ಗದಗ ನಗರಸಭೆ ಬಿಜೆಪಿ ಮೂವರು ಸದಸ್ಯರ ಅನರ್ಹ ಆದೇಶ ಎತ್ತಿ ಹಿಡಿದ ಹೈಕೋರ್ಟ್

KannadaprabhaNewsNetwork |  
Published : Feb 11, 2026, 02:30 AM IST
ಪೋಟೋ: ಉಷಾ ದಾಸರಪೋಟೋ: ಅನೀಲ ಅಬ್ಬಿಗೇರಿಪೋಟೋ ಮುತ್ತು ಮುಶಿಗೇರಿ | Kannada Prabha

ಸಾರಾಂಶ

ಕಳೆದ ಒಂದೂವರೆ ವರ್ಷದಿಂದ ಸದಸ್ಯತ್ವದ ಅನರ್ಹತೆ ಕುರಿತು ಹಗ್ಗ ಜಗ್ಗಾಟದಲ್ಲಿ ತೊಡಗಿದ್ದ ಕಾಂಗ್ರೆಸ್ ಬಿಜೆಪಿ ನಡುವಿನ ಒಳಮುನಿಸು ಈ ತೀರ್ಪಿನಿಂದಾಗಿ ಬಹಿರಂಗಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.

ಗದಗ: ಜಿಲ್ಲೆಯ ರಾಜಕೀಯದಲ್ಲಿ ಅಲ್ಲೋಲ- ಕಲ್ಲೋಲ ಸೃಷ್ಟಿಸಿದ್ದ ಬಿಜೆಪಿಯ ನಗರಸಭೆ ಮೂವರು ಸದಸ್ಯರನ್ನು ಅನರ್ಹ ಮಾಡಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶವನ್ನು ಮಂಗಳವಾರ ರಾಜ್ಯ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದ್ದು, ಬಿಜೆಪಿ ಸದಸ್ಯರು ತಮ್ಮ‌ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ.

ಈ ಹಿಂದೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮಾಡಿದ್ದ ಅನರ್ಹತೆ ಆದೇಶವನ್ನು ಪ್ರಶ್ನಿಸಿ ಮೂವರು ಬಿಜೆಪಿ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಪೂರ್ಣಗೊಂಡು ಹಲವಾರು ದಿನಗಳೇ ಕಳೆದಿದ್ದು, ಎಲ್ಲರೂ ತೀರ್ಪಿಗಾಗಿ ಕಾಯುತ್ತಿದ್ದರು. ಮಂಗಳವಾರ ಪ್ರಕಟವಾದ ತೀರ್ಪಿನಲ್ಲಿ ಮೇಲ್ಮನವಿಯನ್ನು ನ್ಯಾಯಾಲಯವು ವಜಾ ಮಾಡಿದೆ. ಈ ಆದೇಶದಿಂದ ಬಿಜೆಪಿ ಮೂವರು ನಗರಸಭೆ ಸದಸ್ಯರ ಅನರ್ಹತೆ ಮುಂದುವರಿದಿದೆ.

ಕಳೆದ ಒಂದೂವರೆ ವರ್ಷದಿಂದ ಸದಸ್ಯತ್ವದ ಅನರ್ಹತೆ ಕುರಿತು ಹಗ್ಗ ಜಗ್ಗಾಟದಲ್ಲಿ ತೊಡಗಿದ್ದ ಕಾಂಗ್ರೆಸ್ ಬಿಜೆಪಿ ನಡುವಿನ ಒಳಮುನಿಸು ಈ ತೀರ್ಪಿನಿಂದಾಗಿ ಬಹಿರಂಗಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.

ಹಿನ್ನೆಲೆ: ನಗರದ ಮಧ್ಯಭಾಗದಲ್ಲಿ ಇರುವ 30ಕ್ಕೂ ಹೆಚ್ಚು ಎಕರೆ ನೂರಾರು ಕೋಟಿ ಬೆಲೆಬಾಳುವ ಭೂಮಿಯನ್ನು ಲೀಸ್ ನೀಡಲು ಮಾಡಿದ್ದ 378ನೇ ಠರಾವು ನಕಲಿ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಹಿಂದೆ ನಗರಸಭೆ ಆಯುಕ್ತರಾಗಿದ್ದ ಪ್ರಶಾಂತ ವರಗ್ಗಪ್ಪನ್ನವರ ಅವರು ನನ್ನ ಸಹಿ ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದರು. ಪ್ರಕರಣದಲ್ಲಿ ಕಾನೂನು ಹೋರಾಟ ನಡೆದು ಮೂವರು ಬಿಜೆಪಿ ನಗರಸಭೆ ಸದಸ್ಯರನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನರ್ಹ ಮಾಡಿದ್ದರು.

ಪ್ರಾದೇಶಿಕ ಆಯುಕ್ತರ ಆದೇಶದ ಪ್ರಶ್ನಿಸಿ ಧಾರವಾಡ ವಿಭಾಗೀಯ ಹೈಕೋರ್ಟ ಏಕ ಸದಸ್ಯ ಪೀಠಕ್ಕೆ ನಗರಸಭೆ ಮಾಜಿ ಅಧ್ಯಕ್ಷೆ ಮತ್ತು ಸದಸ್ಯೆ ಉಷಾ ದಾಸರ, ಅನಿಲ ಅಬ್ಬಿಗೇರಿ, ಮುತ್ತು ಮುಷಿಗೇರಿ ಅವರು ಮೇಲ್ಮನವಿ ಸಲ್ಲಿಸಿದ್ದರು. ವರ್ಷದಿಂದ ವಿಚಾರಣೆ ನಡೆದು ಕಳೆದ ಮೂರು ತಿಂಗಳ ಹಿಂದೆ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಮಂಗಳವಾರ ಆದೇಶ ನೀಡಿದ ಏಕ ಸದಸ್ಯ ಪೀಠವು ಪ್ರಾದೇಶಿಕ ಆಯುಕ್ತರ ಆದೇಶ ಎತ್ತಿ ಹಿಡಿದು, ಸದಸ್ಯರ ಮೇಲ್ಮನವಿ ಅಜಿರ್ಯನ್ನು ತಿರಸ್ಕರಿಸಿದೆ.

ಹಲವಾರು ಬೆಳವಣಿಗೆ: ಮೂವರು ಸದಸ್ಯರ ಅನರ್ಹ ಆದೇಶದಿಂದ ಬಿಜೆಪಿ ಸದಸ್ಯರ ಸಂಖ್ಯಾಬಲ 15ಕ್ಕೆ ಕುಸಿದಿದ್ದು, 17 ಜನ ಕಾಂಗ್ರೆಸ್ ಸದಸ್ಯರಿದ್ದರು. ಸಂಖ್ಯಾಬಲದಲ್ಲಿ ಕುಸಿದಿದ್ದ ಬಿಜೆಪಿ ಸದಸ್ಯರು ಚುನಾವಣೆಗೆ ತಡೆ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಧಾರವಾಡ ವಿಭಾಗೀಯ ಪೀಠದಲ್ಲಿ ಚುನಾವಣೆ ದಿನವೇ ವಿಚಾರಣೆಗೆ ಕೈಗೆತ್ತಿಕೊಳ್ಳಲಾಯಿತು. ಮಧ್ಯಾಹ್ನ 1.30ರ ಹೊತ್ತಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಗರಸಭೆಗೆ ದೌಡಾಯಿಸಿದ್ದರು. ಈ ಮಧ್ಯೆ ಚುನಾವಣೆ ಮುಂದೂಡುವಂತೆ ಹೈಕೋರ್ಟ್ ಆದೇಶ ನೀಡಿದ್ದರಿಂದ ಬಿಜೆಪಿ ಸದಸ್ಯರಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ, ಹೈಕೋರ್ಟ್ ಆದೇಶ ಕೈಸೇರದ ಕಾರಣ ಚುನಾವಣಾ ಅಧಿಕಾರಿ ಆಗಿದ್ದ ಉಪವಿಭಾಗಾಧಿಕಾರಿ ಗಂಗಪ್ಪ ಅವರ ಚುನಾವಣೆ ನಡೆಸಿದ್ದರು. ಈ ಹಿನ್ನೆಲೆ ನ್ಯಾಯಾಂಗ ನಿಂದನೆ ಪ್ರಕರಣವು ಇನ್ನೂ ವಿಚಾರಣೆ ಹಂತದಲ್ಲಿದೆ.

ಈ ನಡುವೆ ಹೈಕೋರ್ಟ್ ಅನರ್ಹತೆ ಎತ್ತಿ ಹಿಡಿದರೂ ಚುನಾವಣಾ ಅಧಿಕಾರಿಗಳಿಂದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದ್ದ ಕಾರಣ ನಗರಸಭೆಯಲ್ಲಿ ಆಡಳಿತಾಧಿಕಾರಿಯ ಅಧಿಕಾರವೇ ಇನ್ನೂ ಮುಂದುವರಿಯುವುದು ಸ್ಪಷ್ಟವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೇಶ್ವರ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಲಲಿತಾ ಕೆರಿಮನಿಗೆ ಅಧಿಕೃತ ಆಹ್ವಾನ
ನಿಸ್ವಾರ್ಥ ಕಾಯಕವೇ ಶರಣತ್ವದ ಮಾರ್ಗ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ