)
ಕುಂದಾಪುರ: ಪ್ರತಿಯೊಂದು ತತ್ವಗಳಿಗೂ ಪ್ರತಿರೋಧ ಇದ್ದೇ ಇರುತ್ತದೆ. ಅಂತಹ ಪ್ರತಿರೋಧಗಳಿಂದಲೇ ಮಹಾತ್ಮ ಗಾಂಧೀಜಿಯವರ ಹತ್ಯೆ ಮಾಡಲಾಯಿತು. ಮಹಾತ್ಮರನ್ನು ಪ್ರತಿರೋಧಿಗಳು ಹತ್ಯೆ ಮಾಡಬಹುದು. ಆದರೆ ಮಹಾತ್ಮರ ತತ್ವಾದರ್ಶಗಳನ್ನು ಹತ್ಯೆ ಮಾಡಲು ಸಾಧ್ಯವೇ ಇಲ್ಲ. ಉತ್ತಮ ಸಂದೇಶಗಳು ಶಾಶ್ವತವಾಗಿರುತ್ತವೆ ಎಂದು ಉಡುಪಿಯ ಗಾಂಧೀ ಪ್ರತಿಷ್ಠಾನದ ವರದೇಶ್ ಹಿರೇಗಂಗೆ ಹೇಳಿದರು.
ನಿವೃತ್ತ ಪ್ರಾದ್ಯಾಪಕ ಪ್ರೊ. ಹಯವದನ ಮೂಡುಸಗ್ರಿ ಮಾತನಾಡಿ, ಈ ದೇಶದ ಒಟ್ಟಾರೆ ರಾಜಕಾರಣಿಗಳು ಗಾಂಧಿಯನ್ನು ಮತ್ತು ರಾಮನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೇ ಬಹುದೊಡ್ಡ ದುರಂತ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಗಾಂಧೀ ವಿರೋಧಿಗಳೇ ಈಗ ಆಳುತ್ತಿದ್ದಾರೆ. ಸಂವಿಧಾನದಲ್ಲಿ ಇರುವ ಜಾತ್ಯಾತೀತತೆ ಮತ್ತು ಸಮಾಜವಾದವನ್ನೇ ಕಿತ್ತೆಸೆಯಲು ಹೊರಟಿದ್ದಾರೆ. ಇತ್ತ ಬಡವರ ಪರವಾಗಿದ್ದ ರಾಮನನ್ನು ಶ್ರೀಮಂತ ರಾಮನನ್ನಾಗಿ ಬಿಂಬಿಸಲಾಗುತ್ತಿದೆ. ಇದೆಲ್ಲಾ ಕಾರಣಕ್ಕೆ ನಾವೆಲ್ಲರೂ ಗಾಂಧಿಯನ್ನು ಸರಿಯಾದ ದಾರಿಯಲ್ಲಿ ಅರ್ಥ ಮಾಡಿಕೊಳ್ಳಬೇಕು ಎಂದರು. ಆಶಾ ಕರ್ವಾಲೋ ಮತ್ತು ತಂಡ ರಾಷ್ಟ್ರೀಯ ಗೀತೆಗಳನ್ನು ಹಾಡಿದರು.ವಿವಿಧ ಸಂಘಟನೆಗಳ ಮುಂಡರಾದ ಸುರೇಶ್ ಕಲ್ಲಾಗರ, ಸದಾನಂದ ಬೈಂದೂರು, ರಾಮಕೃಷ್ಣ ಹೇರಳೆ, ಅಬೂ ಮೊಹಮ್ಮದ್, ಹೆಚ್. ನರಸಿಂಹ, ವಿನೋದ್ ಕ್ರಾಸ್ತಾ, ಪಂಜು ಗಂಗೊಳ್ಳಿ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಬಳಿಕ ಮೊಬೈಲ್ ಬೆಳಕಿನಲ್ಲಿ ಗಾಂಧೀ ಹಾಡು ಹಾಡಲಾಯಿತು. ಉದಯ ಗಾಂವ್ಕರ್ ನಿರೂಪಿಸಿದರು. ಚಂದ್ರಶೇಖರ್ ವಂದಿಸಿದರು.