ಗದಗ: ನಿಯಮಿತವಾಗಿ ವ್ಯಾಯಾಮ ಹಾಗೂ ಕ್ರೀಡೆಗಳಿಂದ ಆರೋಗ್ಯವಂತರಾಗಿರಬಹುದು ಎಂದು ವೈದ್ಯ ಡಾ. ಜಗದೀಶ ಶಿರೋಳ ಹೇಳಿದರು.
ಪ್ರಸ್ತುತ ದಿನಮಾನಗಳಲ್ಲಿ ಯುವ ಪೀಳಿಗೆ ಕ್ರೀಡೆಗಳಿಂದ ದೂರ ಉಳಿದಿದ್ದು, ಜಂಕ್ಫುಡ್ ಆಹಾರ ಪದ್ಧತಿಯ ಜೀವನ ಶೈಲಿ, ಅತಿಯಾದ ಮೊಬೈಲ್ ಬಳಕೆಯಿಂದ ಕಡಿಮೆ ವಯಸ್ಸಿನ ಯುವಕ, ಯುವತಿಯರಲ್ಲಿ ಮಧುಮೇಹ, ರಕ್ತದೊತ್ತಡ, ಹೃದಯದ ಕಾಯಿಲೆ ಕಂಡುಬರುತ್ತಿವೆ. ದೈಹಿಕ ಚಟುವಟಿಕೆಯಲ್ಲಿ ತೊಡಗುವುದರಿಂದ ನಾವೆಲ್ಲರು ಮಾನಸಿಕ ನೆಮ್ಮದಿಯಿಂದ ಜೀವನ ನಡೆಸಬಹುದು. ಅಲ್ಲದೇ ದೈಹಿಕ ಚಟುವಟಿಕೆಗಳು ನಮ್ಮನ್ನು ಇನ್ನಷ್ಟು ಆಸಕ್ತಿಯಿಂದ ಜೀವಿಸಲು ಸಹಕಾರಿಯಾಗಿವೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ.ದೇವರಾಜ, ಪ್ರತಿವರ್ಷ ಸಂಸ್ಥೆಯ ನೌಕರರಿಗೆ ಕ್ರೀಡಾ ಮನೋಭಾವನೆ ಬೆಳೆಸುವ ದೃಷ್ಟಿಯಿಂದ ಹಾಗೂ ಒತ್ತಡದ ಕೆಲಸ ಕಾರ್ಯದಿಂದ ಹೊರಬರಲು ಸಂಸ್ಥೆಯ ನೌಕರರಿಗೆ ಕ್ರೀಡೆ ಹಾಗೂ ಕಲಾ ಚಟುವಟಿಕೆ ಆಯೋಜಿಸಲಾಗಿದೆ. ಯೋಗ, ಧ್ಯಾನ ಮಾಡುವದರೊಂದಿಗೆ ಪ್ರತಿ ದಿನ ಕ್ರೀಡೆಗಳಲ್ಲಿ ತೊಡಗಿಕೊಳ್ಳುವದರ ಮೂಲಕ ದಿನವಿಡಿ ಚೈತನ್ಯದಿಂದ ಕೂಡಿರಬಹುದೆಂದು ಎಂದರು.ಕ್ರೀಡೆಯಲ್ಲಿ ವಿಭಾಗದ ಘಟಕಗಳಿಂದ ಚಾಲಕ, ನಿರ್ವಾಹಕ, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗಳು ಭಾಗವಹಿಸಿದ್ದರು. ಇಲ್ಲಿ ಆಯ್ಕೆಯಾದ ವಿಜೇತರು ಕೇಂದ್ರ ಮಟ್ಟದಲ್ಲಿ ಆಯ್ಕೆಯಾಗುತ್ತಾರೆ.