ಕನ್ನಡಪ್ರಭ ವಾರ್ತೆ ಗದಗ ಕರ್ನಾಟಕ ಏಕೀಕರಣ, ಸ್ವಾತಂತ್ರ್ಯ ಹೋರಾಟದ ಜಾಗೃತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ನಾಡಕವಿ ಹುಯಿಲಗೋಳ ನಾರಾಯಣರಾಯರ ನಾಡು, ನುಡಿಯ ಸೇವೆ ಸದಾ ಸ್ಮರಣೀಯವಾಗಿದೆ ಎಂದು ಇಸ್ರೋದ ವಿಶ್ರಾಂತ ವಿಜ್ಞಾನಿ ಸುಧೀಂದ್ರ ಬಿಂದಗಿ ಹೇಳಿದರು. ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಹುಯಿಲಗೋಳ ನಾರಾಯಣರಾವ್ ಪ್ರತಿಷ್ಠಾನ ಹಾಗೂ ಜಿಲ್ಲಾ ಕಸಾಪ ಸಂಯುಕ್ತಾಶ್ರಯದಲ್ಲಿ ನಡೆದ ಹುಯಿಲಗೋಳ ನಾರಾಯಣರಾಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉದಯವಾಗಲಿ ಗೀತೆಯ ಮೂಲಕ ಏಕೀಕರಣದ ಜಾಗೃತಿಯನ್ನು ಪ್ರತಿಯೊಬ್ಬ ಕನ್ನಡಿಗನ ಹೃನ್ಮನಗಳಲ್ಲಿ ಮೂಡಿಸಿದ ನಾರಾಯಣರಾಯರು ತಮ್ಮ ವಿವಿಧ ಸಾಮಾಜಿಕ ನಾಟಕಗಳ ಮೂಲಕ ರಾಷ್ಟ್ರೀಯ ಜಾಗೃತಿಯನ್ನು ಮೂಡಿಸಿದರು ಹಾಗೂ ಶತಮಾನೋತ್ಸವ ಪೂರೈಸಿದ ವಿದ್ಯಾದಾನ ಸಮಿತಿಯ ಸಂಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿಯೂ ಅಪಾರ ಸಾಧನೆಗೈದ ಪ್ರಾತಃಸ್ಮರಣೀಯರಾಗಿದ್ದಾರೆ ಎಂದರು. ಸಮಾರಂಭವು ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ಉದಯವಾಗಲಿ ಗೀತೆ ಗಾಯನದೊಂದಿಗೆ ಪ್ರಾರಂಭಗೊಂಡಿತು. ಹುಯಿಲಗೋಳ ನಾರಾಯಣರಾವ್ ಪ್ರತಿಷ್ಠಾನದ ಕಾರ್ಯದರ್ಶಿ, ಪ್ರಾಚಾರ್ಯೆ ಡಾ. ಗಂಗೂಬಾಯಿ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಯಿಲಗೋಳ ನಾರಾಯಣರಾಯರ ಮನೆತನದವರಾದ ಪ್ರತೀಕ ಹುಯಿಲಗೋಳ ಹಾಗೂ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ನಾರಾಯಣರಾಯರ ಪುತ್ಥಳಿಗೆ ಗೌರವ ಪೂರ್ವಕ ಮಾಲಾರ್ಪಣೆ ಮಾಡಿದರು. ಪ್ರೊ. ಅನಿಲ ವೈದ್ಯ, ರವೀಂದ್ರ ಜೋಶಿ, ಆರ್.ಎಸ್. ಕುಲಕರ್ಣಿ, ಡಾ. ಬಿ.ಎಲ್. ಚವ್ಹಾಣ, ಶ್ರೀಧರ ಕುಲಕರ್ಣಿ, ವಿಶ್ವನಾಥ ಬೇಂದ್ರೆ, ಮೆಣಸಿನಕಾಯಿ, ಎಸ್.ಎಂ. ಕಾತರಕಿ, ಕಟಾರಿಯಾ, ಶಶಿಧರ ಹೊಸಳ್ಳಿ, ಪ್ರೊ. ವಿ.ಪಿ. ಪಾಟೀಲ, ಪ್ರೊ. ಎಸ್.ಜಿ. ಚನ್ನಪ್ಪಗೌಡರ, ಬಾಪುರೆ ಇದ್ದರು. ಡಾ. ದತ್ತಪ್ರಸನ್ನ ಪಾಟೀಲ ವಂದಿಸಿದರು. ೫ಜಿಡಿಜಿ೭ ಗದಗ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಹುಯಿಲಗೋಳ ನಾರಾಯಣರಾವ್ ಜಯಂತಿ ಆಚರಿಸಲಾಯಿತು.