ತಿದೆ ಎಂದರು.
ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಮಿಷನ್ ಪಾವತಿಯಾಗದಿರುವ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಮಹಿಬೂಬಿ ಕುರಡಗೇರಿ ಒತ್ತಾಯಿಸಿದರು. ಈ ಕುರಿತು ಈಗಾಗಲೇ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ರಮೇಶ ತಾಳಕೇರಿ ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಗ್ರಾಪಂ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚನೆಯಾಗುತ್ತಿದ್ದು, ಎಲ್ಲ ಅಧಿಕಾರಿಗಳು ಸಹಕಾರ ನೀಡಬೇಕು. ಅಧಿಕಾರಿಗಳು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ಜನರಿಗೆ ಅಗತ್ಯ ಸೌಲಭ್ಯ ತಲುಪುವಂತೆ ನೋಡಿಕೊಳ್ಳಬೇಕು ಎಂದು ತಾಪಂ ಇಒ ಅಮರೇಶ ಹೇಳಿದರು.
400 ಹೊಸ ಬಸ್ಗಳಿಗೆ ಟೆಂಡರ್ ಕರೆಯಲಾಗಿದೆ. ಕುಷ್ಟಗಿ ತಾಲೂಕಿಗೂ ಹೆಚ್ಚಿನ ಬಸ್ಗಳ ಅಗತ್ಯವಿದ್ದು, ಡಿಪೋ ಮ್ಯಾನೇಜರ್ ಶಿವಶಂಕರಗೌಡ ಪಾಟೀಲ ಅವರು ಹೊಸ ಬಸ್ಗಳನ್ನು ಒದಗಿಸುವಂತೆ ಮನವಿಯನ್ನು ಮೇಲಧಿಕಾರಿಗಳಿಗೆ ನೀಡಬೇಕು ಎಂದು ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಫಾರೂಕ್ ಡಾಲಾಯತ್ ತಿಳಿಸಿದರು.