ರಟ್ಟೀಹಳ್ಳಿ: ಫ.ಗು. ಹಳಕಟ್ಟಿಯವರು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಸಾಧನೆ, ತ್ಯಾಗ, ಕಟ್ಟಿ ಬೆಳೆಸಿದ ಸಂಸ್ಥೆಗಳು, ಎಲ್ಲಕ್ಕಿಂತ ಮಿಗಿಲಾಗಿ ವಚನ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಇಂದಿಗೂ ಅವರ ಹೆಸರನ್ನು ಅಜರಾಮರಗೊಳಿಸಿದೆ ಎಂದು ಪಟ್ಟಣ ಪಂಚಾಯತ್ ಸಿಬ್ಬಂದಿ ರಾಜಕುಮಾರ ಹೇಂದ್ರೆ ಹೇಳಿದರು.
ಫ.ಗು. ಹಳಕಟ್ಟಿಯವರು ಅಪಾರ ಕಾನೂನು ಜ್ಞಾನದಿಂದಾಗಿ ವಕೀಲಿ ವೃತ್ತಿಯಿಂದಾಗಿ ಪ್ರಸಿದ್ಧ ವಕೀಲರಾಗಿ ತಮ್ಮ ಜನಪ್ರಿಯತೆಯಿಂದಲೇ 1905ರಲ್ಲಿ ಬಿಜಾಪುರ ನಗರಸಭೆಯ ಶಾಲಾ ಕಾರ್ಯನಿರ್ವಾಹಕ ಮಂಡಳಿಯ ಸಭಾಧ್ಯಕ್ಷರಾಗಿ ಮತ್ತು ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿ ಆಯ್ಕೆಯಾದರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿಯೂ ಆಯ್ಕೆಗೊಂಡರು. ನಂತರದ ದಿನಗಳಲ್ಲಿ ಮುಂಬಯಿ ವಿಧಾನ ಪರಿಷತ್ತಿನ ಸದಸ್ಯರಾಗಿ ತಮ್ಮ ಶಾಸನಬದ್ಧ ಅಧಿಕಾರದಿಂದ ಕನ್ನಡವನ್ನು ಗಟ್ಟಿಗೊಳಿಸಿ ಸಮೃದ್ಧ ಕನ್ನಡ ಕಟ್ಟಲು ಪ್ರಾಮಾಣಿಕವಾಗಿ ದುಡಿದು ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನ್ ವ್ಯಕ್ತಿ ಇಂದಿಗೂ ಅಜರಾಮರ ಎಂದರು.
ಇದೇ ಸಂದರ್ಭದಲ್ಲಿ ವಿವೇಕ ಕುಲಕರ್ಣಿ, ಸಂತೋಷ ಕಾಪ್ಸೀಕರ್, ರವಿ ಎಸ್., ಪಟ್ಟಣ ಪಂಚಾಯತ್ ಸಿಬ್ಬಂದಿ ಪಿ. ಆರ್. ಮಲ್ಲನಗೌಡ್ರ, ಚಂದ್ರಪ್ಪ ಅಂತರವಳ್ಳಿ, ಸಂತೋಷ ಬಿಳಚಿ, ಮಂಜು ಸುಣಗಾರ, ಮಂಜಪ್ಪ ಚಲವಾದಿ, ಬಸವರಾಜ ಹಿರೇಮಠ ಮುಂತಾದವರು ಇದ್ದರು.