ಗದಗ ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

KannadaprabhaNewsNetwork |  
Published : Jan 21, 2025, 12:32 AM IST
ಕಾರ್ಯಕ್ರಮದಲ್ಲಿ 'ಅಂತರಗಂಗೆ' ಸ್ಮರಣಸಂಚಿಕೆಯನ್ನು ಶಾಸಕ ಜಿ.ಎಸ್.ಪಾಟೀಲ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಗದಗ ಜಿಲ್ಲೆಯ ಗಜೇಂದ್ರಗಡದ ಪಟ್ಟಣದಲ್ಲಿ ಸೋಮವಾರದಿಂದ 10ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿಯಾಗಿ ಚಾಲನೆ ದೊರೆಯಿತು. ಆಂಗ್ಲ ಭಾಷಾ ಪ್ರಭಾವದಲ್ಲಿ ಕನ್ನಡ ಭಾಷೆ ಸಮಸ್ಯೆ, ಸವಾಲುಗಳ ನಡುವೆ ಕನ್ನಡ ಭಾಷೆ ಅಭಿವೃದ್ಧಿಗೆ, ಪರಿಹಾರ ಕಂಡುಕೊಳ್ಳುವ ಅಗತ್ಯತೆ ಕುರಿತು ಸಮ್ಮೇಳನದಲ್ಲಿ ಪ್ರಮುಖರು ಅಭಿಪ್ರಾಯ ಮಂಡಿಸಿದರು.

ಗದಗ: ಜಿಲ್ಲೆಯ ಗಜೇಂದ್ರಗಡದ ಪಟ್ಟಣದಲ್ಲಿ ಸೋಮವಾರದಿಂದ 10ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿಯಾಗಿ ಚಾಲನೆ ದೊರೆಯಿತು.

ಆಂಗ್ಲ ಭಾಷಾ ಪ್ರಭಾವದಲ್ಲಿ ಕನ್ನಡ ಭಾಷೆ ಸಮಸ್ಯೆ, ಸವಾಲುಗಳ ನಡುವೆ ಕನ್ನಡ ಭಾಷೆ ಅಭಿವೃದ್ಧಿಗೆ, ಪರಿಹಾರ ಕಂಡುಕೊಳ್ಳುವ ಅಗತ್ಯತೆ ಕುರಿತು ಸಮ್ಮೇಳನದಲ್ಲಿ ಪ್ರಮುಖರು ಅಭಿಪ್ರಾಯ ಮಂಡಿಸಿದರು.

ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಕಾನೂನು ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಕನ್ನಡ ಭಾಷಾ ಅಭಿವೃದ್ಧಿ, ಪ್ರಾಚ್ಯಾವಶೇಷ ಸಂಶೋಧನೆ, ಜಿಲ್ಲೆಯ ಸಾಹಿತ್ಯ, ಪ್ರಾಚ್ಯವಸ್ತು, ಶಾಸನ, ಜಿಲ್ಲೆಯ ಸಮಗ್ರ ಮಾಹಿತಿಗಳನ್ನು ಒಳಗೊಂಡ ಜಿಲ್ಲೆಯ ಅಂತರ್ಜಾಲ ಸೃಷ್ಟಿಸಲು ಜಿಲ್ಲಾ ಮಟ್ಟದ ಸಮಿತಿ ರಚನೆ ಮಾಡಲಾಗಿದೆ. ಮಾರ್ಚ್‌ ಅಂತ್ಯದೊಳಗೆ ಅದಕ್ಕೆ ಅಂತಿಮ ಸ್ವರೂಪ ದೊರೆಯಲಿದೆ. ಜಿಲ್ಲೆಯು ರಾಜ್ಯದ ಸಾಂಸ್ಕೃತಿಕ ರಾಜಧಾನಿ ಆಗಲು ಗದಗ ಅರ್ಹತೆ ಹೊಂದಿದೆ. ಸ್ವಾತಂತ್ರ್ಯ ಹೋರಾಟ, ಗೋವಾ ವಿಮೋಚನಾ ಚಳವಳಿ, ಕರ್ನಾಟಕ ಏಕೀಕರಣ, ನೀರಾವರಿ ಹೋರಾಟದಲ್ಲಿ ಜಿಲ್ಲೆ ಮುಖ್ಯಭೂಮಿಕೆ ವಹಿಸಿದೆ ಎಂದು ಅಭಿಮಾನದಿಂದ ಹೇಳಿದರು.

ಜಿಲ್ಲೆಯು ಹಲವು ವೈಶಿಷ್ಟ್ಯತೆಗಳಿಂದ ದೇಶದಲ್ಲಿ ಗುರುತಿಸಿಕೊಂಡಿದೆ. ಜಿಲ್ಲೆಯಲ್ಲಿ ಶಿಲಾಯುಗದ 20ಕ್ಕೂ ಹೆಚ್ಚು ಸ್ಥಳಗಳು ಸಂಶೋಧನೆಗಳಿಂದ ಬೆಳಕಿಗೆ ಬಂದಿದ್ದು, ಜಿಲ್ಲೆಯ ಇತಿಹಾಸವನ್ನು ಲಕ್ಷಕ್ಕೂ ಅಧಿಕ ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ. ರೋಣ, ಗಜೇಂದ್ರಗಡ ಪಟ್ಟಣಗಳು ಜಿಲ್ಲೆಯ ಹಿರಿಮೆ ಹೆಚ್ಚಿಸಿವೆ. ದುರ್ಗಸಿಂಹ, ಭೀಮಸೇನ ಜೋಶಿ ಅವರಿಂದ ಈ ನಾಡು ಮತ್ತಷ್ಟು ಗರಿಮೆ ಹೊಂದುವಂತೆ ಮಾಡಿದೆ ಎಂದು ಹೇಳಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಶಾಸಕ ಜಿ.ಎಸ್. ಪಾಟೀಲ, ರೋಣ ಮತ್ತು ಗಜೇಂದ್ರಗಡ ತಾಲೂಕುಗಳಿಗೆ ಮಲಪ್ರಭಾ ನದಿ ನೀರು ಸಂಪರ್ಕಿಸುವುದು. ಗದಗ-ವಾಡಿ ರೈಲು ಮಾರ್ಗ ಕಾರಣಾಂತರಗಳಿಂದ ಬದಲಾಗಿದ್ದು. ಮೂಲ ಯೋಜನೆ ಬಗ್ಗೆ ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡು ಸಚಿವರಿಗೆ, ಸರ್ಕಾರಕ್ಕೆ ಸಲ್ಲಿಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ''ಅಂತರಗಂಗೆ'' ಸ್ಮರಣ ಸಂಚಿಕೆಯನ್ನು ಶಾಸಕ ಜಿ.ಎಸ್. ಪಾಟೀಲ ಬಿಡುಗಡೆಗೊಳಿಸಿದರು. ಸಮ್ಮೇಳನದ ಸರ್ವಾಧ್ಯಕ್ಷರನ್ನು, ಸಾಧಕರನ್ನು ಸನ್ಮಾನಿಸಲಾಯಿತು.

ತೋಂಟದಾರ್ಯ ಸಿದ್ಧರಾಮ ಶ್ರೀಗಳು, ಮೈಸೂರುಮಠದ ವಿಜಯಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಮಿಥುನ್ ಪಾಟೀಲ, ಟಿ. ಈಶ್ವರ, ರಾಮಕೃಷ್ಣ ದೊಡ್ಡಮನಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಸಿಇಒ ಭರತ್ ಎಸ್., ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಸಾಹಿತಿ ರವೀಂದ್ರನಾಥ ದೊಡ್ಡಮೇಟಿ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಸನಾತನ ಸಂಸ್ಕೃತಿ ಬೆಳೆಸಿ
ಗ್ರಾಪಂಗಳ ಶಕ್ತಿ ಕುಗ್ಗಿಸುತ್ತಿರುವ ಕೇಂದ್ರದ ವಿರುದ್ಧ ಹೋರಾಡುವ ಸ್ಥಿತಿ