ಬೆಂಗಳೂರು : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಅಡಿ ಸಹಾಯಧನ ಪಡೆಯುತ್ತಿದ್ದವರಲ್ಲಿ 1.95 ಲಕ್ಷ ಫಲಾನುಭವಿಗಳು ಮೃತಪಟ್ಟಿದ್ದರೂ ಅವರಿಗೆ ಹಣ ಪಾವತಿಸುತ್ತಿರುವುದು ಪತ್ತೆಯಾಗಿದೆ. ಪತ್ತೆಯಾಗಿರುವ ಮೃತ ಫಲಾನುಭವಿಗಳ ವಿವರ ಪಡೆದು ಅವರನ್ನು ಪಟ್ಟಿಯಿಂದ ತೆಗೆದುಹಾಕಿ, ಹಣ ಪಾವತಿ ಸ್ಥಗಿತಗೊಳಿಸಲಾಗಿದೆ.
ಪಂಚ ಗ್ಯಾರಂಟಿಗಳ ಪೈಕಿ ಅನರ್ಹರಿಗೆ ಲಾಭವಾಗುವುದನ್ನು ತಡೆದು, ಅರ್ಹರಿಗೆ ಮಾತ್ರ ಯೋಜನೆಯ ನೆರವು ನೀಡುವ ಉದ್ದೇಶದೊಂದಿಗೆ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ನಿರ್ಧರಿಸಲಾಗಿದೆ. ಅದರಲ್ಲಿ ಮೊದಲಿಗೆ ಗೃಹ ಲಕ್ಷ್ಮೀ ಯೋಜನೆ ಅಡಿ ಮೃತರು ಮತ್ತು ತೆರಿಗೆ ಪಾವತಿದಾರರು ಸಹಾಯಧನ ಪಡೆಯುತ್ತಿರುವುದನ್ನು ಪತ್ತೆ ಮಾಡಲಾಗಿದೆ. ಅದರಂತೆ 2026ರ ಮಾರ್ಚ್ ಅಂತ್ಯದ ವೇಳೆಗೆ 1.95 ಲಕ್ಷ ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮೀ ಹಣ ಪಾವತಿಸಿರುವುದು ಪತ್ತೆಯಾಗಿದೆ. ಇದೀಗ ಮೃತ ಫಲಾನುಭವಿಗಳ ವಿವರ ಪಡೆದು, ಅವರ ಬ್ಯಾಂಕ್ ಖಾತೆಗೆ ಹಣ ಪಾವತಿ ಸ್ಥಗಿತಗೊಳಿಸಿ ಸರ್ಕಾರ ಕ್ರಮ ಕೈಗೊಂಡಿದೆ.
ಬೆಳಗಾವಿಯಲ್ಲೇ ಅತಿಹೆಚ್ಚು:
ಗೃಹಲಕ್ಷ್ಮೀ ಹಣ ಸಂದಾಯವಾಗುತ್ತಿದ್ದ ಮೃತ ಫಲಾನುಭವಿಗಳ ಪೈಕಿ ಬೆಳಗಾವಿಯಲ್ಲೇ ಅತಿಹೆಚ್ಚು ಮೃತ ಫಲಾನುಭವಿಗಳು ಪತ್ತೆಯಾಗಿದ್ದು, ಅವರ ಖಾತೆಗೆ ಸರ್ಕಾರದಿಂದ ಹಣ ಪಾವತಿಯಾಗಿದೆ. ಬೆಳಗಾವಿಯಲ್ಲಿ 15850, ಬೆಂಗಳೂರು ನಗರ 14038, ತುಮಕೂರು 12139, ಮೈಸೂರು 11541 ಮೃತ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಮಾಡಲಾಗಿದೆ.
ಅರ್ಹರಿಗೆ ತಲುಪಿಸುವುದಷ್ಟೇ ಗುರಿ:
ಈ ಕುರಿತು ಮಾಹಿತಿ ನೀಡಿರುವ ವಿಧಾನಪರಿಷತ್ ಸದಸ್ಯ ಮತ್ತು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಗೃಹಲಕ್ಷ್ಮೀ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಅಂಥ ಉದ್ದೇಶ ಸರ್ಕಾರಕ್ಕೆ ಇಲ್ಲ. ಆದರೆ, ಅನರ್ಹರು ಯೋಜನೆಯ ಲಾಭ ಪಡೆಯುತ್ತಿರುವುದನ್ನು ತಪ್ಪಿಸಲು ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಅದರ ದುರುಪಯೋಗ ತಡೆದು, ಅರ್ಹರಿಗೆ ಮಾತ್ರ ಯೋಜನೆ ಲಾಭ ತಲುಪಿಸುವ ಸಲುವಾಗಿ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಅದನ್ನು ಹೊರತುಪಡಿಸಿ ಯೋಜನೆ ಸ್ಥಗಿತಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ. ರಾಜ್ಯದ 1.24 ಕೋಟಿಗೂ ಹೆಚ್ಚಿನ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು ತಲಾ 2 ಸಾವಿರ ರು. ಗೃಹಲಕ್ಷ್ಮೀ ಹಣ ಪಾವತಿಸಲಾಗುತ್ತಿದೆ.
ಇತ್ತೀಚೆಗೆ ಫಲಾನುಭವಿಗಳ ಪಟ್ಟಿ ಪರಿಶೀಲಿಸಿದಾಗ 1.95 ಲಕ್ಷ ಯಜಮಾನಿಯರು ಮರಣ ಹೊಂದಿದ್ದು, ತಾಂತ್ರಿಕ ಕಾರಣಗಳಿಂದ ಅವರ ಬ್ಯಾಂಕ್ ಖಾತೆಗೂ ಹಣ ಸಂದಾಯವಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿಯ ದುರುಪಯೋಗ ತಡೆಯಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಮೃತಪಟ್ಟವರ ಬ್ಯಾಂಕ್ ಖಾತೆಗೆ ಹಣ ಪಾವತಿ ತಡೆಯಲು ಮತ್ತು ಅರ್ಹರಿಗೆ ಯೋಜನೆ ತಲುಪುವಂತೆ ಮಾಡಲು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಿಖಿತ ಮನವಿ ಸಲ್ಲಿಸಿ, ಫಲಾನುಭವಿಗಳ ಜೀವಿತ ಪ್ರಮಾಣಪತ್ರ ಕಡ್ಡಾಯಗೊಳಿಸುವಂತೆ ಕೋರಿದ್ದೆ. ಅದೇ ರೀತಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ, ಲೋಪ ಸರಿಪಡಿಸಿ, ಮೃತ ಮತ್ತು ಅನರ್ಹರನ್ನು ಯೋಜನೆಯಿಂದ ಹೊರಗಿಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೆ. ಅದರಂತೆ ಇದೀಗ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಯಾಗುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಮತ್ತು ಗೃಹಲಕ್ಷ್ಮೀ ಹಣ ಅವರಿಗೆ ಪಾವತಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೃತ ಫಲಾನುಭವಿಗಳ ವಿವರ:
ಜಿಲ್ಲೆ ಸಂಖ್ಯೆ
ಬಾಗಲಕೋಟೆ 5907
ಬಳ್ಳಾರಿ 3415
ಬೆಳಗಾವಿ 15850
ಬೆಂಗಳೂರು ಗ್ರಾಮಾಂತರ 3911
ಬೆಂಗಳೂರು ನಗರ 14038
ಬೀದರ್ 4063
ಚಾಮರಾನಗರ 4739
ಚಿಕ್ಕಬಳ್ಳಾಪುರ 5358
ಚಿತ್ರದುರ್ಗ 6543
ದಕ್ಷಿಣ ಕನ್ನಡ 6159
ದಾವಣಗೆರೆ 5926
ಧಾರವಾಡ 5628
ಗದಗ 3868
ಹಾಸನ 8033
ಹಾವೇರಿ 5905
ಕಲಬುರಗಿ 6408
ಕೊಡಗು 2193
ಕೋಲಾರ 5615
ಕೊಪ್ಪಳ 4475
ಮಂಡ್ಯ 9168
ಮೈಸೂರು 11541
ರಾಯಚೂರು 5181
ರಾಮನಗರ 5713
ಶಿವಮೊಗ್ಗ 6409
ತುಮಕೂರು 12139
ಉಡುಪಿ 4311
ಉತ್ತರಕನ್ನಡ 5546
ವಿಜಯನಗರ 3825
ವಿಜಯಪುರ 5540
ಯಾದಗಿರಿ 2775
ಒಟ್ಟು 195224
ನಮ್ಮಲ್ಲಿ ಮಾತ್ರ
ಮೃತರು, ತೆರಿಗೆ ಪಾವತಿದಾರರನ್ನು ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯಾದ್ಯಂತ ಹೊರಗೆ ಹಾಕುತ್ತಿರುವ ಕುರಿತು ‘ಕನ್ನಡಪ್ರಭ’ ಮಾತ್ರ ನಿನ್ನೆ ವರದಿ ಮಾಡಿತ್ತು.
