ಬಿ.ಎಸ್.ಸುನೀಲ್
ಗಾಂಧಿವಾದಿ, ಹೋರಾಟಗಾರರಾದ ಜಿ.ಮಾದೇಗೌಡರಿಗೆ ಅಂದು ಮಂಡ್ಯದ ಶಿಲ್ಪಿ, ನಿತ್ಯ ಸಚಿವ ಕೆ.ವಿ.ಶಂಕರಗೌಡರು ತಮ್ಮ ಪಿಇಟಿ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕ ಹುದ್ದೆ ಕಲ್ಪಿಸಿದ್ದರೆ, ಇಂದು ಭಾರತೀನಗರವಾಗಿ ಬಹುದೊಡ್ಡ ಮಟ್ಟದಲ್ಲಿ ಕಾಳಮುದ್ದನದೊಡ್ಡಿ ಎಂಬ ಕುಗ್ರಾಮ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.
ಮದ್ದೂರು ತಾಲೂಕಿನ ಗುರುದೇವರಹಳ್ಳಿಯ ಪುಟ್ಟೇಗೌಡ, ಕಾಳಮ್ಮ ದಂಪತಿ ಪುತ್ರ 1928ರ ಜುಲೈ 10 ರಂದು ಜನಿಸಿದ ಜಿ.ಮಾದೇಗೌಡರ ಜೀವನಗಾಥೆ ರೋಚಕವಾಗಿದ್ದು, ಅಂದು ಕಾನೂನು ಪದವಿ ಮುಗಿಸಿದ್ದ ಜಿ.ಮಾದೇಗೌಡರಿಗೆ ಪಿಇಎಸ್ ಕಾಲೇಜಿನಲ್ಲಿ ಕೆಲಸ ಕೊಡಿಸಲು ತಂದೆ ಪುಟ್ಟೇಗೌಡರು ಮಳವಳ್ಳಿ ಶಾಸಕ ಎಚ್.ವಿ.ವೀರೇಗೌಡರ ಜೊತೆ ಕೆ.ವಿ.ಶಂಕರಗೌಡರ ಮನೆಗೆ ಕರೆದುಕೊಂಡು ಹೋದಾಗ ಕೆವಿಎಸ್ ಮಾದೇಗೌಡರಿಗೆ ಉಪನ್ಯಾಸಕ ಹುದ್ದೆ ಕೊಡದೆ ಅವರನ್ನು ರಾಜಕೀಯವಾಗಿ ಬೆಳೆಯಲು ಕಾರಣರಾದರು.ಶಂಕರೇಗೌಡರನ್ನು ಭೇಟಿಯಾದ 6 ತಿಂಗಳಿಗೆ ತಾಲೂಕು ಬೋರ್ಡ್ ಚುನಾವಣೆ ನಡೆದು ಮಾದೇಗೌಡರನ್ನು ಚುನಾವಣೆಗೆ ನಿಲ್ಲಿಸುತ್ತಾರೆ. ಅಲ್ಲಿಂದ ಜಿ.ಮಾದೇಗೌಡರ ರಾಜಕೀಯ ಜೀವನ ಶುರುವಾಗುತ್ತದೆ. 1962ರ ಚುನಾವಣೆಯಲ್ಲಿ ಮಳವಳ್ಳಿ ಕ್ಷೇತ್ರದ ಸಾಮಾನ್ಯ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ಬೆನ್ನಲ್ಲೆ ಕಿರುಗಾವಲು ಕ್ಷೇತ್ರ ಉದಯವಾಗಿ 1984ರವರೆಗೆ ಸೋಲಿಲ್ಲದ ಸರದಾರನಾಗಿ ಸತತವಾಗಿ ಕ್ಷೇತ್ರದಿಂದ ಶಾಸಕರಾಗುತ್ತ ರಾಜಕೀಯವಾಗಿ ಬಹು ಎತ್ತರಕ್ಕೆ ಬೆಳೆದರು.
ಕೆ.ಎಂ.ದೊಡ್ಡಿಯಲ್ಲಿ ಸಕ್ಕರೆ ಕಾರ್ಖಾನೆ ಮಾಡಲು ತನ್ನ ರಾಜಕೀಯ ಕಡುವೈರಿ ಎಸ್.ಎಂ.ಕೃಷ್ಣರ ಮನೆ ಬಾಗಿಲು ತಟ್ಟಿದರು. ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕಾಗಿ ಕೆ.ವಿ.ಶಂಕರಗೌಡ ಸಾರ್ವಜನಿಕ ಶಿಕ್ಷಣ ಸಂಸ್ಥೆ (ಪಿಇಟಿ) ಕಟ್ಟಿದ್ದರಿಂದ ಪ್ರೇರಪಣೆಯಾಗಿ ಭಾರತಿ ಶಿಕ್ಷಣ ಸಂಸ್ಥೆ ಕಟ್ಟಿದರು. ಇಂದು ಈ ಎರಡು ಶಿಕ್ಷಣ ಸಂಸ್ಥೆಗಳು ಇಂದು ಹೆಮ್ಮರವಾಗಿ ಬೆಳೆದು, ಸಾವಿರು ಮಂದಿಗೆ ಉದ್ಯೋಗ ಕಲ್ಪಿಸಿ, ಲಕ್ಷಾಂತರ ಮಕ್ಕಳ ಜ್ಞಾನದಾಹ ತಣಿಸಿ, ಭವಿಷ್ಟ ಕಟ್ಟಿಕೊಳ್ಳಲು ನೆರವಾಗುತ್ತಿವೆ.
ಕಾವೇರಿ ಸುಪುತ್ರರಾದ ಜಿ.ಮಾದೇಗೌಡರು:
ಅಪಾರ ಮುಂಗೋಪಿಯಾಗಿದ್ದ ಗೌಡರು ಯಾರನ್ನು ಮುಲಾಜಿಗೆ ಹಾಕಿಕೊಳ್ಳುತ್ತಿರಲಿಲ್ಲ. ಸಿಎಂ, ಕೇಂದ್ರ, ರಾಜ್ಯ ಸಚಿವರು, ಡಿಸಿ, ಎಸ್ಪಿ ಯಾರೇ ಆಗಿರಲಿ ತಮ್ಮದೇ ದಾಟಿಯಲ್ಲಿ ಪ್ರಶ್ನೆ ಮಾಡಿ ಚಳಿ ಬಿಡಿಸುತ್ತಿದ್ದರು. ಗೌಡರ ಕಾಳಜಿ, ಕೋಪ, ಸಿಟ್ಟು, ಸೆಡವು ಯಾವ ರೂಪದಲ್ಲಿ ಆದರೂ ಜನರ ಹಿತಕ್ಕಾಗಿ ಇರುತ್ತಿತ್ತು. ಗೌಡರು ಹೊಂದಾಣಿಕೆ ಮಾಡಿಕೊಂಡಿದ್ದರೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅತ್ಯುನ್ನತ ಸ್ಥಾನ ಗಳಿಸುತ್ತಿದ್ದರು ಎಂಬುದು ಉತ್ಪ್ರೇಕ್ಷೆಯಲ್ಲ. ಜಿ.ಮಾದೇಗೌಡರು ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ ನಿಜಕ್ಕೂ ಅಚ್ಚಳಿಯದೇ ಉಳಿದಿದೆ. ಹಳ್ಳಿಗಾಡಿನ ಮಕ್ಕಳ ಭವಿಷ್ಯ ರೂಪಿಸಲು ಸ್ಥಾಪಿಸಿದ ಭಾರತೀ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉದ್ಯೋಗದಲ್ಲಿರುವುದು ಗೌಡರು ಶಿಕ್ಷಣ ಕ್ಷೇತ್ರದಲ್ಲಿನ ಮಾಂತ್ರಿಕತೆಗೆ ಸಾಕ್ಷಿಯಾಗಿದೆ.
- ಡಾ.ಎಂ.ಎಸ್.ಮಹದೇವಸ್ವಾಮಿ, ಪ್ರಾಂಶುಪಾಲ, ಭಾರತೀ ಕಾಲೇಜು