ಜಿಲ್ಲೆಯಾದ್ಯಂತ ಭಾರೀ ಮಳೆ, ಗಾಳಿ: ಮರ ಬಿದ್ದು ಓರ್ವ ಸಾವು

KannadaprabhaNewsNetwork |  
Published : May 25, 2025, 11:57 PM IST
ಕೊಪ್ಪ ತಾಲ್ಲೂಕಿನ ಕೊಗ್ರೆ - ಗಡಿಕಲ್ ಮಾರ್ಗ ಮಧ್ಯೆ ಮರ ಬಿದ್ದು ಜಖಂಗೊಂಡಿರುವ ಆಟೋ. | Kannada Prabha

ಸಾರಾಂಶ

ಚಿಕ್ಕಮಗಳೂರು, ಮಳೆಯ ಆರ್ಭಟಕ್ಕೆ ಕಾಫಿ ನಾಡು ತತ್ತರಿಸುತ್ತಿದೆ. ಬಲವಾಗಿ ಬೀಸುತ್ತಿರುವ ಗಾಳಿಗೆ ಮರ, ವಿದ್ಯುತ್‌ ಕಂಬಗಳು ಧರೆ ಗುರುಳುತ್ತಿವೆ. ಮಲೆನಾಡಿನ ಮಂದಿ ಮನೆಯಿಂದ ಹೊರಗೆ ಬರಲು ಭಯಭೀತರಾಗಿದ್ದಾರೆ. ಭಾನುವಾರ ಚಲಿಸುತ್ತಿದ್ದ ಆಟೋ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಆಟೋ ಚಾಲನೆ ಮಾಡುತ್ತಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಸ್ತೆ ಕಾಣದೆ ಎರಡು ಕಾರುಗಳು ಸಮೀಪದ ಹಳ್ಳ ಹಾಗೂ ಉಪ ನದಿಗೆ ಬಿದ್ದಿವೆ.

ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಮರ । ದಾರಿ ಕಾಣದೆ ಹಳ್ಳ, ಉಪ ನದಿಗೆ ಇಳಿದ ಕಾರುಗಳು । ಹಲವೆಡೆ ಧರೆಗುರುಳಿದ ವಿದ್ಯುತ್‌ ಕಂಬಗಳು । ಮಲೆನಾಡಿನಲ್ಲಿ ಜನ ಜೀವನ ಅಸ್ತವ್ಯಸ್ಥ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಳೆಯ ಆರ್ಭಟಕ್ಕೆ ಕಾಫಿ ನಾಡು ತತ್ತರಿಸುತ್ತಿದೆ. ಬಲವಾಗಿ ಬೀಸುತ್ತಿರುವ ಗಾಳಿಗೆ ಮರ, ವಿದ್ಯುತ್‌ ಕಂಬಗಳು ಧರೆ ಗುರುಳುತ್ತಿವೆ. ಮಲೆನಾಡಿನ ಮಂದಿ ಮನೆಯಿಂದ ಹೊರಗೆ ಬರಲು ಭಯಭೀತರಾಗಿದ್ದಾರೆ. ಭಾನುವಾರ ಚಲಿಸುತ್ತಿದ್ದ ಆಟೋ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಆಟೋ ಚಾಲನೆ ಮಾಡುತ್ತಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಸ್ತೆ ಕಾಣದೆ ಎರಡು ಕಾರುಗಳು ಸಮೀಪದ ಹಳ್ಳ ಹಾಗೂ ಉಪ ನದಿಗೆ ಬಿದ್ದಿವೆ.

ಕೊಪ್ಪ ತಾಲೂಕಿನ ಭೈರೆದೇವರು ಗ್ರಾಮದ ಶಿಡ್ಲೆಮನೆ ವಾಸಿಯಾದ ಆಟೋ ಚಾಲಕ ರತ್ನಾಕರ ಹೆಗ್ಡೆ (45 ವರ್ಷ ) ಭಾನುವಾರ ಮಧ್ಯಾಹ್ನ 1.30ರ ವೇಳೆಗೆ ಜನಗಳನ್ನು ಕೊಗ್ರೆಗೆ ಬಿಟ್ಟು ವಾಪಸ್ ಗಡಿಕಲ್ ಆಟೋ ಸ್ಟ್ಯಾಂಡ್ ಬರುವಾಗ ಮಾರ್ಗ ಮಧ್ಯೆ ಬೃಹತ್ ಮರ ಆಟೋ ಮೇಲೆ ಬಿದ್ದ ಪರಿಣಾಮ ಅವರು ಆಟೋದಲ್ಲೇ ಮೃತಪಟ್ಟಿದ್ದಾರೆ.

ಮೂಡಿಗೆರೆ ತಾಲೂಕಿನ ಬಣಕಲ್‌ ಹಾಗೂ ಚಕ್ಕಮಕ್ಕಿ ಗ್ರಾಮದ ಬಳಿ ಒಂದು ಕಾರು ಹಳ್ಳಕ್ಕೆ ಬಿದ್ದಿದ್ದರೆ ಮತ್ತೊಂದು ಕಾರು ಹೇಮಾವತಿ ನದಿಯ ಉಪ ನದಿಗೆ ಬಿದ್ದಿದ್ದೆ. ಸ್ಥಳೀಯರು ಕಾರನ್ನು ಹೊರ ತೆಗೆದಿದ್ದಾರೆ. ಕಾರಿನಲ್ಲಿದ್ದ ಪ್ರವಾಸಿಗರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ.

ಜಿಲ್ಲೆಯ ಬಯಲುಸೀಮೆ ಸೇರಿದಂತೆ ಮಲೆನಾಡಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಹಲವೆಡೆ ಕಳೆದ ಮೂರು ದಿನಗಳಿಂದ ಬಿಡುವಿಲ್ಲದೆ ಮಳೆ ಬರುತ್ತಿದೆ. ಗಾಳಿ ಪ್ರಮಾಣವೂ ಅಧಿಕವಾಗಿದೆ. ವಿದ್ಯುತ್‌ ಕಂಬಗಳು, ಮರಗಳು ಬಿದ್ದಿದ್ದರಿಂದ ವಿದ್ಯುತ್‌ ಸಂಪರ್ಕ ಕಡಿದು ಹೋಗಿದೆ. ಹಲವು ಗ್ರಾಮೀಣ ಭಾಗದಲ್ಲಿ ಜನರು ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಕಡೂರು ಹಾಗೂ ಅಜ್ಜಂಪುರ ತಾಲೂಕುಗಳಲ್ಲೂ ತುಂತುರು ಮಳೆ ಬಂದಿದ್ದರೆ, ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹಾಗೂ ಲಕ್ಕವಳ್ಳಿ ಹೋಬಳಿಯಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲೂ ಕಳೆದ ಮೂರು ದಿನ ಗಳಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ನಗರ ಪ್ರದೇಶದಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆ ಹಲವೆಡೆ ನೀರು ಹರಿ ಯುತ್ತಿತ್ತು. ಬಿಡುವಿಲ್ಲದೆ ಮಳೆ ಬರುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ಥವಾಗಿದೆ.

ನೆಮ್ಮಾರ್‌, ಕೆರೆಕಟ್ಟೆ, ಗಂಗಡಿಕಲ್ಲು ಸೇರಿದಂತೆ ಶೃಂಗೇರಿ ತಾಲೂಕಿನಾದ್ಯಂತ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಕಳಸ, ಕುದುರೆಮುಖ, ಕೊಪ್ಪ ತಾಲೂಕಿನ ಜಯಪುರ, ಹರಿಹರಪುರ ಹಾಗೂ ಎನ್‌.ಆರ್‌.ಪುರ ತಾಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕಳೆದ 15 ದಿನಗಳಿಂದ ಜಿಲ್ಲೆಯಾದ್ಯಂತ ಮಳೆ ಬರುತ್ತಿರುವುದರಿಂದ ಮಣ್ಣಿನ ತೇವಾಂಶ ಹೆಚ್ಚಾಗಿದ್ದು, ಇದೇ ಪ್ರಮಾಣದಲ್ಲಿ ಮಳೆ ಮುಂದುವರಿದರೆ ಧರೆ ಕುಸಿತ ಸಂಭವಿಸುವ ಸಾಧ್ಯತೆಯೂ ಇದೆ. ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಮೂಡಿಗೆರೆ: ಭಾರೀ ಗಾಳಿ ಮಳೆಯಿಂದ ಕೊಟ್ಟಿಗೆಹಾರ ತರುವೆ ಗ್ರಾಪಂ ಕಚೇರಿಯ ಹಳೇ ಕಟ್ಟಡದ ಛಾವಣಿಗೆ ಹಾನಿ ಯಾಗಿದೆ. ಕೊಟ್ಟಿಗೆಹಾರದ ಬಳಿ ರಾಷ್ಟ್ರೀಯ ಹೆದ್ದಾರಿಗೆ ಮರವೊಂದು ಉರುಳಿದ್ದು ಅದನ್ನು ಸ್ಥಳೀಯರು ತೆರವು ಗೊಳಿಸಿ ದ್ದಾರೆ. ಕನ್ನಾಪುರದಿಂದ ಹಾಂದಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗೆ ಬೃಹತ್ ಮರ ಉರುಳಿದ್ದರಿಂದ 5 ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮೂಡಿಗೆರೆಯ ಸಮಾಜ ಸೇವಾ ಕಾರ್ಯಕರ್ತರು ತೆರಳಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿದರು.

ತಾಲೂಕಿನಲ್ಲಿ ಹರಿಯುವ ಹೇಮಾವತಿ ಸೇರಿದಂತೆ ಎಲ್ಲ ನದಿಗಳು ಉಕ್ಕಿ ಹರಿಯುತ್ತಿದೆ. ವಿದ್ಯುತ್ ಪೂರೈಕೆಯಿಲ್ಲದೆ ಗ್ರಾಮೀಣ ಭಾಗದಲ್ಲಿ ಮೊಬೈಲ್ ಟವರ್‌ಗಳು ಸ್ಥಗಿತಗೊಂಡಿದೆ. ಮೊಬೈಲ್ ಚಾರ್ಜ್ ಮಾಡಲು ಸಾಧ್ಯವಾಗದೆ ಗ್ರಾಮೀಣ ಪ್ರದೇಶದ ಬಹುತೇಕ ಮೊಬೈಲ್ ಸ್ವಿಚ್ ಆಫ್‌ ಆಗಿವೆ. ಗ್ರಾಮೀಣ ಭಾಗದಲ್ಲಿ ಮಳೆಯಿಂದ ಅನಾಹುತ ಸಂಭವಿಸಿದರೆ ತುರ್ತು ಕರೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಎದುದಾಗಿದೆ.

ಅಧಿಕ ಮಳೆಯಿಂದಾಗಿ ಮೂಡಿಗೆರೆ ಪಟ್ಟಣ, ಜನ್ನಾಪುರ, ಗೋಣೀಬೀಡು, ಬಣಕಲ್, ಕೊಟ್ಟಿಗೆಹಾರ ಪಟ್ಟಣಗಳಲ್ಲಿ ಜನರಿಲ್ಲದೆ ಬಿಕೋ ಎನ್ನುವಂತಿತ್ತು. ಪ್ರತಿದಿನ ಮನೆಮನೆಗೆ ವಾಹನಗಳಲ್ಲಿ ದಿನಸಿ, ತರ್ಕಾರಿ, ಮೀನು, ಮತ್ತು ಹಣ್ಣುಹಂಪಲುಗಳನ್ನು ತಂದು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು, ಮಳೆ ಗಾಳಿಗೆ ಹೆದರಿ ಮತ್ತು ರಸ್ತೆಗಳು ಜಲಾವೃತಗೊಂಡಿರುವುದರಿಂದ ಭಾನುವಾರ ವ್ಯಾಪಾರಕ್ಕೆ ತೆರಳಲಿಲ್ಲ.

ಸಬ್ಲಿ ಶಾಲಾ ರಂಗಮಂದಿರದ ಮೇಲ್ಛಾವಣಿ ಹಾರಿ ಹೋಗಿದ್ದು ಗೋಡೆ ಬಿರುಕು ಬಿಟ್ಟಿದೆ‌. ಜಾವಳಿ, ಬಾಳೂರು, ನಿಡುವಾಳೆ ಭಾಗದಲ್ಲಿ ಅಲ್ಲಲ್ಲಿ ಮರಗಳು ಧರೆಗುರುಳಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

25 ಕೆಸಿಕೆಎಂ 2ಕೊಪ್ಪ ತಾಲೂಕಿನ ಕೊಗ್ರೆ - ಗಡಿಕಲ್ ಮಾರ್ಗ ಮಧ್ಯೆ ಮರ ಬಿದ್ದು ಜಖಂಗೊಂಡಿರುವ ಆಟೋ.

--- 25 ಕೆಸಿಕೆಎಂ 3ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದ ಬಳಿ ಹಳ್ಳಕ್ಕೆ ಇಳಿದ ಕಾರ್‌ವನ್ನು ಸ್ಥಳೀಯರು ಹೊರಗೆ ತೆಗೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ