ಕನ್ನಡಪ್ರಭ ವಾರ್ತೆ ವಿಜಯಪುರ: ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಪ್ರಕೃತಿಯಲ್ಲಿ ಲೀನವಾಗಿ ಎರಡು ವರ್ಷಗಳು ಕಳೆಯುತ್ತಿರುವ ಹಿನ್ನೆಲೆಯಲ್ಲಿ ಡಿ.25 ರಿಂದ ಜ.2ರ ವರೆಗೆ ಗುರುನಮನ ಮಹೋತ್ಸವ ನಡೆಯಲಿದೆ. ಈ ಜ್ಞಾನ ಯಜ್ಞದಲ್ಲಿ ಎಲ್ಲರೂ ಭಾಗವಹಿಸಿ ಗುರುದೇವರ ಆಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ ಹೇಳಿದರು.
ಶ್ರೀ ಹರ್ಷಾನಂದ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಪ್ರಯುಕ್ತ 9 ದಿನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.25ಕ್ಕೆ ಸುಧಾರಿತ ಕೃಷಿ ಕುರಿತಾಗಿ ಧಾರವಾಡ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ ಹಾಗೂ ಎ.ಎಸ್.ಆನಂದ ವಿಶೇಷ ಉಪನ್ಯಾಸ. ಡಿ.26ಕ್ಕೆ ವಿದ್ಯಾರ್ಥಿಗಳಿಗಾಗಿ ಮಹೇಶ ಮಾಶಾಳ ಜ್ಞಾನರಾಧನೆ ಉಪನ್ಯಾಸ, ಡಿ.27ಕ್ಕೆ ಗ್ರಾಮ ಸಂಸ್ಕೃತಿ ಎಂಬ ವಿಚಾರ ಗೋಷ್ಠಿ, ಜಾನಪದ ಸಾಹಿತಿ ಸಿದ್ದಪ್ಪ ಬಿದರಿ ಗ್ರಾಮೀಣ ಬದುಕಿನ ಸೊಗಡು, ಆಚಾರ-ವಿಚಾರಗಳ ಭವ್ಯ ಸಂಸ್ಕೃತಿ ಅನಾವರಣ. ಡಿ.28ಕ್ಕೆ ಯೋಗ ಜೀವನ ಎಂಬ ವಿಷಯದ ಕುರಿತು ವಿಚಾರಗೋಷ್ಠಿ, ಸಿದ್ದೇಶ್ವರ ಶ್ರೀಗಳ ಜೀವನ ಆಧಾರಿತ ಉಪನ್ಯಾಸವನ್ನು ಉಪ ಕುಲಪತಿ ಎಸ್.ವ್ಯಾಸ, ಡಾ.ಎಚ್.ಆರ್.ನಾಗೇಂದ್ರ ಹಾಗೂ ಡಾ.ಪ್ರಶಾಂತ ಕಡಕೊಳ ನೀಡಲಿದ್ದಾರೆ.
ಡಿ.29ಕ್ಕೆ ಮಾತೃ ಭಕ್ತಿ ಕುರಿತ ಉಪನ್ಯಾಸ ಡಾ.ವಿಜಯಲಕ್ಷ್ಮಿ ಬಾಳೆಕುಂದರಿ, ಡಿ.30ಕ್ಕೆ ಜಾಗತಿಕ ತತ್ವ ಚಿಂತನೆಗಳು ವಿಷಯದ ವಿಶೇಷ ಉಪನ್ಯಾಸವನ್ನು ಹೈ ಕೋರ್ಟ್ ನ್ಯಾ.ಕೃಷ್ಣ ದೀಕ್ಷಿತ್, ಡಿ.31ಕ್ಕೆ ಸೇವಾ ಭಾವ ಎಂಬ ವಿಶೇಷ ಕಾರ್ಯಕ್ರಮವನ್ನು ಬೆಸ್ಕಾಂ ಅಧಿಕಾರಿ ಮಹಾಂತೇಶ ಬೀಳಗಿ ಮಾತನಾಡಲಿದ್ದಾರೆದೆಂದು ತಿಳಿಸಿದರು.ಎರಡು ದಿನ ವಿಶೇಷ: ಜನೇವರಿ 1ಕ್ಕೆ ಶ್ರೀಗಳಿಗೆ ದೀಪ ನಮನ ಹಮ್ಮಿಕೊಳ್ಳಲಾಗಿದೆ. ಹಿರಿಯ ಸಾಹಿತಿ ಗೋ.ರು. ಚನ್ನಬಸಪ್ಪನವರು ಉಪನ್ಯಾಸ ನೀಡಲಿದ್ದಾರೆ. ಲಕ್ಷಾಂತರ ದೀಪಗಳನ್ನು ಬೆಳಗಿಸಿ ದೀಪ ನಮನ ಸಲ್ಲಿಸಲಾಗುವುದು. ಜನೆವರಿ 2ಕ್ಕೆ ಪುಷ್ಪ ನಮನ. ರಾಜ್ಯದ ವಿವಿಧ ಮಠಾದೀಶರು, ಸಂತರು, ಜಿಲ್ಲೆಯ ರಾಜಕಾರಣಿಗಳು, ರಾಜ್ಯಪಾಲರು, ಸಾಹಿತಿಗಳು, ಸಂಶೋಧಕರು ಸೇರಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.ಹಿರಿಯ ಪತ್ರಕರ್ತ ವಾಸುದೇವ ಹೇರಕಲ್ಲ, ಕಾನಿಪ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಸೇರಿ ಪ್ರಚಾರ ಸಮಿತಿ ಸದಸ್ಯರು ಇದ್ದರು.