ಲಕ್ಷಾಂತರ ರು. ನಷ್ಟ । ಫಸಲು ಭರಿತ ಬಾಳೆ ತೋಟವೂ ಹಾನಿ । ಜೀವ ಹಾನಿ ಇಲ್ಲ
ಕನ್ನಡಪ್ರಭ ವಾರ್ತೆ ಅರಸೀಕೆರೆನಗರ ಸೇರಿದಂತೆ ತಾಲೂಕಿನ ಕಸಬಾ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಶುಕ್ರವಾರ ಸಂಜೆ ಮಿಂಚು, ಗುಡುಗು ಹಾಗೂ ಭಾರಿ ಗಾಳಿ ಸಹಿತ ಮಳೆಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಕಾಟೀಕೆರೆ ಗ್ರಾಮದ ಭೈರೇಶ್ ಎನ್ನುವವರ ಫಸಲು ಭರಿತ ಬಾಳೆ ತೋಟ ಸಂಪೂರ್ಣ ನೆಲ ಕಚ್ಚಿದ್ದರೆ, ತೆಂಗಿನ ಮರಗಳು ಧರೆಗುರುಳಿವೆ.
ಕಲ್ಲನಾಯ್ಕನಹಳ್ಳಿ, ಸಂಕೋಡನಹಳ್ಳಿ, ಜಾಜೂರು, ನಾಗತಿಹಳ್ಳಿ ಒಳಗೊಂಡಂತೆ ಕೆಲವೆಡೆ ಗಾಳಿಯ ರಭಸಕ್ಕೆ ಹತ್ತಾರು ತೆಂಗಿನ ಮರಗಳು ಬುಡ ಸಹಿತ ಬಿದ್ದಿದ್ದು ಲಕ್ಷಾಂತರ ರು. ನಷ್ಟವಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ನಗರದ ಹಲವು ಬಡಾವಣೆಗಳಲ್ಲಿ ಚರಂಡಿಗಳು ಉಕ್ಕಿ ಹರಿದ ಪರಿಣಾಮ ರಸ್ತೆಗಳು ಕೆರೆಯಂತೆ ಮಾರ್ಪಟ್ಟಿದ್ದವು. ಗುರುಭವನ, ಬಸವರಾಜೇಂದ್ರ ಶಾಲಾ ಆವರಣದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿತ್ತು. ಹಾಸನರಸ್ತೆ, ಸರಸ್ವತಿಪುರಂ ಬಡಾವಣೆ ನಿವಾಸಿಗಳು ದಿನಸಿ ಮತ್ತಿತರ ಪರಿಕರ ರಕ್ಷಿಸಿಕೊಳ್ಳಲು ಪರದಾಡಿದರು. ಗಾಳಿ, ಮಳೆ ರಭಸಕ್ಕೆ ಹಾನಿಯಾಗಿರುವ ಬೆಳೆಗಳಿಗೆ ತಾಲೂಕು ಆಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘದ ರಾಜ್ಯ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ. ವರ್ಷದ ಮೊದಲ ಮಳೆ ಮಂದಹಾಸ ಮೂಡಿಸಿದ್ದರೆ, ಬೆಳೆ ಕಳೆದುಕೊಂಡವರ ಪಾಲಿಗೆ ಆತಂಕ ತಂದಿದೆ. ಮಳೆ ಗಾಳಿಗೆ ಧರೆಗುರುಳಿದ ಅಡಿಕೆ ಮರಗಳುಹಾಸನ: ಶನಿವಾರ ರಾತ್ರಿ ಭಾರಿ ಗಾಳಿಯೊಂದಿಗೆ ಸುರಿದ ಧಾರಾಕಾರ ಮಳೆಗೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಅಡಿಕೆ ಗಿಡಗಳು ನೆಲಕ್ಕುರುಳಿವೆ.ರವೀಶ್ ಎಂಬುವವರಿಗೆ ಸೇರಿದ ಎರಡೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಗಿಡಗಳು ಶನಿವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ 350ಕ್ಕೂ ಹೆಚ್ಚು ಅಡಿಕೆ ಗಿಡಗಳು ಧರೆಗುರುಳಿವೆ. ಇದರಿಂದಾಗಿ ಸುಮಾರು ಮೂರರಿಂದ ನಾಲ್ಕು ಲಕ್ಷ ರು. ಹಾನಿಯಾಗಿದೆ. ಫಸಲಿಗೆ ಬಂದಿದ್ದ ಅಡಿಕೆ ಗಿಡಗಳನ್ನು ಕಳೆದುಕೊಂಡು ರೈತ ರವೀಶ್ ಕಂಗಾಲಾಗಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಮಮತಾ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಭಾರಿ ಮಳೆಗೆ ಅರಸೀಕೆರೆ ತಾಲೂಕಿನ ಕಾಟೀಕೆರೆ ಗ್ರಾಮದ ಕೃಷಿಕ ಭೈರೇಶ್ ಅವರ ಬಾಳೆ ತೋಟ ನೆಲಕಚ್ಚಿದ್ದರೆ, ತೆಂಗಿನ ಮರಗಳು ಧರೆಗುರುಳಿರುವುದು.