ಸ್ಥಳ ಮಹಜರಿಗೆ ಅವಕಾಶದ ಬಗ್ಗೆ ಚರ್ಚೆ
‘ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪ್ರಕರಣವನ್ನು ಸಿಐಡಿಗೆ ಕೊಟ್ಟಿರುವುದು ರಾಜ್ಯ ಸರ್ಕಾರದ ನಿರ್ಧಾರ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸ್ಥಳ ಮಹಜರಿಗೆ ಪರಿಷತ್ ಅವಕಾಶ ಕೊಡುವ ಕುರಿತು ಚರ್ಚೆ ನಡೆಸಿದ್ದೇವೆ. ಅಂಥ ವಾತಾವರಣ ನಿರ್ಮಾಣ ಆದರೆ ಅವಕಾಶ ನೀಡಬೇಕಾಗುತ್ತದೆ’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಸಿಐಡಿಗೆ ಕೊಟ್ಟಿರುವುದಾಗಿ ಗೃಹ ಸಚಿವರು ಈಗಷ್ಟೇ ಹೇಳಿದರು. ಸಿಐಡಿಗೆ ಕೊಡುವ ಬಗ್ಗೆ ನಮ್ಮನ್ನು ಕೇಳುವುದಕ್ಕೆ ಬರುವುದಿಲ್ಲ. ಸ್ಥಳ ಮಹಜರಿಗೆ ಸಂಬಂಧಪಟ್ಟಂತೆ ಕಾರ್ಯದರ್ಶಿ, ಅಪರ ಕಾರ್ಯದರ್ಶಿ, ಎಜಿ ಅವರೊಂದಿಗೆ ಚರ್ಚೆ ನಡೆಸುತ್ತೇವೆ. ಆ ತರಹದ ವಾತಾವರಣ ನಿರ್ಮಾಣವಾದರೆ ಅವಕಾಶ ಕೊಡಬೇಕಾಗುತ್ತದೆ. ನಮ್ಮ ಕಾರ್ಯದರ್ಶಿ, ಕಾನೂನು ತಜ್ಞರು ಈಗಾಗಲೇ ಚರ್ಚೆ ನಡೆಸುತ್ತಿದ್ದಾರೆ’ ಎಂದರು.‘ನಮಗೆ ಕೊಟ್ಟಿರುವ 2 ದೂರುಗಳನ್ನು ಪೊಲೀಸರಿಗೆ ಕೊಟ್ಟಿದ್ದೇವೆ. ಸಿಐಡಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಮ್ಮ ನಿಯಮನೇ ಬೇರೆ, ರಾಜ್ಯ ಸರ್ಕಾರದ ನಿಯಮಗಳು ಬೇರೆ. ನಾವು ನಮ್ಮ ನಿಯಮ ಬಿಟ್ಟು ಏನು ಮಾಡಲೂ ಬರುವುದಿಲ್ಲ. ಮಾಡುವುದೂ ಇಲ್ಲ’ ಎಂದರು.
‘ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡುವಾಗ ನಾನು ಕೇಳುವುದಕ್ಕೆ ಬರುವುದಿಲ್ಲ. ಸಿಐಡಿಗೆ ರೆಫರೆನ್ಸ್ ಕೊಡುವಾಗ ವಿಧಾನಪರಿಷತ್ ಎಂದು ಬರೆದಿರುವುದೇ ತಪ್ಪು. ಹೀಗೆ ಪೊಲೀಸರು ಬರೆಯಬಾರದಿತ್ತು. ನಾವು ರೂಲಿಂಗ್ ಕೊಟ್ಟು ಪ್ರಕರಣವನ್ನು ಕ್ಲೋಸ್ ಮಾಡಿದ್ದೀವಿ. ನನ್ನ ಮೇಲೆ ಯಾರೂ ಒತ್ತಡ ಹಾಕುವುದಕ್ಕೆ ಸಾಧ್ಯವಿಲ್ಲ. ಪ್ರಕರಣದ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿದ್ದರು ಕೊಟ್ಟಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
’ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಂದು ಕೇಸ್ ಕೊಟ್ಟಿದ್ದಾರೆ. ಅದರ ಮೇಲೆ ಕೇಸ್ ಆಗಿದೆ. ಕಲಾಪ ಮುಂದೂಡಿದ್ದರೂ ಅದು ವಿಧಾನಪರಿಷತ್ ಆಗಿರುತ್ತದೆ. ಅಲ್ಲಿ ಏನೇ ಆದರೂ ನಮ್ಮ ಅನುಮತಿ ಪಡೆಯಬೇಕು. ಪರಿಷತ್ ನಮ್ಮ ಕಸ್ಟಡಿಯಲ್ಲೇ ಇರುತ್ತದೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ನನಗೆ ಮತ್ತೊಂದು ದೂರು ಕೊಟ್ಟಿಲ್ಲ. ಕೊಟ್ಟರೆ ನಾವು ಅದನ್ನು ಪರಿಗಣಿಸುತ್ತೇವೆ. ಎರಡೂ ಕಡೆ ಯೋಚಿಸಬೇಕು. ಹೆಬ್ಬಾಳ್ಕರ್ ಅವರನ್ನು ಒಬ್ಬ ಮಂತ್ರಿಯಾಗಿ ಅಲ್ಲ, ಮಹಿಳೆಯಾಗಿ ನಾವು ನೋಡಬೇಕು. ಇನ್ನು ಸಿ.ಟಿ. ರವಿ ಅವರನ್ನು ಅಮಾನುಷವಾಗಿ ಕರೆದುಕೊಂಡು ಹೋಗಿದ್ದು ತಪ್ಪು’ ಎಂದರು.